Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ರಂಗಸುರಭಿ ನಾಟಕ ಸಪ್ತಾಹ ಸಮಾರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿ ತನ್ನ ಒಡಲಿನೊಳಗೆ ಭೂಮಿ ಎಂಬ ಪದವನ್ನು ಹಿಟ್ಟುಕೊಂಡಿದೆ. ಭೂಮಿಯ ಸ್ವರ್ಶ ದಕ್ಕಿದವರು ಮನಷ್ಯತ್ವನ್ನು ಕಂಡುಕೊಳ್ಳುತ್ತಾರೆ ಮತ್ತು ಸತ್ಯ ಹೇಳುತ್ತಾರೆ ರಂಗಭೂಮಿಯ ಜಗತ್ತಿನ ದೈನಂದಿನ ಸತ್ಯಗಳನ್ನು, ಬದುಕಬೇಕಾದ ದರ್ಶನವನ್ನು ಒಟ್ಟೊಟ್ಟಿಗೆ ತೆರೆದಿಡುತ್ತದೆ ಎಂದು ರಂಗ ನಿರ್ದೇಶಕ ಶ್ರೀಪಾದ್ ಭಟ್ ಶಿರಸಿ ಹೇಳಿದರು.

ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ‘ರಂಗಸುರಭಿ 2016’ ನಾಟಕ ಸಪ್ತಾಹದಲ್ಲಿ ಸಮಾರೋಪ ನುಡಿಗಳನ್ನಾಡುತ್ತಿದ್ದರು. ಪುರಾಣ ಮತ್ತು ವರ್ತಮಾನವನ್ನು ಮುಖಾಮುಖಿ ಮಾಡುವುದರಿಂದ ಹಿಡಿದು ಮನುಷ್ಯನ ಒಳಹೊರ ಜಗತ್ತನ್ನು ಅನಾವರಣ ಮಾಡುವ, ಗೃಹಸ್ಥಾಶ್ರಮದಿಂದ ಸಮಾಜಾಶ್ರಮದ ವರೆಗೆ ಧೀರ್ಘ ಕಥಾನಕದಲ್ಲಿ ಸಣ್ಣವೇದಿಕೆಯಲ್ಲಿ ತೋರಿಸುವುದು ರಂಗಭೂಮಿಯ ತಾಕತ್ತು ಎಂದವರು ವಿಶ್ಲೇಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಬೈಂದೂರಿನ ಸಾಂಸ್ಕೃತಿಕ ಸಂಘಟನೆಗಳು ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಕಲಾರಸಿಕರನ್ನು ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳೂ ಸಮಾಜ ಸೇವೆಯ ಭಾಗವೇ ಆಗಿದೆ. ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳನ್ನು ವೇದಿಕೆಗೆ ಕರೆತರುವ ಮೂಲಕ ಸಾಂಸ್ಕೃತಿಕ ಚೌಕಟ್ಟಿನೊಳಗೆ ಎಲ್ಲರನ್ನೂ ಸೇರಿಸುವ ಪ್ರಯತ್ನ ನಡೆದಿರುವುದು ರಂಗಸಪ್ತಾಹದ ಯಶಸ್ಸು ಎಂದರು.

ರಂಗಕರ್ಮಿ, ವಿಮರ್ಷಕ ಮುರಳೀಧರ ಉಪಾಧ್ಯಾಯ ಹಿರಿಯಡ್ಕ ಅವರನ್ನು ಸನ್ಮಾನಿಸಲಾಯಿತು. ಬೈಂದೂರು ಗ್ರಾಪಂ ಅಧ್ಯಕ್ಷ ಜನಾರ್ಧನ ಬಾಡ, ಉಪ್ಪುಂದ ವಿನಾಯಕ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಪ್ರಕಾಶ್‌ಭಟ್ ಉಪ್ಪುಂದ, ಜೆಸಿಐ ಶಿರೂರು ಅಧ್ಯಕ್ಷ ಹರೀಶ್ ಶೇಟ್, ಸುರಭಿ ರಿ. ಬೈಂದೂರು ಕಾರ್ಯದರ್ಶಿ ಲಕ್ಷ್ಮಣ ವೈ ಕೊರಗ, ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಕಬ್ಸೆ, ಖಜಾಂಜಿ ಮಹಾಬಲೇಶ್ವರ ಮಯ್ಯ ಉಪಸ್ಥಿತರಿದ್ದರು. ಸುರಭಿಯ ನಿರ್ದೇಶಕ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ, ನಿರ್ದೇಶಕ ಸುಧಾಕರ ಪಿ. ಬೈಂದೂರು ವಂದಿಸಿದರು. ನಾಗರಾಜ ಚಂದನ್ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ನಾಗರಾಜ ಪಿ. ಯಡ್ತರೆ ಹಾಗೂ ನಿಶ್ಚಿತ ಕಾರ್ಯಕ್ರಮ ನಿರೂಪಿಸಿದರು. ನೃತ್ಯನಿಕೇತನ ಕೊಡವೂರು ತಂಡ ಅಭಿನಯಿಸಿದ ಡಾ. ಶ್ರೀಪಾದ್ ಭಟ್ ನಿರ್ದೇಶನದ ಚಿತ್ರಾ ನಾಟಕ ಪ್ರದರ್ಶನಗೊಂಡಿತು.

Exit mobile version