Kundapra.com ಕುಂದಾಪ್ರ ಡಾಟ್ ಕಾಂ

ಪಂಜರದಲ್ಲಿ ಮೀನು ಕೃಷಿ ಮಾಹಿತಿ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯದಲ್ಲಿ ೨೦೧೨ರಿಂದ ಪಂಜರದಲ್ಲಿ ಮೀನು ಸಾಕಣಿಕೆ ನಡೆಯುತ್ತಿದ್ದು, ಕೃಷಿಕರು ಮೀನು ಸಾಕಣಿಕೆ ಹೆಚ್ಚಿನ ಒತ್ತನ್ನು ನೀಡಿ ಅದನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿ ಎಂದು ಕರಾವಳಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಸಿ.ಕೆ. ಮೂರ್ತಿ ಹೇಳಿದರು.

ಜಿಲ್ಲಾ ಪಂಚಾಯತ್ ಉಡುಪಿ ಮತ್ತು ಮೀನುಗಾರಿಕಾ ಇಲಾಖೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಉಪ್ಪುಂದ ನಾಡದೋಣಿ ಭನವದಲ್ಲಿ ನಡೆದ ಪಂಜರದಲ್ಲಿ ಮೀನು ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷ ದೇಶದಲ್ಲಿ ೩೩ ಸಾವಿರ ಕೋಟಿ ರೂ. ಸಿಗಡಿ ರಫ್ತು ಮಾಡಲಾಗಿದೆ, ಇದರಲ್ಲಿ ಸಿಂಹಪಾಲು ಉತ್ಪಾದನೆ ಆಂಧ್ರ, ಕೇರಳ ರಾಜ್ಯದಿಂದ ಆಗಿದ್ದು, ಸೌಲಭ್ಯ ಕೊರತೆಯಿಂದ ನಮಗೆ ಸ್ವಲ್ಪಮಟ್ಟಿಗೆ ಹಿನ್ನೆಡೆಯಾಯಿತು. ವೈಜ್ಞಾನಿಕ ಸಂಬಂಧದೊಂದಿಗೆ ಸೀಕೇಜ್ ಕೃಷಿ ಮಾಡಿ ಫಲಕಾರಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಸಿಗಡಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಪಂಜರದಲ್ಲಿ ಮೀನು ಸಾಕಣಿಕೆಗೆ ಕೇಂದ್ರ, ರಾಜ್ಯ ಹಾಗೂ ನ್ಯಾಷನಲ್ ಫೀಶರಿಸ್ ಬೋರ್ಡ್ ಹೆಚ್ಚಿನ ಅನುದಾನ ಒದಗಿಸಿ ಕೃಷಿಕರಿಗೆ ನಾನಾ ಸೌಲಭ್ಯ ನೀಡುತ್ತಿದ್ದು, ಮೀನುಗಾರರು ಇದರ ಪ್ರಯೋಜನ ಪಡೆಯಬೇಕು ಎಂದರು.

ಕಡಲ ತೀರದಲ್ಲಿ ವಾಸಿಸುವ ರೈತರು ತಮ್ಮ ಮನೆಯ ಹತ್ತಿರದಲ್ಲಿ ಸಮುದ್ರದ ನೀರು ಬಂದು ಹೋಗುವ ನದಿ ತೀರಗಳಲ್ಲಿ ಪಂಜರ ನಿರ್ಮಿಸಿ ಮೀನುಕೃಷಿ ಮಾಡಬಹುದು. ಇದಕ್ಕಿಂತ ವಿಭಿನ್ನ ಆಲೋಚನೆಗಳು ಕೃಷಿಕರಲ್ಲಿದ್ದು, ಸರಿಯಾದ ಮಾಹಿತಿ, ಸಲಹೆ, ಸೂಚನೆಗಳನ್ನು ಕೊಟ್ಟರೆ ಅಥವಾ ಚರ್ಚಿಸಿದರೆ ಅದನ್ನು ಸರಕಾರದ ಮೂಲಕ ರೂಪರೇಷೆಗಳನ್ನು ಸಿದ್ಧಪಡಿಸಿ ಹೆಚ್ಚು ಲಾಭದಾಯಕ ಎಂಬುವುದು ಕಂಡುಬಂದರೆ ಕಾರ್ಯರೂಪಕ್ಕೆ ತರಬಹುದು ಎಂದರು.

ಉಪ್ಪುಂದ ಗ್ರಾಪಂ ಅಧ್ಯಕ್ಷೆ ದುರ್ಗಮ್ಮ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ನವೀನಚಂದ್ರ ಉಪ್ಪುಂದ, ಅಧ್ಯಕ್ಷ ಸೋಮಶೇಖರ ಖಾರ್ವಿ ಮರವಂತೆ, ವಿಜ್ಞಾನಿ ಡಾ. ಪ್ರತಿಭಾ ರೋಹಿತ್, ಬಂದರು ಇಲಾಖೆ ಜಂಟಿ ನಿರ್ದೇಶಕ ಗಣಪತಿ ಭಟ್ ಕೆ, ಮಂಗಳೂರು ಡಿಡಿಎಫ್ ಮಹೇಶ್ ಕುಮಾರ್, ಮೀನುಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಪಾಶ್ವನಾಥ, ಸಂಪನ್ಮೂಲ ವ್ಯಕ್ತಿ ವಿಜ್ಞಾನಿ ಡಾ. ರಾಜ್, ಪಂಜರ ಕೃಷಿಕರಾದ ರವೀಂದ್ರ ಖಾರ್ವಿ, ಬಾಬು ಖಾರ್ವಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಜ್ಞಾನಿಗಳಿಂದ ಪಂಜರ ಮೀನು ಸಾಕಣಿಕೆಯ ಬಗ್ಗೆ ಮಾಹಿತಿ ನೀಡಲಾಯಿತು. ಮೀನುಗಾರಿಕಾ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಿರೂಪಿಸಿದರು.

Exit mobile version