Kundapra.com ಕುಂದಾಪ್ರ ಡಾಟ್ ಕಾಂ

ಹೊನ್ನಾವರದ ಮರಾಠಿ ಕೇರಿಯತ್ತ ಕೊಂಕಣಿ ಸಾಹಿತ್ಯ ಅಕಾಡೆಮಿ

ಹೊನ್ನಾವರ: ಜಿಲ್ಲೆ ಘಟ್ಟದ ಕಾಡಿನ ಮಧ್ಯೆ ವಾಸಿಸುತ್ತಿರುವ, ಹೊರಲೋಕಕ್ಕೆ ಅಪರಿಚಿತವಾದ ಮರಾಠಿ ಸಮಾಜದ ಕೇರಿಯಲ್ಲಿ ಏ. 16ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ತನ್ನ ಹೆಜ್ಜೆ ಗುರುತು ಮೂಡಿಸುತ್ತಿದೆ.

ಛತ್ರಪತಿ ಶಿವಾಜಿ ಸೈನ್ಯದೊಟ್ಟಿಗೆ ಯುದ್ಧ ಸಾಮಗ್ರಿಗಳನ್ನು ಹೊತ್ತು ನಿರ್ಜನ ಕಾಡಿನ ಮಾರ್ಗದಲ್ಲಿ ಸಾಗಿ ಬಂದು, ಅನಿವಾರ್ಯ ಕಾರಣಗಳಿಂದ ಅಲ್ಲಿಯೇ ನೆಲೆನಿಂತ ಮರಾಠಿ ಸಮಾಜ ಕೊಂಕಣಿ ಮರಾಠಿ ಮಿಶ್ರಿತ ಭಾಷೆಯನ್ನು ಆಡತೊಡಗಿತ್ತು. ಬೆಟ್ಟ ಕಡಿದು ರಾಗಿ ಬೆಳೆದು ಅದಕ್ಕೆ ತಾಳೆಮರದ ತಿರುಳಿನ ಹಿಟ್ಟು ಬೆರೆಸಿ ಆಹಾರ ಕಂಡುಕೊಂಡು ರಾಗಿ ಕುಮ್ರಿ ಮರಾಠಿಗಳು, ಕಾಡು ಜೇನು ಸಂಗ್ರಹಿಸಿ ಜೇನು ಮರಾಠಿಗಳು ಎಂದು ಕರೆಸಿಕೊಂಡರು.

ಬ್ರಿಟಿಷರು ಉತ್ತರ ಕನ್ನಡದ ಕಾಡಿನ ಸರ್ವೇ ಮಾಡುವಾಗ ಸಾಮಾನು, ಸರಂಜಾಮು ಸಾಗಿಸಲು ಈ ಸಮಾಜವನ್ನು ಬಳಸಿಕೊಂಡರು ಎನ್ನುತ್ತದೆ ಕೆನರಾ ಗೆಜೆಟಿಯರ್‌. ಶಿರಸಿ, ಸಿದ್ದಾಪುರ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳ ಕಾಡಿನಲ್ಲಿ ಮಾತ್ರ ಕಾಣುವ ಈ ಸಮಾಜದ ಒಟ್ಟೂ ಜನಸಂಖ್ಯೆ 18,700 ಮಾತ್ರ. ಸದ್ಯ ಅ ವರ್ಗದಲ್ಲಿ ಗುರುತಿಸಲ್ಪಟ್ಟಿರುವ ಇವರಿಗೆ ಸರಕಾರಿ ವಿಶೇಷ ಸೌಲಭ್ಯಗಳು ಈವರೆಗೆ ಸಿಗಲಿಲ್ಲ. ಈ ಸಮಾಜದಲ್ಲಿ ಶೇ. 90ರಷ್ಟು ಅನಕ್ಷರಸ್ಥರು. ಇತ್ತೀಚಿನ ಹುಡುಗರು ಕನ್ನಡ ಶಾಲೆಗೆ ಹೋಗುತ್ತಿದ್ದಾರೆ. ಶಿರಸಿ ಸೀಮೆಯಲ್ಲಿ ಒಬ್ಬಿಬ್ಬರು ಪದವೀಧರರಿದ್ದಾರೆ.

ಕೊಂಕಣಿ ಸಾಹಿತ್ಯ ಅಕಾಡೆಮಿ ಆರಂಭವಾಗಿ ದಶಕವಾಗುತ್ತ ಬಂದರೂ ಅವರ ಪಟ್ಟಿಯಲ್ಲಿ ಮರಾಠಿಗರ ಹೆಸರಿದೆಯೇ ವಿನಃ, ಗುರುತಿಸುವ ಮುಹೂರ್ತ ಬಂದಿರಲಿಲ್ಲ.

ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಶಿರಸಿ ರವೀಂದ್ರನಾಥ ನಾಯ್ಕ ಅವರನ್ನು ಸಂಘಟಿಸಿ, ಜಿಲ್ಲೆ ಮತ್ತು ತಾಲೂಕು ಸಮ್ಮೇಳನಗಳನ್ನು ನಡೆಸಿ ಸರಕಾರದ ಗಮನಕ್ಕೆ ತಂದಿದ್ದರು. ಈ ಸಮಾಜವನ್ನು ಮುಖ್ಯ ಪ್ರವಾಹಕ್ಕೆ ಸೇರಿಸುವ ಪ್ರಯತ್ನ ನಡೆಯಬೇಕಾಗಿದೆ. ಈ ಸಮಾಜದ ಸುಗ್ಗಿ, ಯಕ್ಷಗಾನ, ಗುಮಟೆ ಪಾಂಗ್‌, ಬೆತ್ತ ಮತ್ತು ಕಾಡುಬಳ್ಳಿಗಳಿಂದ ಇವರು ರಚಿಸುವ ಬುಟ್ಟಿ, ಪೆಟ್ಟಿಗೆ ಮೊದಲಾದ ಸಾಮಗ್ರಿಗಳು, ಇವರು ಸಂಗ್ರಹಿಸುವ ಜೇನು, ವಾಟೆಕಾಯಿ ಮತ್ತು ತಾಳೆಗರಿಯ ಮನೆ ಹೊದಿಕೆ ಮೊದಲಾದವು ವಿಶಿಷ್ಟವಾದವು. ಕೊಳಲಿನಂತಹ ವಾದ್ಯವೊಂದನ್ನು ಇವರು ಮಾತ್ರ ಊದುತ್ತಾರೆ.

ಈ ಶತಮಾನದ ಆರಂಭದವರೆಗೆ ಮರಾಠಿಕೇರಿಗೆ ರಸ್ತೆಗಳೇ ಇರಲಿಲ್ಲ. ಇತ್ತೀಚಿನ ವರ್ಷದಲ್ಲಿ ಅತಿಕ್ರಮಣದಾರರು ತಮ್ಮ ಕೇರಿಗೆ ರಸ್ತೆ ಮಾಡಿಕೊಂಡ ಕಾರಣ ಮರಾಠಿಗರಿಗೆ ರಸ್ತೆ ದೊರಕಿದ್ದು ತರುಣರು ಬೈಕ್‌ ಕೊಂಡಿದ್ದಾರೆ.

ಆಚಾರ, ವಿಚಾರ, ಭಾಷೆ ಎಲ್ಲದರಲ್ಲೂ ಭಿನ್ನವಾಗಿರುವ ಈ ಸಮಾಜದ ಕುಲದೇವತೆ ಮಹಾರಾಷ್ಟ್ರದ ತುಳಜಾಭವಾನಿ. ಆಲೂ, ಪಿಲ್ಲು, ಬೆತ್ತು, ನೇಯು ಇಂತಹ ಹೆಸರುಳ್ಳವರು ತೊಳಸಾಣಿ, ಬಂಣೆ°, ಕಲವೆ, ಕಕ್ಕೆ ಇಂತಹ ಹೆಸರಿನ ಊರುಗಳಲ್ಲಿ ವಾಸಿಸುತ್ತಾರೆ. ಆ ಲೋಕವೇ ಬೇರೆ. ಅದನ್ನು ಈ ಲೋಕದ ಮುಂದೆ ಕೊಂಕಣಿ ಸಾಹಿತ್ಯ ಅಕಾಡೆಮಿ ತೆರೆದಿಡಲಿದೆ.

Exit mobile version