Kundapra.com ಕುಂದಾಪ್ರ ಡಾಟ್ ಕಾಂ

ವಕ್ವಾಡಿ: ಗುರುಕುಲ ವಿದ್ಯಾಸಂಸ್ಥೆಯಲ್ಲಿ ೧೧ನೇ ವಾರ್ಷಿಕೋತ್ಸವ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ಕೇವಲ ಅಂಕಗಳ ಬಗ್ಗೆ ಮಾತ್ರ ಒತ್ತು ಕೊಡದೆ, ಜೀವನ ಕೌಶಲ್ಯಗಳನ್ನು ಶಾಲಾ ಹಂತಗಳಲ್ಲಿ ಕಲಿತು ಮುಂದಿನ ಸಮಾಜವನ್ನು ನಿರ್ಮಾಣ ಮಾಡುವ ಆಶಾ ಕಿರಣಗಳಾಗಬೇಕು ಎಂದು ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ವಿನಯ ಎನ್ ಹೆಗಡೆ ಅಭಿಪ್ರಾಯಪಟ್ಟರು.

ಅವರು ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ೧೧ನೇ ವಾರ್ಷಿಕೋತ್ಸವ ಸಮಾರಂಭದ ಸಮಾರೋಪದಲ್ಲಿ ಭಾಗವಹಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮಕ್ಕಳ ದೈನಂದಿನ ಹವ್ಯಾಸಗಳು ಕ್ರೀಯಾಶೀಲ ಚಟುವಟಿಕೆಗಳು ಹಾಗೂ ಕೈಗೊಳ್ಳುವ ಕಾರ್ಯಗಳು ಇವೆ ಮುಂತಾದವುಗಳು ತಮ್ಮ ಮುಂದಿನ ಜೀವನ ನಿರ್ಧರಿಸುವಲ್ಲಿ ಗುರುತರವಾಗಲಿದೆ. ಗುರು ಹಿರಿಯರ ಮಾರ್ಗದರ್ಶನ ಆದರ್ಶ ವ್ಯಕ್ತಿಗಳ ವಿಚಾರಧಾರೆಗಳು ಹಾಗೂ ನಿರಂತರ ಪರಿಶ್ರಮ ಈ ಮೂರು ಪ್ರಮುಖ ಗುಣಗಳು ಒಬ್ಬನನ್ನು ಸನ್ಮಾರ್ಗದಲ್ಲಿ ಸಡೆಸಲು ಸಹಾಯಕವಾಗಲಿದೆ ಎಂದು ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಾಂಡ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಬಿ ಅಪ್ಪಣ್ಣ ಹೆಗಡೆ ಮಾತನಾಡಿ ಗುರುಕುಲ ವಿದ್ಯಾಸಂಸ್ಥೆಯು ಅನೇಕ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಒಂದು ಉತ್ತಮ ಸಂಸ್ಥೆಯಾಗಿ ತಾಲೂಕಿನಲ್ಲಿಯೇ ಮುಂಚೂಣಿಯಲ್ಲಿದೆ. ಅಲ್ಲದೇ ಇನ್ನು ಅನೇಕ ಸಮಾಜಮುಖಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶೋತ್ತರವನ್ನು ಹೊಂದಿರುವುದರಿಂದ ಸರ್ವರು ಸಹಕರಿಸಬೇಕಾಗಿ ವಿನಂತಿಸಿದರು.

ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಹಕರುಗಳಾದ ಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ ಶೆಟ್ಟಿ ಮತ್ತು ಸಂಸ್ಥೆಯ ಟ್ರಸ್ಟಿಗಳಲ್ಲೊಬ್ಬರಾದ ಕೆ.ಸುಬ್ಬಣ್ಣ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗುರುಕುಲ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಶಾಯಿಜು.ಕೆ.ಆರ್. ನಾಯರ್ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚೆನ್ನಬಸಪ್ಪರವರು ಕ್ರಮವಾಗಿ ಶಾಲಾ ಹಾಗೂ ಕಾಲೇಜಿನ ವಾರ್ಷಿಕ ವರದಿವಾಚನ ಮಾಡಿದರು.

ಅಕ್ಷರಿ.ಶೆಟ್ಟಿ ಸ್ವಾಗತಿಸಿದರೆ, ಕೃಶಾಲಿ ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು. ಅಲ್ಲದೇ ಆಫ್ರಾ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕ ಕಲಾಸ್ಪಂದನಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

Exit mobile version