Kundapra.com ಕುಂದಾಪ್ರ ಡಾಟ್ ಕಾಂ

ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಉತ್ಸವಗಳ ಪಾತ್ರ ಬಹುಮುಖ್ಯ: ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಉತ್ಸವಗಳ ಪಾತ್ರ ಬಹುಮುಖ್ಯವಾದುದು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಿಂದ ಎಲ್ಲರನ್ನೂ ಒಗ್ಗಟ್ಟಾಗಿ ಕಾಣಲು ಸಾಧ್ಯವಿದೆ ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ’ರಂಗಸುರಭಿ ೨೦೧೬’ ನಾಟಕ ಸಪ್ತಾಹದಲ್ಲಿ ದಿನದ ನುಡಿಗಳನ್ನಾಡುತ್ತಿದ್ದರು. ಆಧುನಿಕ ಮಾಧ್ಯಮಗಳ ಪ್ರಭಾವದಿಂದ ಕಲೆಯ ಸೆಳೆತ ಕಡಿಮೆಯಾಗುತ್ತಿದೆ. ಟಿ.ವಿಯಲ್ಲಿ ನೋಡುವ ನಾಟಕ, ನೃತ್ಯ, ಯಕ್ಷಗಾನ ಪ್ರದರ್ಶನಗಳನ್ನು ಎದುರಿಗೆ ನೋಡಲು ಇಷ್ಟಪಡುತ್ತಿಲ್ಲ. ಸಮುದಾಯದೊಂದಿಗೆ ಸೇರದ, ಎಲ್ಲರೂ ಸೇರಿದಾಗ ನಾವು ಅಲ್ಲಿರದ ಸಂಕುಚಿತ ಮನಸ್ಥಿತಿ ನಮ್ಮದಾಗುತ್ತಿರುವುದರಿಂದ ಮನಸ್ಸಿನ ಒತ್ತಡಗಳು ಹೆಚ್ಚುತ್ತಿವೆ ಎಂದರು.

ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕ ರಾಜೇಂದ್ರ ಕಾರಂತ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಸುಜಾತ ದೇವಾಡಿಗ, ವಿಜಯಕುಮಾರ್ ಶೆಟ್ಟಿ, ಲಾವಣ್ಯ ಬೈಂದೂರು ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ, ರಿದಂ ನೃತ್ಯ ತಂಡದ ಪಾಲಕರ ಸಮಿತಿ ಅಧ್ಯಕ್ಷ ನಾಗರಾಜ ಗಾಣಿಗ ಬಂಕೇಶ್ವರ, ಬೈಂದೂರು ಎಸ್‌ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಯಡ್ತರೆ, ಸುರಭಿಯ ನಿರ್ದೇಶಕರಾದ ಗಣಪತಿ ಹೋಬಳಿದಾರ್, ಸುರಭಿ ರಿ. ಬೈಂದೂರು ಅಧ್ಯಕ್ಷ ಶಿವರಾಮ ಕೊಠಾರಿ, ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಕಬ್ಸೆ, ಸದಸ್ಯ ತಿಮ್ಮಪ್ಪಯ್ಯ ಉಪಸ್ಥಿತರಿದ್ದರು.

ಸುರಭಿಯ ಕಾರ್ಯದರ್ಶಿ ಲಕ್ಷ್ಮಣ ವೈ ಕೊರಗ ಸ್ವಾಗತಿಸಿ, ಸುರಭಿಯ ನಿರ್ದೇಶಕರಾದ ಸುಧಾಕರ ಪಿ. ಬೈಂದೂರು ವಂದಿಸಿದರು. ಗಣೇಶ್ ಟೈಲರ್ ತಗ್ಗರ್ಸೆ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಶಿಕ್ಷಕ ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಅನನ್ಯ ಬೆಂಗಳೂರು ರಂತತಂಡ ಅಭಿನಯಿಸಿದ ಎಸ್.ಎನ್ ಸೇತೂರಾಂ ನಿರ್ದೇಶನದ ಅತೀತ ನಾಟಕ ಪ್ರದರ್ಶನಗೊಂಡಿತು.

Exit mobile version