Kundapra.com ಕುಂದಾಪ್ರ ಡಾಟ್ ಕಾಂ

ಕನಸನ್ನು ನನಸು ಮಾಡುವ ಪ್ರಯತ್ನದಿಂದ ಯಶಸ್ಸು : ಡಾ. ಸಂತೋಷ್ ಟಿ. ಸೋನ್ಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೀವನದಲ್ಲಿ ಸ್ಪಷ್ಟ ಗುರಿಯನ್ನಿಟ್ಟುಕೊಂಡು ಅದರೆಡೆಗಡೆಗೆ ಸಾಗವತ್ತ ನಿರಂತರ ಪ್ರಯತ್ನಶೀಲರಾಗಬೇಕು. ಕಂಡ ಕನಸ್ಸನ್ನು ನನಸಾಗಿಸಿಕೊಳ್ಳುವ ಉತ್ಕಟ ಬಯಕೆ ಮನುಷ್ಯನ ವ್ಯಕ್ತಿತ್ವವನ್ನು ಉತ್ತುಂಗಕ್ಕೇರಿಸುತ್ತದೆ. ಆದುದರಿಂದ ಜೀವನದ ಪ್ರತಿ ಹಂತದಲ್ಲಿಯೂ ಕನಸನ್ನು ನನಸು ಮಡುವ ಪ್ರಯತ್ನ ನನಗೆ ಯಶಸ್ಸನ್ನು ತಂದು ಕೊಟ್ಟಿತು ಎಂದು ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್‌ನ ನಿಯೋಜಿತ ರಾಷ್ಟ್ರೀಯ ಅಧ್ಯಕ್ಷ ಡಾ. ಸಂತೋಷ್ ಟಿ. ಸೋನ್ಸ್ ಹೇಳಿದರು.

ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕುಂದಾಪುರದ ಬಸ್ರೂರು ಮೂರುಕೈ ಬಳಿಯಿರುವ ಆಶೀರ್ವಾದ ಹಾಲ್‌ನಲ್ಲಿ ಜರುಗಿದ ರೋಟರಿ ವಲಯ೧ರ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಾಜಿ ಜಿಲ್ಲಾ ಗವರ್ನರ್ ಕೃಷ್ಣಯ್ಯ ಶೆಟ್ಟಿ ಅವರು ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್‌ನ ನಿಯೋಜಿತ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಸಂತೋಷ್ ಟಿ. ಸೋನ್ಸ್ ಅವರನ್ನು ಸನ್ಮಾನಿಸಿ, ವೈದ್ಯಕೀಯ ಸೇವೆಯಲ್ಲಿ ಸೇವಾ ಮನೋಭಾವ, ರೋಗಿಗಳೊಂದಿಗಿನ ಗುಣಾತ್ಮಕ ಸ್ಪಂದನ, ಭಾಂಧವ್ಯ ವ್ಯಕ್ತಿಯನ್ನು ಶಕ್ತಿಯನ್ನಾಗಿಸುತ್ತದೆ ಎನ್ನಲು ಡಾ. ಸಂತೋಷ್ ಟಿ. ಸೋನ್ಸ್ ಉತ್ತಮ ಉದಾಹರಣೆ. ಅವರ ಬದುಕು, ಸೇವಾ ದೃಷ್ಠಿ ಪ್ರಶಂಸನೀಯ ಎಂದರು.

ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ಮಧುಕರ ಹೆಗ್ಡೆ, ಜೋನಲ್ ಲೆಫ್ಟಿನೆಂಟ್ ಡಾ. ರವಿಕಿರಣ್, ರೋಟರಿ ಕುಂದಾಪುರ ಸ್ಥಾಪಕ ಸದಸ್ಯ ಸೋಲೋಮನ್ ಸೋನ್ಸ್ ಇನ್ನಿತರರು ಉಪಸ್ಥಿತರಿದ್ದರು. ಹಿರಿಯ ಸದಸ್ಯ ಎ.ಪಿ.ಮಿತಂತ್ತಾಯ ಸನ್ಮಾನಪತ್ರ ವಾಚಿಸಿದರು. ರೋಟರಿ ವಲಯ ಕ್ರೀಡಾ ಸಂಯೋಜಕ ಮನೋಜ್ ನಾಯರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ರೀಡಾಕೂಟ ಸಂಚಾಲಕ ರಂಜಿತ್ ಶೆಟ್ಟಿ ವಂದಿಸಿದರು.

Exit mobile version