ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಂಸ್ಕೃತಿಕ ಜಗತ್ತನ್ನು ೬೪ ಕಲೆಗಳು ಶ್ರೀಮಂತಗೊಳಿಸಿದಂತೆ ಜನಪದ, ಗ್ರಾಮೀಣ ಕಲೆಗಳಲ್ಲಿ ಒಂದಾದ ಯಕ್ಷಗಾನ ಗೊಂಬೆಯಾಟದ ತವರೂರು ಉಪ್ಪಿನಕುದ್ರುವಿನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದೆ. ಅಂತಹ ಗೊಂಬೆಮನೆಯಲ್ಲಿ ನಟರಾಜನ ಸ್ಥಾಪನೆಯಾಗಿರುವುದು ಸಂತಸದ ಸಂಗತಿ. ಸುದೀರ್ಘ ಇತಿಹಾಸ ಹೊಂದಿರುವ ಕಲೆ ಇನ್ನಷ್ಟು ಸಮೃದ್ಧಗೊಳ್ಳಲಿ ಎಂದು ಸಿಂಡಿಕೇಟ್ ಬ್ಯಾಂಕ್ನ ಫೀಲ್ಡ್ ಜನರಲ್ ಮೆನೇಜರ್ ಸತೀಶ್ ಕಾಮತ್ ಹೇಳಿದರು.
ಅವರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ನಟರಾಜ ವಿಗ್ರಹದ ಅನಾವರಣ ಮಾಡಿ ಶುಭಹಾರೈಸಿದರು. ಪರಂಪರಾಗತವಾಗಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಅದರ ಹಿಂದಿನ ಕಲಾವಿದರ, ಯಜಮಾನನ ಪರಿಶ್ರಮ ಅಪರಿಮಿತವಾದುದು. ಭಾಸ್ಕರ ಕೊಗ್ಗ ಕಾಮತ್ರು ಯಕ್ಷಗಾನ ಗೊಂಬೆಯಾಟ ಬೆಳವಣಿಗೆಗೆ ತಮ್ಮನ್ನು ಮುಡಿಪಾಗಿಸಿಕೊಂಡು ಸಾಗುತ್ತಿರುವ ಕಾರ್ಯ ಅಭಿನಂದನೀಯ. ಇಂತಹ ಕಲೆಯನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಿದಾಗ ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಬೆಳಗಲು ಸಾಧ್ಯ ಎಂದು ನುಡಿದರು.
ತಿಂಗಳ ಕಾರ್ಯಕ್ರಮದ ಅಂಗವಾಗಿ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನವನ್ನು ಪ್ರಾಯೋಜಿಸಿದ ಸುರೇಶ್ ಕಾರಂತ್ ಉಪ್ಪಿನಕುದ್ರು ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಮೆನೇಜರ್ ಬಾಬುರಾಯ ಶೆಣೈ, ಹಿರಿಯ ಯಕ್ಷಗಾನ ಗೊಂಬೆಯಾಟ ಕಲಾವಿದ ವಾಮನ ಪೈ ಉಪಸ್ಥಿತರಿದ್ದರು.
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಸ್ವಾಗತಿಸಿದರು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿ, ರಾಜೇಂದ್ರ ಪೈ ವಂದಿಸಿದರು. ಉದಯ ಭಂಡಾರ್ಕಾರ್ ಸಹಕರಿಸಿದರು. ಬಳಿಕ ಪ್ರಸಿದ್ಧ ಯಕ್ಷಗಾನ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯ ಅವರಿಂದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ನಡೆಯಿತು.