Kundapra.com ಕುಂದಾಪ್ರ ಡಾಟ್ ಕಾಂ

ವಿಶಾಲ ಮನಸ್ಸಿನಿಂದ ಮಾಡಿದ ಕಾರ್ಯ ಯಶಸ್ಸು:ವೈದೇಹಿ

ಮುಂಬಯಿ: ವಚನ ಸಾಹಿತ್ಯದ ಮೂಲಕ ಮಹಿಳೆ ತನ್ನ ಅಭಿವ್ಯಕ್ತಿಯನ್ನು ಆರಂಭಿಸಿದ್ದಾಳೆ. ಅದಕ್ಕೂ ಮುನ್ನ ಸಂವೇದನೆಗೆ ಅಕ್ಷರ ಸಿಕ್ಕಿ ಅದು ಜಾನಪದ ರೂಪದಲ್ಲಿ ಹೊರಹೊಮ್ಮಿರುತ್ತದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ವಾಪಿ ಕನ್ನಡ ಸಂಘ ಈಗ ಸಾಹಿತ್ಯಕ ಚಟುವಟಿಕೆಗಳಲ್ಲಿ ತನ್ನ ಅಭಿಯಾನವನ್ನು ಮುಂದುವರೆಸಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಪ್ರಸಿದ್ಧ ಸಾಹಿತಿ, ಚಿಂತಕಿ ವೈದೇಹಿ ನುಡಿದರು.

News Mumbai1

ಇತ್ತೀಚೆಗೆ ವಾಪಿ ಕನ್ನಡ ಸಂಘದ ಸಭಾಗೃಹದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ತ್ರೀ ಸಂವೇದನೆಯ ಬಗ್ಗೆ ಮಾತನಾಡಿದ ಅವರು, ಸರಸ್ವತಿ ರಾಜವಾಡೆ ಅವರು ದೊಡ್ಡ ಚಳುವಳಿಯನ್ನು ನಡೆಸಿದರು. ಕೊಡಗಿನ ಗೌರಮ್ಮನವರು ಮುಂದಿನ ದಿನಗಳಲ್ಲಿ ಗುರುತಿಸಿಕೊಂಡವರಲ್ಲಿ ಪ್ರಮುಖರು. ಮಹಿಳಾ ಸಾಹಿತ್ಯವನ್ನು ಅಡುಗೆ ಮನೆ ಸಾಹಿತ್ಯ ಎಂದು ಹಣೆಪಟ್ಟಿ ಕಟ್ಟಿದ ದಿನಗಳಲ್ಲಿ ಅದನ್ನು ಬಲವಾಗಿ ಪ್ರತಿಭಟಿಸಿದವರಲ್ಲಿ ಅನುಪಮಾ ನಿರಂಜನ ಪ್ರಮುಖರು. ಅದನ್ನು ಎಂ. ಕೆ. ಇಂದಿರಾ, ಎಂ. ಕೆ. ವಿಜಯಲಕ್ಷಿ¾à ಮುಂದುವರಿಸಿಕೊಂಡು ಹೋದರು. ಹೆಣ್ಣು ಮಗು ಓದುವ ಅಗತ್ಯವಿಲ್ಲವೆಂದು ತಿಳಿದಿದ್ದ ಕಾಲದಲ್ಲಿ, ಓದೇ ಬರದಾಗ ಹೆಣ್ಣು ಹೇಗೆ ಬರೆದಾಳು. ಕ್ರಮೇಣ ಐದನೇ ತರಗತಿ, ಎಸ್‌ಎಸ್‌ಸಿ, ಪದವಿ, ಸ್ನಾತಕೋತ್ತರ ಪದವಿಯವರೆಗೆ ಓದು ಮುಂದುವರಿದಾಗ ಬರೆಯುವವರ ಸಂಖ್ಯೆ ಹೆಚ್ಚಾಯಿತು. ಮೇಲ್ಮಟ್ಟದ ಸಾಹಿತ್ಯಕ್ಕೆ ಅವಗಣನೆ ಇಲ್ಲ. ದೃಷ್ಟಿಕೋನ ಬದಲಾಗಿದೆ. ಅದು ಒಳ್ಳೆಯ ವಿಮರ್ಶೆಯನ್ನು ಪಡೆಯುತ್ತಿದೆ. ವಿಶಾಲ ಮನಸ್ಸಿನಿಂದ ಯಾವುದೇ ಕಾರ್ಯ ಕೈಗೊಂಡಾಗ ಅದು ಖಂಡಿತವಾಗಿಯೂ ಯಶಸ್ಸನ್ನು ಹೊಂದುತ್ತದೆ ಎಂದು ತಿಳಿಸಿದರು.

ಅನಘಾ ಜಕಾತಿ ಪ್ರಾರ್ಥನೆಗೈದರು. ಮಮತಾ ಮಲ್ಹಾರ ಕವನ ವಾಚಿಸಿದರು. ಸಂಘದ ಸದಸ್ಯೆಯರು, ಸದಸ್ಯರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಘದ ವಿಶ್ವಸ್ಥರಾದ ಪಿ. ಎಸ್‌. ಕಾರಂತ್‌ ವೈದೇಹಿ ಅವರನ್ನು ಪರಿಚಯಿಸಿದರು. ಸಂಘದ ಮಹಿಳಾ ವಿಭಾಗದ ಮುಖ್ಯಸ್ಥೆ ಪ್ರತಿಭಾ ಪ್ರಯಾಗ, ಕಾರ್ಯದರ್ಶಿ ಟಿ. ಕೆ. ವಿನಯಕುಮಾರ್‌, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪಿ. ಎಸ್‌. ಕಾರಂತ್‌ ಅವರು ಅತಿಥಿಗಳನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.

Exit mobile version