Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಸಂಸ್ಕೃತ ಸಂಭಾಷಣಾ ಶಿಬಿರ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸಂಸ್ಕೃತ ಭಾಷೆಯು ಜಗತ್ತಿನ ಅತ್ಯಂತ ಪುರಾತನವಾದ ಭಾಷೆಗಳಲ್ಲಿ ಒಂದಾಗಿದೆ. ಸಂಸ್ಕೃತ ಭಾಷೆಯು ಹಲವು ಭಾಷೆಗಳಿಂದ ಕಟ್ಟಲ್ಪಟ್ಟಿದ್ದು, ಈ ಭಾಷೆಯಲ್ಲಿರುವ ಜ್ಞಾನ ಜಗತ್ತಿನ ಯಾವ ವಿಜ್ಞಾನಿಗಳ ತಲೆಯಲ್ಲಿಯೂ ಇಲ್ಲ. ಯಾವುದೇ ಭಾಷೆ ವ್ಯವಹಾರದಲ್ಲಿ ಇಲ್ಲದಿರುವಾಗ ಆ ಭಾಷೆ ಜನರಿಂದ ದೂರ ಸರಿಯುತ್ತದೆ. ಪ್ರಸ್ತುತ ಸಂಸ್ಕೃತ ಭಾಷೆ ಹೆಚ್ಚು ಪ್ರಚಲಿತದಲ್ಲಿರದಿರುವುದು ಈ ಭಾಷೆಯ ಬೆಳವಣಿಗೆಗೆ ಹಿನ್ನಡೆಯಾಗಿದೆ ಎಂದು ನಿವೃತ್ತ ಉಪನ್ಯಾಸಕ ಕೋ.ಶಿವಾನಂದ ಕಾರಂತ ಹೇಳಿದರು.

ಅವರು ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ಆಯೋಜಿಸಲಾಗಿರುವ ೧೦ ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದಿಪುಲ್ ರಾಯ್ ಮಾತನಾಡಿ, ಸಂಸ್ಕೃತ ಭಾರತಿಯು ದೇಶಾದ್ಯಂತ ಸಂಸ್ಕೃತ ಭಾಷೆಯನ್ನು ಪಸರಿಸುವ ಕೆಲಸ ಮಾಡುತ್ತಿದೆ. ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಿ, ಈ ಭಾಷೆಯನ್ನು ವ್ಯವಹಾರದಲ್ಲಿ ಬಳಕೆಯಾಗುವಂತೆ ಮಾಡಬೇಕಾಗಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು.

ಶಿಶು ಮಂದಿರದ ಸದಸ್ಯೆ ಅಶ್ವಿತಾ ಜಿ.ಪೈ, ಮಾತಾಜಿ ಸುಮನಾ, ಮಾತಾಜಿ ಶೈಲಾ ಮೊದಲಾದವರು ಉಪಸ್ಥಿತರಿದ್ದರು. ಶಿಶು ಮಂದಿರದ ಅಧ್ಯಕ್ಷ ಶ್ರೀನಿವಾಸ ಎಂ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರೂಪಿಸಿ, ಬಿ.ಲಕ್ಷ್ಮೀಕಾಂತ ಮಡಿವಾಳ ವಂದಿಸಿದರು.

Exit mobile version