Kundapra.com ಕುಂದಾಪ್ರ ಡಾಟ್ ಕಾಂ

ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಕೈಬಿಟ್ಟಿಲ್ಲ: ಶಿಲ್ಪಾ ಶೆಟ್ಟಿ

ಮುಂಬಯಿ: ಪ್ರತಿಯೊಬ್ಬರು ಜೀವನದಲ್ಲಿ ಮೇಲೆ ಬರಬೇಕು. ಇಂದು ನನ್ನ ಸಾಧನೆಯನ್ನು ಗುರುತಿಸಿ ಗಣ್ಯರಿಂದ ನನಗೆ ಸಮ್ಮಾನ ಸಿಕ್ಕಿರುವುದು ಸಂತೋಷವಾಗುತ್ತಿದೆ. ನನ್ನ ಅಮೂಲ್ಯ ಸಮಯವನ್ನು ಮೀಸಲಿಟ್ಟು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರಕ್ಕೆ ಬಂದಿದ್ದೇನೆ. ನಾನು ಬರದಿದ್ದರೆ ಒಂದು ಸುಂದರ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆ. ತುಳುನಾಡ ತಾಯಿಯ ಆಶೀರ್ವಾದದಿಂದ ನಾನಿಂದು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನಾನು ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಘನ್ಸೋಲಿ ಶ್ರೀ ಮೂಕಾಂಬಿಕೆಯ ಸನ್ನಿಧಾನಕ್ಕೆ ಬಂದು ನನ್ನ ಜೀವನ ಪಾವನವಾದಂತಾಗಿದೆ ಎಂದು ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅಭಿಪ್ರಾಯಿಸಿದರು.

ಎ. 2 ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಶ್ರೀ ಮೂಕಾಂಬಿಕಾ ದೇವಿಗೆ ಶತಚಂಡಿಕಾಯಾಗ ಸಹಿತ ಅಷ್ಟಬಂಧ ಬ್ರಹ್ಮಕಲಶೋತ್ಸವ, ಸುವರ್ಣ ಕವಚ ಸಮರ್ಪಣೆಯ ಅಂಗವಾಗಿ ಮಂದಿರಕ್ಕೆ ಭೇಟಿನೀಡಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಪಾಲಕರೊಂದಿಗೆ ಮಂದಿರಕ್ಕೆ ಭೇಟಿ ನೀಡಲು ಸಂತೋಷವಾಗುತ್ತಿದೆ. ಮಂದಿರದ ಒಳಗಡೆ ಬಂದಾಕ್ಷಣ ಭಕ್ತಿ ಉಕ್ಕಿ ಹರಿಯುತ್ತಿದೆ. ತುಳುವರ ಸಂಘಟನಾ ಚಾತುರ್ಯಕ್ಕೆ ಮನತುಂಬಿ ಬರುತ್ತಿದೆ ಎಂದರು.

ಎ. 2 ರಂದು ಮುಂಜಾನೆ 7.30 ರಿಂದ ಮಹಾಗಣಪತಿ ದೇವರಿಗೆ ಬ್ರಹ್ಮಕಲಶಾಭಿಷೇಕ, ಶ್ರೀ ಮೂಕಾಂಬಿಕಾ ದೇವಿಗೆ ತತ್ವ ಹೋಮ, ತತ್ವ ಕಲಶಾಭಿಷೇಕ, ನಾಗದೇವರಿಗೆ ಆಶ್ಲೇಷಾ ಬಲಿ, ಪ್ರಧಾನ ಹೋಮ, ಪವಮಾನ ಹೋಮ, ಕಲಶಾಭಿಷೇಕ, ನಾಗ ಪ್ರಸನ್ನ ಪೂಜೆ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 5 ಗಂಟೆಯಿಂದ ಬ್ರಹ್ಮಕಲಶ ಸಹಿತ ಸಹಸ್ರ ಕಲಶಾಧಿವಾಸ, ಅಧಿವಾಸ ಹೋಮಗಳು, ಅಷ್ಟಾವಧಾನ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ಜರಗಿತು.

ಮಧ್ಯಾಹ್ನ 12 ಗಂಟೆಯಿಂದ ಎರ್ಮಾಳ್‌ ಗಣೇಶ್‌ ಮತ್ತು ಬಳಗದಿಂದ ಭಕ್ತಿ ಭಾವ ಜಾನಪದ ಗೀತೆಗಳ ಗಾಯನ, ಅಪರಾಹ್ನ 3 ಗಂಟೆಯಿಂದ ಧಾರ್ಮಿಕ ಸಭೆ, ಸಂಜೆ 5 ಗಂಟೆಯಿಂದ ನವರಸ ಅಕಾಡೆಮಿ ನೆರೂಲ್‌ ಅವರಿಂದ ಭರತನಾಟ್ಯವನ್ನು ಆಯೋಜಿಸಲಾಗಿತ್ತು. ಕೃಷ್ಣಮೂರ್ತಿ ಭಟ್‌ ವಾಶಿ ಅವರ ನೇತೃತ್ವದಲ್ಲಿ, ವೇದಮೂರ್ತಿ ಕಳತ್ತೂರು ಉದಯ ತಂತ್ರಿಗಳ ಮಾರ್ಗದರ್ಶನದಲ್ಲಿ, ದೇವಾಲಯದ ತಂತ್ರಿಗಳಾದ ವಿದ್ವಾನ್‌ ರಾಮಚಂದ್ರ ಬಾಯರ್‌ ಅವರ ಆಚಾರ್ಯತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಇದೇ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಅವರ ತಾಯಿ ಸುನಂದಾ ಶೆಟ್ಟಿ, ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಶೆಟ್ಟಿ ಅವರನ್ನು ಮಂದಿರದ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಸಮಾರಂಭದಲ್ಲಿ ದೇವಾಲಯದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಉಪಾಧ್ಯಕ್ಷರುಗಳಾದ ನಂದಿಕೂರು ಜಗದೀಶ್‌ ಶೆಟ್ಟಿ, ಕೆ. ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ್‌ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್‌ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಪಿ. ಶೆಟ್ಟಿ, ಸದಸ್ಯರುಗಳಾದ ರಾಘು ಆರ್‌. ಕೋಟ್ಯಾನ್‌, ಕುಟ್ಟಿ ಎ. ಕುಂದರ್‌, ಸುಧಾಕರ್‌ ಸಿ. ಪೂಜಾರಿ, ಶಂಕರ ಮೊಲಿ, ವಿಶ್ವನಾಥ್‌ ಎಸ್‌. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಶ್ರೀಧರ್‌ ಬಿ. ಪೂಜಾರಿ, ಮಹಾಬಲ ಟಿ. ಶೆಟ್ಟಿ, ಹರೀಶ್‌ ಪಡುಬಿದ್ರೆ, ಹರೀಶ್‌ ಕುರ್ಕಾಲ್‌, ಹರೀಶ್‌ ನಲ್ಲೂರು, ಶಕುಂತಳಾ ಎಸ್‌. ಶೆಟ್ಟಿ, ಶ್ರೀ ಮೂಕಾಂಬಿಕಾ ಚಾರಿಟೇಬಲ್‌ ಮಂಡಳದ ಸದಸ್ಯರು, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಸದಸ್ಯರು, ಉಪಸಮಿತಿಯ ಸದಸ್ಯರು, ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸದಸ್ಯೆಯರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Exit mobile version