Kundapra.com ಕುಂದಾಪ್ರ ಡಾಟ್ ಕಾಂ

ಎ.13: ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವರ ಬ್ರಹ್ಮರಥೋತ್ಸವ

ಹೆಮ್ಮಾಡಿ: ಇಲ್ಲಿನಪುರಾತನ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನವು ಉಡುಪಿ ಜಿಲ್ಲೆಯ ಧಾರ್ಮಿಕ, ಐತಿಹಾಸಿಕ ಮಹತ್ವದ ದೇವಾಲಯಗಳಲ್ಲೊಂದಾಗಿದೆ. ನಂಬಿದ ಭಕ್ತರ ರಕ್ಷಣೆ, ಬೆಳವಣಿಗೆ, ಸಂತಾನ ಪ್ರಾಪ್ತಿ ಮತ್ತು ಸಕಲ ಆಶೋತ್ತರಗಳನ್ನು ಈಡೇರಿಸುವ ಮಹಾನ್ ಚೈತ್ಯಮೂರ್ತಿ ಶ್ರೀಲಕ್ಷ್ಮೀನಾರಾಯಣ ದೇವರ ದಿವ್ಯ ಸನ್ನಿಧಿಯಲ್ಲಿ ಸಂಭ್ರಮದ ವಾರ್ಷಿಕ ಶ್ರೀಮನ್ಮಹಾರಥೋತ್ಸವ ಎಪ್ರಿಲ್ 13ರಂದು ಸಂಪನ್ನಗೊಳ್ಳುತ್ತಿದೆ.

ಶ್ರೀಮನ್ಮಹಾರಥೋತ್ಸವದ ಅಂಗವಾಗಿ ಏಪ್ರಿಲ್ 8ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಎ. 12ರಂದು ಪ್ರಾಕಾರಶುದ್ಧಿ, ಕಲಶಾಭಿಷೇಕ, ಹೋಮ, ಮಹಾ ನೈವೇದ್ಯ, ಬ್ರಾಹ್ಮಣ ಸಂತರ್ಪಣೆ, ಸಂಜೆ ಹೆಮ್ಮಾಡಿ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ, ರಾತ್ರಿ ಹಿರೆರಂಗಪೂಜೆ. ಎ. 13ರಂದು ಪ್ರಾಕಾರಶುದ್ಧಿ, ಕಲಶಾಭಿಷೇಕ, ಹೋಮ, ರಥಶುದ್ಧ, ಮಹಾಮಂಗಳಾರತಿ, ರಥಬಲಿ, ಅಭಿಜಿನ್ ಸುಮುಹೂರ್ತದಲ್ಲಿ ರಥಾರೋಹಣ, ರಥಕಾಣಿಕೆ, ರಥಚಲನೆ ಹಾಗೂ ಮಹಾಅನ್ನಸಂತರ್ಪಣೆ. ಸಂಜೆ 5 ಗಂಟೆಗೆ ರಥ ಅವರೋಹಣ, ರಾತ್ರಿ ಭೂತಬಲಿ, ಶಯನೋತ್ಸವ. ಎ. 14ರಂದು ದೇವರನ್ನು ಏಳಿಸುವುದು, ಸಂಪೂರ್ಣ ಅಷ್ಟಾವಧಾನ, ಅಂಕುರ ಪ್ರಸಾದ ವಿತರಣೆ, ತುಲಾಭಾರ ಸೇವೆ, ರಾತ್ರಿ ಓಕುಳಿಸೇವೆ. ಎ. 15ರಂದು ಅವಭೃತ ಸ್ನಾನ, ಮೃಗಯಾನ, ಹೊಳೆಯಾನ, ಹೆಮ್ಮಾಡಿ ಗ್ರಾಮದಲ್ಲಿ ಕಟ್ಟೆ ಉತ್ಸವ, ಧ್ವಜ ಅವರೋಹಣ, ಯಾಗ ಪೂರ್ಣಾಹುತಿ, ಸಂಪ್ರೋಕ್ಷಣ್ಯ ಮಹಾ ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ದೇವಳದ ತಂತ್ರಿ ಕೋಟ ವಿಘ್ನೇಶ್ವರ ಸೋಮಯಾಜಿ ಮತ್ತು ಪ್ರಧಾನ ಅರ್ಚಕ ನರಸಿಂಹಮೂರ್ತಿ ಹೊಳ್ಳ ಅವರ ನೇತೃತ್ವದಲ್ಲಿ ಜರಗಲಿವೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್‌ಕುಮಾರ್ ಭಟ್ ಅವರು ತಿಳಿಸಿದ್ದಾರೆ.

Exit mobile version