Kundapra.com ಕುಂದಾಪ್ರ ಡಾಟ್ ಕಾಂ

ರೈತರದ್ದು ಸಮಸ್ಯೆಗೆ ದೃತಿಗೆಡದ ಸ್ವಾಭಿಮಾನಿ ಬದುಕು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖಂಬದಕೋಣೆ ರೈತರ ಸೇವಾ ಸಂಘ, ಸಂಘವು ಪ್ರಾಯೋಜಿಸಿರುವ ರೈತ ಶಕ್ತಿ ಹಾಗೂ ರೈತ ಸೇವಾ ಕೂಟ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ಇಲ್ಲಿನ ಶಂಕರ ಕಲಾ ಮಂದಿರ ಸಮೃದ್ಧ್ ಸಭಾಭವನದಲ್ಲಿ ರೈತ ದಿನಾಚರಣೆ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮರವಂತೆಯ ಹಿರಿಯ ಕೃಷಿಕ ಹಾಗೂ ನಿವೃತ್ತ ಪ್ರಾಧ್ಯಾಪಕ ಎ. ರಿಚರ್ಡ್ ರೆಬೆಲ್ಲೊ ಮಾತನಾಡಿ, ರೈತರದ್ದು ಸ್ವಾಭಿಮಾನದ ಬದುಕಾಗಿದ್ದು, ಸಮಸ್ಯೆಗಳಿಗೆ ಧೃತಿಗೆಡದೆ ಜೀವನ ಸಾಗಿಸುವ ರೈತರ ಜೀವನ ಇತರರಿಗೆ ಮಾದರಿಯಾಗಿದೆ. ಇಂದು ರೈತರ ಹೆಸರು ಬಳಸಿಕೊಂಡು ವೈಭವಿಕರಣದ ವ್ಯಾಪಾರೀಕರಣ ನಡೆಯುತ್ತಿದೆ. ಆದರೆ ನಿಜವಾದ ರೈತರ ಸ್ಥಿತಿ ಚಿಂತಜನಕವಾಗಿದೆ ಎಂದರು.

ಬೆವರು ಹರಿಸಿ ದುಡಿಯುವ ರೈತರು ತಮ್ಮ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಯಿಲ್ಲದೇ ನಲುಗಿ ಹೋಗಿದ್ದಾರೆ. ಬಡತನದ ಬೇಗುದಿ, ಸಾಲದ ಬಾಧೆಯಿಂದ ನೂರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇವರ ಬೆಂಬಲಕ್ಕೆ ಸರಕಾರಗಳು ನಿಲ್ಲಬೇಕು. ಇವರ ಬೆಳೆಗೆ ದರನಿಗದಿ ಮಾಡುವ ಮದ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ಮಾರುಕಟ್ಟೆಯಲ್ಲಿ ಇವರಿಗೆ ನೇರವಾಗಿ ಸೂಕ್ತಬೆಲೆ ಸಿಗಬೇಕು. ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ರೈತ ದೇಶದ ಆಸ್ತಿ, ಬೆನ್ನಲಬು, ಅನ್ನದಾತ ಎಂದೆಲ್ಲ ವೇದಿಕೆಯ ಮೇಲೆ ಬೊಗಳೆ ಬಿಡುವುದಕ್ಕಿಂತ ಇಲಾಖಾ ಅಧಿಕಾರಿಗಳಿಂದ ರೈತರಿಗೆ ಸರಿಯಾದ ಅಂಕಿ-ಅಂಶಗಳಿಂದ ಕೂಡಿದ ಬೇಸಾಯದ ಕುರಿತು ಮಾರ್ಗದರ್ಶನ ಕೊಡಿಸಬೇಕು ಎಂದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಬೊಳಂಬಳ್ಳಿ ಹಿರಿಯ ಪ್ರಗತಿಪರ ರೈತ ಮಂಜ ಗೌಡ ಇವರನ್ನು ಸನ್ಮಾನಿಸಲಾಯಿತು ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಮಾಣಿಬೈಲು ಗೋಪಾಲ ಶೆಟ್ಟಿ, ಬಿಜೂರು ಗ್ರಾಪಂ ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ, ಕಾಲ್ತೋಡು ಗ್ರಾಪಂ ಉಪಾಧ್ಯಕ್ಷ ರಾಜು ಪೂಜಾರಿ, ಸಂಘದ ನಿರ್ದೇಶಕರಾದ ಮೊಹನ್ ಪೂಜಾರಿ, ದಿನಿತಾ ಶೆಟ್ಟಿ, ಗುರುರಾಜ್ ಹೆಬ್ಬಾರ್, ಸಿದ್ದು ದೇವಾಡಿಗ ಉಪಸ್ಥಿತರಿದ್ದರು. ನಿರ್ದೇಶಕ ಬಿ.ಎಸ್.ಸುರೇಶ್ ಶೆಟ್ಟಿ ಪ್ರಾಸ್ತಾವಿಸಿದರು. ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೈ ಸ್ವಾಗತಿಸಿ, ವ್ಯವಸ್ಥಾಪಕ ಹಾವಳಿ ಬಿಲ್ಲವ ವಂದಿಸಿದರು. ಸುಬ್ರಹ್ಮಣ್ಯ ಗಾಣಿಗ ನಿರೂಪಿಸಿದರು.

Exit mobile version