Kundapra.com ಕುಂದಾಪ್ರ ಡಾಟ್ ಕಾಂ

ನುಡಿಸಿರಿಯ ಊಟ-ಉಪಹಾರ ಮಾತ್ರ ಭರ್ಜರಿ

ಶಾಂಭವಿ ಎಂ. ಜೆ. | ಕುಂದಾಪ್ರ ಡಾಟ್ ಕಾಂ ವರದಿ
ಮೂಡುಬಿದಿರೆ: ರಾಜ್ಯದ ವಿವಿಧೆಡೆಗಳಿಂದ ನಾಡಿನ ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಸವಿಯಲು ಬರುವವರಿಗಾಗಿ ಬಗೆ ಬಗೆಯ ಉಪಹಾರ, ಭೋಜನ ಸವಿಯುವ ಅವಕಾಶ. ಸಾವಿರಾರು ಜನರಿಗೆ ಎಲ್ಲಿಯೂ ಲೋಪವಾಗದಂತೆ ಸಮಯಕ್ಕೆ ಸರಿಯಾಗಿ ತಯಾರಾಗುವ ಅಡುಗೆ, ಅಚ್ಚುಕಟ್ಟಾಗಿ ಬಡಿಸುವ ತಂಡ. ಜನಸಾಮಾನ್ಯರಿಂದ ಹಿಡಿದು ಅತಿಥಿ ಗಣ್ಯರ ತನಕವೂ ಒಂದೇ ಬಗೆಯ ಊಟ ಉಪಹಾರ. ಇದು ನುಡಿಸಿರಿಯ ವಿಶೇಷತೆ.

ಕಲೆ, ಸಾಹಿತ್ಯ ಸಾಂಸ್ಕೃತಿಕ ಉತ್ಸವವು ಕಣ್ಮನಗಳಿಗೆ ಮುದನೀಡಿದರೇ, ನುಡಿಸಿರಿಯ ಸವಿ ಭೋಜನ ಹೊಟ್ಟೆಯ ಹಸಿವನ್ನು ತಣಿಸುತ್ತೆ. ೧೮೦ ಮಂದಿಯನ್ನೊಳಗೊಂಡ ತಂಡ ಒಂದೇ ಕಡೆ ಅಡುಗೆಯ ತಯಾರಿಸಿದ್ದು, ಬೆಳೆಗ್ಗೆ ಮೂರು ಬಗೆಯ ತಿಂಡಿ ಮತ್ತು ಟಿ-ಕಾಫಿ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಪಲ್ಯ, ಸಾರು, ತೊವೆ, ಗಸಿ, ಸಾಂಬಾರುಗಳನ್ನು ನಾಲ್ಕು ದಿನವೂ ನೀಡಲಾಗುತ್ತದೆ.
ನುಡಿಸಿರಿಯಲ್ಲಿ ಇಡ್ಲಿ ಸಾಂಬಾರು ಶಿರಾ, ಉಪ್ಪಿಟ್ಟು, ಅವಲಕ್ಕಿ, ಚಹಾ, ಕಾಫಿ, ಟೊಮೆಟೊಬಾತ್, ಜೈನ್‌ಕೇಕ್, ಶಾವಿಗೆಬಾತ್, ಅವಲಕ್ಕಿ ತಿಂಡಿಗಳ ಪಟ್ಟಿಯಲ್ಲಿದ್ದು ದಿನದ ಬೆಳಿಗ್ಗೆ ಮೂರು ಬಗೆಯ ತಿಂಡಿಯನ್ನು ಮಾಡಲಾಗುತ್ತಿದೆ.

ಶಿರಾ ಹೊನ್ನಾವರದ ವಿಶೇಷ ಖಾದ್ಯವಾಗಿದ್ದು ಅದನ್ನು ಮಾಡಲು ಅಲ್ಲಿನ ಜನರನ್ನೇ ಕರೆಯಿಸಲಾಗಿದೆ. ಜೈನ ಕೇಕ್ ಮೂಡುಬಿದಿರೆಯ ವಿಶೇಷವಾಗಿದ್ದು ಅದನ್ನು ಭಾನುವಾರದ ತಿಂಡಿಯ ಪಟ್ಟಿಗೆ ಸೇರಿಸಲಾಗಿದೆ. ಒಂದು ದಿನದಲ್ಲಿ ಉಪಹಾರಕ್ಕೆ ೧೫೦೦೦ ಜನ ಉಪಹಾರ ಸೇವಿಸಿದರೆ ಮಧ್ಯಾಹ್ನ ಮತ್ತು ರಾತ್ರಿ ೨೮೦೦೦ ಮಂದಿ ಉಟ ಮಾಡುತ್ತಿದ್ದಾರೆ.

೧೩ವರ್ಷದಿಂದ ನುಡಿಸಿರಿಯಲ್ಲಿ ಅಡುಗೆ ಕಾರ್ಯದ ಜವಾಬ್ದಾರಿ ವಹಿಸಿಕೊಂಡಿರುವ ಶರತ್‌ಕುಮಾರ್ ಜೈನ್ ಅವರೊಂದಿಗಿನ ೧೮೦ ಕೆಲಸಗಾರು ಒಂದು ದಿನದಲ್ಲಿ ೧೮೦೦೦ ಜನರಿಗೆ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿ ಸ್ವಯಂ ಸೇವಕರು ವಿವಿಧ ಕೌಂಟರ್‌ಗಳಲ್ಲಿ ನುಡಿಸಿರಿ ಅಭಿಮಾನಿಗಳು, ಆಹ್ವಾನಿತರು, ಅತಿಥಿಗಳಿಗೆ ವಿವಿಧ ಕೌಂಟರ್‌ಗಳಲ್ಲಿ ಅಚ್ಚುಕಟ್ಟಾಗಿ ಬಡಿಸುತ್ತಾರೆ.

ಜನರಿಗೆ ಯಾವುದೇ ತೊಂದರೆಯಾಗದಲ್ಲಿ ಊಟದ ವ್ಯವಸ್ಥೆಯನ್ನು ಮಾಡಿದ್ದು ಎಲ್ಲಿಯೂ ಅಡುಗೆ ಕಡಿಮೆಯಾಗಿಲ್ಲ ಎನ್ನುತ್ತಾರೆ ಅಡುಗೆ ವಿಭಾಗದ ಮುಖ್ಯಸ್ಥ ಪ್ರಮೋದ್ ಹೆಗ್ಡೆ

Exit mobile version