Kundapra.com ಕುಂದಾಪ್ರ ಡಾಟ್ ಕಾಂ

ಬೆಂಗಳೂರು: ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ಒಂಭತ್ತನೆ ವಾರ್ಷಿಕೋತ್ಸವ

ಆಡು ಭಾಷೆ ಉಳಿಸಿಕೊಳ್ಳುವುದೇ ನಮ್ಮೆದುರಿನ ಸವಾಲು: ರವಿ ಬಸ್ರೂರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಶಾಪಿಂಗ್ ಮಾಲುಗಳ ರೀತಿಯಲ್ಲಿ ಸಾಂಸ್ಕೃತಿಕ ಸಂಕೀರ್ಣಗಳು ಹುಟ್ಟಿಕೊಳ್ಳುವುದರ ಜೊತೆಗೆ ಸಾಂಸ್ಕೃತಿಕ ಪ್ರವಾಸೋದ್ಯಮ ಹೆಚ್ಚಾದಾಗ ಮಾತ್ರ ಸಾಂಸ್ಕೃತಿಕ ಅನನ್ಯತೆ ಹಾಗೂ ಸಂಸ್ಕೃತಿಯ ಉಳಿವು ಸಾಧ್ಯವಿದೆ ಎಂದು ಉದಯವಾಣಿ ಸಮೂಹ ಸಂಪಾದಕ ರವಿ ಹೆಗಡೆ ಹೇಳಿದರು. ಅವರು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಭವನದಲ್ಲಿ ಜರುಗಿದ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ಒಂಭತ್ತನೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತನಾಡಿ ಇಂದಿನ ‘ವೇಷ ಭೂಷಣಗಳಿಂದ ವ್ಯಕ್ತಿಯ ಭೌಗೋಳಿಕ ಮೂಲವನ್ನು ಗುರುತಿಸುವುದು ಕಷ್ಟವಾಗುವಷ್ಟು ನಾವು ಬದಲಾಗಿದ್ದೇವೆ. ಆದರೆ ನಮ್ಮಲ್ಲಿ ಅಳಿಯದೆ ಉಳಿದಿರುವುದು ಹುಟ್ಟೂರಿನ ಆಡು ಭಾಷೆ ಮಾತ್ರ. ಅದನ್ನು ಉಳಿಸಿಕೊಂಡು ಗಟ್ಟಿಯಾಗಿ ಬೇರೂರುವಂತೆ ಮಾಡುವುದೇ ನಮ್ಮೆದುರಿನ ಸವಾಲು ಎಂದರು.

ಕಾರ್ಯಕ್ರಮದಲ್ಲಿ ನಮ್ಮೂರ ಹಬ್ಬ 2017 ರ ಪೋಸ್ಟರ್ ಬಿಡುಗಡೆ, ಹಿಂದಿನ ವರ್ಷದ ಕಾರ್ಯಕ್ರಮದ ಸಿಡಿ ಹಾಗೂ ವೆಬ್ಸೈಟ್ ಲೋಕಾರ್ಪಣೆಗೊಳಿಸಲಾಯಿತು. ಸೃಜನ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಆಯ್ದ ಭಾವಗೀತೆಗಳ ಗಾಯನ ನಡೆಯಿತು.

ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ಒಂಭತ್ತು ವರ್ಷಗಳ ಪಯಣದ ಹಾದಿಯನ್ನು ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಎನ್. ಕಾಂಚನ್ ಅವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ವಿವರಿಸಿದರು. ನಮ್ಮೂರ ಹಬ್ಬದ ಸಂಚಾಲಕರಾದ ಬೇಳೂರು ರಾಘವೇಂದ್ರ ಶೆಟ್ಟಿ ಹಾಗು ಉದ್ಯಮಿ ಗಣೇಶ್ ರಾವ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ನವಿತಾ ಜೈನ ಕಾರ್ಯಕ್ರಮವನ್ನು ನಿರೂಪಿಸಿದರು. ಅಭಿನಂದನ ಸಾಂಸ್ಕೃತಿಕ ಟ್ರಸ್ಟ್’ನ ಸದಸ್ಯರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Abhinandana Trust 9th anniversary celebrated in Bangalore. Udayavani group Editor Ravi Hegde lighting up lamp , Music director Ravi Basrur, Businessmen Ganesh Rao were guest, Abhinandana Trust President Raghavendra Kanchan, Nammura Habba coordinator Belooru Raghavendra Shetty and members were presented. 

Exit mobile version