Kundapra.com ಕುಂದಾಪ್ರ ಡಾಟ್ ಕಾಂ

ಶ್ರೀಕೃಷ್ಣನ ಅಮೃತ ಸದೃಶ ವಾಕ್ಯ ಪಾಲನೆಯಿಂದ ಜೀವನದಲ್ಲಿ ಸತ್ಫಲ: ಶ್ರೀ ನೃಸಿಂಹಾಶ್ರಮ ಸ್ವಾಮೀಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮ ನಿರ್ಮಾಣವನ್ನು ನಾವು ಮಾಡಿಕೊಳ್ಳಲು ಭಗವದ್ಗೀತೆ ಅಭಿಯಾನವೊಂದು ಮೆಟ್ಟಿಲಾಗಿದೆ. ಭಗವದ್ಗೀತೆಯ ಮಹಿಮೆಯನ್ನು ಮೆರೆಯುತ್ತಾ ಶ್ರೀಕೃಷ್ಣನ ಅಮೃತ ಸದೃಶ ವಾಕ್ಯವನ್ನು ಜೀವನದಲ್ಲಿ ಆಚರಿಸೋಣ ಆಗ ಸತ್ಪಲಗಳು ನಮ್ಮನ್ನು ಅರಿಸಿ ಬರುತ್ತದೆ ಎಂದು ಹಂಗಾರಕಟ್ಟೆಯ ಬಾಳೆಕುದ್ರು ಶ್ರೀಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.

ಅವರು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ರಾಜ್ಯಾದ್ಯಂತ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಪ್ರಯುಕ್ತ ಭಗವದ್ಗೀತಾ ಅಭಿಯಾನ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿ, ಕುಂದಾಪುರ ಕ್ಷೇತ್ರ ಸಮಿತಿ, ಶ್ರೀ ಸೀತಾರಾಮಚಂದ್ರ ದೇವಸ್ಥಾನ, ಕುಂದಾಪುರದ ಆಶ್ರಯದಲ್ಲಿ ಸಪ್ತಾಹ ಗೀತಾ ಜಯಂತಿ ಉತ್ಸವ-೨೦೧೬ರ ಅಂಗವಾಗಿ ಕುಂದಾಪುರ ಶೈಕ್ಷಣಿಕ ವಲಯದ ಎಲ್ಲಾ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಂಗಳೂರಿನ ಶ್ರೀ ಅನಂತ ಪದ್ಮನಾಭ ಸಭಾಭವನದಲ್ಲಿ ನಡೆದ ಭಗವದ್ಗೀತಾ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಭಗವದ್ಗೀತೆ ಸ್ಪರ್ಧಾ ದೃಷ್ಠಿಗಿಂತ ಜೀವನಕ್ಕೋಸ್ಕರ ಕಲಿತಾಗ ಸಂಸ್ಕಾರ ದೊರೆಯುತ್ತದೆ ಅದು ಉನ್ನತಿಗೆ ದಾರಿ ಮಾಡಿಕೊಡುತ್ತದೆ ಆದುದರಿಂದ ಸಾಮಾನ್ಯರಲ್ಲಿ ಸಾಮಾನ್ಯರಿಗೆ ಜ್ಞಾನದ ಜಿಜ್ಞಾಸೆ ಮೂಡಿಸಬಲ್ಲ ಭಗವದ್ಗೀತೆ ಪ್ರತಿಯೊಬ್ಬರನ್ನು ತಲುಪಬೇಕು. ಈ ದಿಸೆಯಲ್ಲಿ ಪ್ರಯತ್ನಿಸುತ್ತಿರುವ ಸಂಘಟಕರ ಪರಿಶ್ರಮ ಅಭಿನಂದನೀಯ ಎಂದು ಸ್ವಾಮೀಜಿಯವರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಭಗವದ್ಗೀತಾ ಅಭಿಯಾನದ ಜಿಲ್ಲಾಧ್ಯಕ್ಷ ಕಟ್ಕರೆ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ ಭಗವದ್ಗೀತೆ ಜೀವನ ಮೌಲ್ಯಗಳ ಆಗರವಾಗಿದ್ದು, ಮನಸ್ಸಿನ ಶಾಂತಿ, ಜೀವನದ ಸುಖಕ್ಕೆ ಸೇತುವೆ ನಿರ್ಮಿಸುತ್ತದೆ ಆದುದರಿಂದ ಜೀವನದಲ್ಲಿ ಅಳವಡಿಸಿಕೊಂಡಾಗ ಭಗವದ್ಗೀತೆ ಮನೆಮನೆಯ ಬೆಳಕಾಗಿ ಹೊರಹೊಮ್ಮುವುದು ಎಂದು ಹೇಳಿದರು.

ಶ್ರೀ ಮದ್ಭಗವದ್ಗೀತಾ ಅಭಿಯಾನ ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಬೆಟ್ಟಿನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಶಿಕ್ಷಣ ಪ್ರಮುಖರಾದ ಮಂಗೇಶ್ ಶೆಣೈ ಯಳಜಿತ್, ಜಿಲ್ಲಾ ಸಂಘಟಕರು, ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಸೋಂದಾದ ಆಡಳಿತ ಮಂಡಳಿ ಸದಸ್ಯರಾದ ಬಿ. ರಾಮಕೃಷ್ಣ ಶೇರೆಗಾರ, ಕುಂದಾಪುರ ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ರವೀಂದ್ರ ಕಾವೇರಿ, ಭಗವದ್ಗೀತಾ ಅಭಿಯಾನದ ಉಡುಪಿ ಜಿಲ್ಲಾ ಪರಿವೀಕ್ಷಕರಾದ ಜಿ.ಆರ್. ಹೆಗಡೆ, ಭಾಸ್ಕರ ಹೆಗಡೆ, ಉಪಸ್ಥಿತರಿದ್ದರು. ಲೇಖಕ ಸಂತೋಷ ಅಸೋಡು ಕಾರ್ಯಕ್ರಮ ನಿರ್ವಹಿಸಿದರು. ಭಗವದ್ಗೀತಾ ಅಭಿಯಾನ ಕುಂದಾಪುರ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಶ್ಮಿರಾಜ್ ವಂದಿಸಿದರು.

Exit mobile version