Kundapra.com ಕುಂದಾಪ್ರ ಡಾಟ್ ಕಾಂ

​108 ಬೈಕ್‌ ಆ್ಯಂಬುಲೆನ್ಸ್‌ ಸೇವೆಗೆ ಸಿಎಂ ಚಾಲನೆ

ಬೆಂಗಳೂರು: ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಬೈಕ್‌ ಆ್ಯಂಬುಲೆನ್ಸ್’ ಗೆ ಹಸಿರು ನಿಶಾನೆ ತೋರಿಸುವ ಮೂಲಕ ಈ ಸೇವೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಬೈಕ್‌ ಆ್ಯಂಬುಲೆನ್ಸ್‌ ಸೇವೆ ಸರ್ಕಾರದ ವಿನೂತನ ಪ್ರಯೋಗ. ನಗರ ಪ್ರದೇಶಗಳಲ್ಲಿ ಜನಸಂಖ್ಯೆ, ಸಂಚಾರದಟ್ಟಣೆ ಏರುಗತಿಯಲ್ಲಿ ಸಾಗಿದೆ. ಹಾಗಾಗಿ, ನಿಗದಿತ ಅವಧಿಯಲ್ಲಿ ಅಪಘಾತಗಳು ನಡೆದ ಸ್ಥಳಕ್ಕೆ “ಆರೋಗ್ಯ ಕವಚ’ ಆ್ಯಂಬುಲೆನ್ಸ್‌ ತಲುಪಲು ವಿಳಂಬವಾಗಬಹುದು. ಈ ನಿಟ್ಟಿನಲ್ಲಿ ಸಕಾಲದಲ್ಲಿ ಚಿಕಿತ್ಸೆ ತಲುಪಿಸಲು ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ’.
ಅಪಘಾತಗಳು ನಡೆದಾಗ ಬದಕಲು ಸಾಧ್ಯವಿದ್ದವರೂ ಪ್ರಥಮ ಚಿಕಿತ್ಸೆಯಲ್ಲಿನ ವಿಳಂಬದಿಂದ ಪ್ರಾಣ ಕಳೆದುಕೊಳ್ಳುವ ಸಂಭವ ಇರುತ್ತದೆ. ಈ ದೃಷ್ಟಿಯಿಂದ ಬೈಕ್‌ ಆ್ಯಂಬುಲೆನ್ಸ್‌ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದರು.

ವಿನೂತನ ಆರೋಗ್ಯ ಸೇವೆ
ಕ್ಷಿಪ್ರಗತಿಯಲ್ಲಿ ಅಪಘಾತ ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡುವ “ಬೈಕ್‌ ಆ್ಯಂಬುಲೆನ್ಸ್‌’ಗಳು ಬುಧವಾರದಿಂದ ರಸ್ತೆಗಿಳಿದಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರಗಳಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಲ್ಲಿ, ಘಟನೆ ನಡೆದ ಕೇವಲ 10 ನಿಮಿಷದಲ್ಲಿ ಈ ಬೈಕ್‌ ಆ್ಯಂಬುಲೆನ್ಸ್‌ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಲಿದೆ.

Exit mobile version