Kundapra.com ಕುಂದಾಪ್ರ ಡಾಟ್ ಕಾಂ

ರಾಜಕಾರಣದ ಬಗೆಗಿನ ನಿರೀಕ್ಷೆಗಳು ಬದಲಾಗಬೇಕು: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಪ್ರಜಾಪ್ರಭುತ್ವದಲ್ಲಿ ಸಾಮಾನ್ಯನೂ ಕೂಡ ಬಹುಮುಖ್ಯ. ಅವರ ಆಶೋತ್ತರಗಳನ್ನು ಈಡೇರಿಸುವುದು ರಾಜಕಾರಣಿಗಳ ಮುಖ್ಯ ಗುರಿಯಾಗಬೇಕು. ದುರಾದೃಷ್ಟವಶಾತ್ ಇಂದಿನ ರಾಜಕಾರಣಿಗಳಿಗೆ ಜನಪರ ಕಾಳಜಿಗಿಂತ ಸ್ವಹಿತಾಸಕ್ತಿಗಳೇ ಮುಖ್ಯವಾಗುತ್ತಿವೆ ಎಂದು ವಿಧಾನ
ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವಿಷಾದ ವ್ಯಕ್ತಪಡಿಸಿದರು.

ಆಳ್ವಾಸ್ ನುಡಿಸಿರಿಯ ಎರಡನೇ ದಿನ `ಧರ್ಮ ಮತ್ತು ರಾಜಕಾರಣ: ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ರಾಜಕೀಯ ಕ್ಷೇತ್ರದಲ್ಲಾಗಬೇಕಿರುವ ಬದಲಾವಣೆಗಳ ಬಗ್ಗೆ ಮಾತನಾಡಿದರು. ರಾಜಕೀಯ ಹಾಗೂ ರಾಜಕಾರಣಗಳ ಬಗ್ಗೆ ಜನರ ನಿರೀಕ್ಷೆಗಳು ಬದಲಾಗಬೇಕಿವೆ. ತಾನು ಆಯ್ಕೆ ಮಾಡಿದ ಜನಪ್ರತಿನಿಧಿಯನ್ನು ಪ್ರತಿಯೊಬ್ಬ ಪ್ರಜೆಯೂ ಧೈರ್ಯದಿಂದ ಪ್ರಶ್ನಿಸುವಂತಾಗಬೇಕು. ಅವರ ಯೋಜನೆಗಳು, ಆಶೋತ್ತರಗಳ ಬಗ್ಗೆ ಮುಕ್ತವಾಗಿ ತಿಳಿದುಕೊಳ್ಳುವಂತಾಗಬೇಕು. ಆದರೆ ಇಂದು ಹೆಚ್ಚಿನ ಸಂದರ್ಭಗಳಲ್ಲಿ ತೀರಾ ವೈಯಕ್ತಿಕ ಕುಶಲೋಪರಿಗಳಿಗೆ ರಾಜಕಾರಣಿಗಳ ಹಾಗೂ ಶ್ರೀಸಾಮಾನ್ಯನ ಸಂಬಂಧ ಸೀಮಿತವಾಗುತ್ತಿದೆ. ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಒಬ್ಬ ಪ್ರಬಲ ನಾಯಕನ ಅವಶ್ಯಕತೆ ನಮಗಿದೆ.

ಇಂದಿನ ರಾಜಕಾರಣ, ಚಳುವಳಿಗಳಿಗೆ ಮುಂದೆ ಯಾರಿದ್ದಾರೆಂಬುದು ಮುಖ್ಯವಾಗುವುದಿಲ್ಲ. ಹಿಂದೆ ಯಾರಿದ್ದಾರೆಂಬುದು ಮಾತ್ರ ಮುಖ್ಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

೩೦೦ ಕೈದಿಗಳನ್ನಿಟ್ಟುಕೊಂಡು ವಿಧಾನ ಸಭೆಯನ್ನು ಕಟ್ಟಿದ ಕೆಂಗಲ್ ಹನುಮಂತಯ್ಯ ನಿಜಕ್ಕೂ ಒಬ್ಬ ಮಾದರಿ ರಾಜಕಾರಣಿ. ಅಂದು ವಿಧಾನಸಭೆಯನ್ನು ಕಟ್ಟಿದ ಕೆಂಗಲ್ ಹನುಮಂತಯ್ಯ ಮತ್ತೆ ವಿಧಾನಸಭೆಯನ್ನು ಪ್ರವೇಶಿಸಲಿಲ್ಲ. ಕರ್ನಾಟಕದ ಸುಂದರ ನಾಳೆಗಳನ್ನು ನಿರ್ಮಾಣ
ಮಾಡುವವರಿಗಾಗಿ ಆ ವಿಧಾನಸಭೆಯನ್ನು ಮೀಸಲಾಗಿರಿಸಿದರು. ಇಂತಹ ಉತ್ತಮ ವಿಚಾರಧಾರೆಗಳುಳ್ಳ ನಾಯಕರ ಅವಶ್ಯಕತೆ ನಮಗಿದೆ. ಜನರಿಗೆ ಸೂರಿಲ್ಲವೆಂದು ತಮ್ಮ ಮನೆಯನ್ನು ಬಿಟ್ಟು ಬಂದು ಕೂರುವ, ಅವರಿಗೆ ಮೂಲಭೂತ ಸೌಕರ್ಯಗಳಿಲ್ಲವೆಂದು ತಮಗಿರುವ ಸೌಕರ್‍ಯಗಳನ್ನು
ಬಿಟ್ಟುಕೂರುವ ರಾಜಕಾರಣಿಗಳೆಷ್ಟು ಜನ ಇದ್ದಾರೆ ಎಂದವರು ಪ್ರಶ್ನಿಸಿದರು.

Exit mobile version