Kundapra.com ಕುಂದಾಪ್ರ ಡಾಟ್ ಕಾಂ

ಅಧ್ಯಯನದಿಂದ ಮಾತ್ರ ಹೊಸ ಸಾಹಿತ್ಯ ಸೃಷ್ಟಿ: ಹನಿಗವಿ ದುಂಡಿರಾಜ್

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಧ್ಯಯನದಿಂದ ಮಾತ್ರ ಹೊಸ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯವಿದೆ. ಸಾಹಿತ್ಯದಲ್ಲಿ ಹಾಸ್ಯ ಮಾರ್ಗವಾಗಿರಬೇಕೇ ಹೊರತು ಹಾಸ್ಯಕ್ಕೆ ಗುರಿಯಾಗಿರಬಾರದು. ಹಾಸ್ಯದ ಮೂಲಕ ಕಟು ಸತ್ಯವನ್ನು ದಾಟಿಸಬಹುದು. ಹೀಗಾಗಿ ಯುವಜನರು ಸಾಹಿತಿಗಳು ಮತ್ತು ಕವಿಗಳು ವಿಭಿನ್ನವಾಗಿ ಆಲೋಚಿಸಬೇಕು. ಕವಿತೆಗಳು ಹೊಸತನದಿಂದ ಕೂಡಿರಬೇಕು ಎಂದು ಖ್ಯಾತ ಚುಟುಕು ಸಾಹಿತಿ ಎಚ್.ದುಂಡಿರಾಜ್ ಹೇಳಿದರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಸಾಹಿತ್ಯ ವೇದಿಕೆ ಮತ್ತು ಗಂಗೊಳ್ಳಿ ಯು. ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಸಹಭಾಗಿತ್ವದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಜರಗಿದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಸವಿ ನುಡಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ ಅಂಕಗಳಿಸುದಷ್ಟೇ ಶಿಕ್ಷಣಕ್ಕೆ ಸೀಮಿತವಾಗಿ ಮಕ್ಕಳನ್ನು ಬೆಳೆಸಲಾಗುತ್ತಿದೆ. ಇಂತಹ ಒತ್ತಡದ ಪ್ರಪಂಚದಲ್ಲಿ ಸಾಹಿತ್ಯ ಕಲೆ ಮೊದಲಾದ ಕ್ಷೇತ್ರಗಳಲ್ಲಿ ಮಕ್ಕಳನ್ನು ಬೆಳೆಸುವ ಅವರನ್ನು ಪ್ರೋತ್ಸಾಹಿಸುವ ಕೆಲಸಕಾರ್ಯ ಮಾಡಬೇಕು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಕ್ಕಳ ವಿಕಸನದ ಜೊತೆಗೆ ಸಮಾಜದಲ್ಲಿ ಗುರುತಿಸಲ್ಪಡುವ ಸಾಧನೆ ಸಾಹಿತ್ಯದ ಮೂಲಕ ಆಗುತ್ತದೆ ಎಂದರು.

ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿನಿ ಜಯಲಕ್ಷ್ಮಿ ಸಕ್ಲಾತಿ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೋಟದ ಮತ್ಸ್ಯೋದ್ಯಮಿ ಸಿ.ಆನಂದ್ ಕುಂದರ್, ಪತ್ರಕ ಯು.ಎಸ್. ಶೆಣೈ, ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ|ಕಾಶೀನಾಥ ಪೈ, ಶಾಲೆಯ ಸಂಚಾಲಕ ಎನ್. ಸದಾಶಿವ ನಾಯಕ್, ಜಿಎಸ್‌ವಿಎಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎಚ್.ಗಣೇಶ ಕಾಮತ್ ಶುಭ ಹಾರೈಸಿದರು. ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಭಾರ ಉಪಪ್ರಾಂಶುಪಾಲ ಕೆ.ಸದಾನಂದ ವೈದ್ಯ, ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಾಯಿಪ್ರಸಾದ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿಯರಾದ ಸಹನಾ ಕಾರ್ಯಕ್ರಮ ನಿರೂಪಿಸಿದರು. ಸುಪ್ರೀತಾ ನಾಯಕ್ ವಂದಿಸಿದರು.

Exit mobile version