Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಕೊಡಿ ಹಬ್ಬದ ಧಾರ್ಮಿಕ ಕಾರ್ಯಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಪ್ಪುಂದ: ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಡಿ.೦೯ರಿಂದ ಡಿ.೧೬ರ ವರೆಗೆ ನಡೆಯಲಿದ್ದು, ದೇವಸ್ಥಾನದಲ್ಲಿ ಧ್ವಜಾರೋಹಣದೊಂದಿಗೆ ಕೊಡಿಹಬ್ಬಕ್ಕೆ ಚಾಲನೆ ನೀಡಿದ್ದು, ಡಿ.೧೪ರಂದು ಬುಧವಾರ ಮನ್ಮಾಹಾರಥೋತ್ಸವ ಜರುಗಲಿದೆ.

ಗೋಕರ್ಣದ ತಂತ್ರಿ ವೇದಮೂರ್ತಿ ಶ್ರೀನಿವಾಸ ಅಡಿಗ ನೇತೃತ್ವದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಹಾಸಂಕಲ್ಪ, ಪುಣ್ಯಾಹ: ನಾಂದಿ, ವಾಹನ ಅದಿವಾಸ, ಅಸ್ತ್ರ ಹೋಮದೊಂದಿಗೆ ಇತರ ಧಾರ್ಮಿಕ ವಿಧಿವಿಧಾನವನ್ನು ನೆರವೆರಿಸಲಾಯಿತು. ಕೊಡಿಮರವನ್ನು ಧ್ವಜಸ್ಥಂಬಕ್ಕೆ ನಿಲ್ಲಿಸಿ ಸಿಂಹದ ಪಟವನ್ನು ಏರಿಸಿ ಧ್ವಜಬಲಿ ಮಾಡುವ ಮೂಲಕ ವಿದ್ಯುಕ್ತವಾಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಳದ ಪ್ರದಾನ ಅರ್ಚಕ ವೇದಮೂರ್ತಿ ಪ್ರಕಾಶ ಉಡುಪ, ಶಂಕರನಾರಾಯಣ ಪುರಾಣಿಕ, ಗೋಪಾಲಕೃಷ್ಣ ಜೋಷಿ, ಶೇಷಪ್ಪ ಅಡಿಗ, ರಮೇಶ ಉಡುಪ, ಪೂಜಾಕಾರ್ಯಕ್ಕೆ ಸಹಕರಿಸಿದರು, ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ ಹಾಗೂ ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಜಿ ಗೌರಯ್ಯ, ಕಾರ್ಯನಿರ್ವಹಣಾಧಿಕಾರಿ ಬಿ. ಅಣ್ಣಪ್ಪ, ಜಿಪಂ ಸದಸ್ಯ ಸುರೇಶ ಬಟವಾಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ ಬಿಜೂರು, ಖಂ.ರೈ.ಸೇ.ಸ ಸಂಘದ ನಿರ್ದೇಶಕ ಮೋಹನ ಪೂಜಾರಿ, ಗ್ರಾಪಂ ಸದಸ್ಯರಾದ ಅರೆಹಾಡಿ ಮಂಜು ದೇವಾಡಿಗ, ಯು ಸಂದೇಶ ಭಟ್, ಹಿರಿಯರಾದ ದೀಟಿ ಸೀತಾರಾಮ ಮಯ್ಯ, ಗ್ರಾಮಸ್ಥರು, ದೇವಳದ ಸಿಬ್ಬಂದಿಯವರು ಉಪಸ್ಥಿತರಿದ್ದರು.

Exit mobile version