Kundapra.com ಕುಂದಾಪ್ರ ಡಾಟ್ ಕಾಂ

ಕಂಚಿಕಾನ್: ಅಪ್ಪಣ್ಣ ಹೆಗ್ಡೆ, ಗಣೇಶ್ ಕಾರಂತ್ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಕಂಚಿಕಾನ್ ಸಹಿಪ್ರಾ ಶಾಲೆಯ ಶಾರದಾ ರಂಗಮಂದಿರದಲ್ಲಿ ಹಳೆವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆರ್.ಕೆ. ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ಮಾನವ ಸಂಘಜೀವಿಯಾಗಿದ್ದು, ಸಂಘಟನೆಗಳು ಪ್ರಾಮಾಣಿಕ, ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.

ಒರ್ವ ವ್ಯಕ್ತಿಯ ಕಾಲದ ಅನಂತರ ಅವರ ಸಾಧನೆಗಳನ್ನು ಗುರುತಿಸಿ ಆಚರಿಸುವ ಉತ್ಸವಗಳಿಂದಾಗುವ ತೃಪ್ತಿ ಸಾಧಕರಿಗೆ ಯಾವುದೇ ಪ್ರಶಸ್ತಿಗಿಂತ ದೊಡ್ಡದಾಗಿರುತ್ತದೆ. ವೈಯಕ್ತಿಕ ಬದುಕಿನ ಜೊತೆಗೆ ಸಮಾಜದ ಅಭಿವೃದ್ಧಿಯ ಕಾಳಜಿ ಇರುವುದು ಕೇಲವೇ ಕೆಲವು ಮಹಾನ್ ವ್ಯಕ್ತಿಗಳಿಗೆ ಮಾತ್ರವಾಗಿದ್ದು, ಅಂತಹ ಸಾಧಕರಲ್ಲಿ ಖಂಬದಕೋಣೆ ದಿ. ಆರ್. ಕೆ. ಸಂಜೀವರಾಯರ ಕೊಡುಗೆ ಅಪಾರ. ಈ ನೆಲೆಯಲ್ಲಿ ಮುಂದಿನ ತಲೆಮಾರಿನವರು ಕೂಡಾ ಇವರ ಆದರ್ಶಗಳನ್ನು ಸಾರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಅಲ್ಲದೇ ಜನಪರ ಕಾಳಜಿಯ ಕಾರ್ಯಗಳು ಹಾಗೂ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಿಂತ ನೀರಾಗದೇ ಸದಾ ಪ್ರವಹಿಸುತ್ತಿರಬೇಕು ಎಂದರು.

ಕಂಚಿಕಾನ್ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ನಾರಾಯಣ ಎಸ್. ಕಿಣಿ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಧಾರ್ಮಿಕ ಮುಖಂಡ ಬಿ. ಅಪ್ಪಣ್ಣ ಹೆಗ್ಡೆ ಮತ್ತು ರಂಗಕರ್ಮಿ ಬಿ. ಗಣೇಶ ಕಾರಂತ್ ಇವರನ್ನು ಸನ್ಮಾನಿಸಲಾಯಿತು. ಡಾ. ಕೆ. ಸುಭಾಷ್ ಕಿಣಿ ಶುಭಹಾರೈಸಿದರು. ವಿವಿಧ ಕ್ಷೇತ್ರದ ಗಣ್ಯರಾದ ಕೆ. ಎಸ್. ಪ್ರಕಾಶ್ ರಾವ್, ಎಸ್. ಜನಾರ್ದನ ಮರವಂತೆ, ಬಿಜೂರು ವಿಶ್ವೇಶ್ವರ ಅಡಿಗ, ಯು. ರಮೇಶ ವೈದ್ಯ, ಯು. ಶ್ರೀನಿವಾಸ ಪ್ರಭು, ಶ್ರೀನಿವಾಸ ಉಬ್ಜೆರಿ, ನಾಗರಾಜ ಭಟ್ ಮಕ್ಕಿದೇವಸ್ಥಾನ, ವೆಂಕಟ ದೇವಾಡಿಗ ಕಂಚಿಕಾನ್ಮನೆ, ಪತ್ರಕರ್ತ ಅರುಣ್‌ಕುಮರ್ ಶಿರೂರು ಉಪಸ್ಥಿತರಿದ್ದರು. ಹಳೆವಿದ್ಯಾರ್ಥಿ ಸಂಘದ ಅಧಸ್ಯಕ್ಷ ಕೆ. ರವೀಂದ್ರ ಕಿಣಿ ಸ್ವಗತಿಸಿ, ಪ್ರಾಸ್ತಾವಿಸಿದರು. ನವೀನ್‌ಚಂದ್ರ ಉಪ್ಪುಂದ ನಿರೂಪಿಸಿ ಶೇಷಾಚಲ ಭಟ್ ವಂದಿಸಿದರು. ನಂತರ ಹಳೆವಿದ್ಯಾರ್ಥಿಗಳೀಂದ ನೃತ್ಯಸಿಂಚನ ಮತ್ತು ಎಚ್ಚಮ ನಾಯಕ ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು.

Exit mobile version