Kundapra.com ಕುಂದಾಪ್ರ ಡಾಟ್ ಕಾಂ

ಮುರೂರಿನಲ್ಲಿ ಸಚಿವರ ಗ್ರಾಮ ವಾಸ್ತವ್ಯ. ರಾತ್ರಿ ಭರ್ಜರಿ ಊಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಆಂಜನೇಯ ಅವರು ತಾಲೂಕಿನ ಮೂರೂರು ಹಾಡಿಯಲ್ಲಿ ಮರ್ಲಿ ಕೊರಗ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ಮೆರವಣಿಗೆಯಲ್ಲಿ ಸಚಿವರನ್ನು ಸಂಜೆಯ ವೇಳೆ ಹಾಡಿಯೊಳಕ್ಕೆ ಸ್ವಾಗತಿಸಲಾಯಿತು. ಹಾಳೆಯ ಮುಟ್ಟಾಳೆ ಧರಿಸಿದ ಸಚಿವರಿಗೆ ಮಲ್ಲಿಗೆಯ ಹಾರ ಹಾಕಲಾಯಿತು. ಹಾರಕ್ಕೆ ಗುಡ್ಡಗಾಡು ಪ್ರದೇಶದಲ್ಲಿರುವ ಕೆಂಪು ಬಣ್ಣದ ಕೇಪುಳ ಹೂವನ್ನೂ ನೇಯಲಾಗಿತ್ತು. ಸಚಿವರೊಂದಿಗೆ ಅಧಿಕಾರಿಗಳ ತಂಡವೂ ಗ್ರಾಮಕ್ಕೆ ಬಂದಿದ್ದು, ಸ್ಥಳೀಯರೊಂದಿಗೆ ಸಂವಾದ ನಡೆಸಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ಯನ್ನೂ ಸಚಿವರು ನೀಡಿದರು.

ಮರ್ಲಿ ಮನೆಮಂದಿಯೊಂದಿಗೆ ವಿಶೇಷ ವಾಗಿ ಬೆರೆತ ಸಚಿವರು, ಅಡುಗೆ ಕೋಣೆಗೆ ಕೂಡ ಹೋಗಿ ಅಲ್ಲಿ ಅಡುಗೆ ತಯಾರಿ ಮಾಡುವುದನ್ನು ಅಲ್ಲಿಯೇ ನಿಂತು ವೀಕ್ಷಿಸಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್,ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾ ಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್, ಗ್ರಾ.ಪಂ. ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಹಾಗೂ ಕೆಡಿಪಿ ಸದಸ್ಯ ರಾಜು ಪೂಜಾರಿ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹಾಡಿಯ ಜನರೊಂದಿಗೆ ಸಂವಾದ ನಡೆಸಿದ ಸಚಿವರು ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿದರು. ಕೆಲವೊಂದು ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೂರೂರು ಹಾಡಿಯಲ್ಲಿ ಎಸ್‌ಟಿ ಸಮುದಾಯದ ೮ ಮನೆಗಳಿವೆ. ಉಡುಪಿಯಿಂದ ೮೦ ಕಿ.ಮೀ., ಕುಂದಾಪುರದಿಂದ ೫೬ ಕಿ.ಮೀ. ದೂರದಲ್ಲಿರುವ ಈ ಊರಿಗೆ ಬಸ್ ಸೌಕರ್ಯವೇ ಇಲ್ಲ. ಬಸ್ ಬರುವಲ್ಲಿಗೆ ಹೋಗಬೇಕಾದರೆ ೧೨ ಕಿ.ಮೀ. ಕ್ರಮಿಸಬೇಕು. ದೂರ ವಾಣಿ ಸಂಪರ್ಕವೇ ಇಲ್ಲ. ಮೊಬೈಲ್ ನೆಟ್‌ವರ್ಕ್ ಇಲ್ಲವೇ ಇಲ್ಲ. ಸಿಂಗಲ್ ಫೇಸ್ ಕರೆಂಟ್ ಮಾತ್ರ ಇದೆ. ಆದರೂ ಇಲ್ಲಿಂದು ಜನಸಾಗರ. ಸಚಿವರು ಬರುವ ಸಂಭ್ರಮಕ್ಕೆ ಸಾಕ್ಷಿಯಾದದ್ದು ಸುಮಾರು ಒಂದು ಸಾವಿರ ಮಂದಿ. ಅಪರಾಹ್ನ ಒಂದೂವರೆ ಸಾವಿರ ಮಂದಿಗಾಗುವಷ್ಟು ಊಟ ತಯಾರಿಸಲಾಗಿತ್ತು.

ಬೇಳೆ ಸಾರು, ಚಟ್ನಿ-ಚಪಾತಿ ಸಚಿವರಿಗೆ ಸಸ್ಯಾಹಾರವನ್ನು ಒದಗಿಸಲಾಯಿತು. ಚಪಾತಿ, ಪಲ್ಯ, ಹುರುಳಿ ಚಟ್ನಿ, ಕುಚ್ಚಿಗೆ ಅನ್ನ, ಬೇಳೆ ಸಾರು, ಪಾಯಸ ಮಾಡಲಾಗಿತ್ತು. ಸಚಿವರು ಮನೆ ಮಂದಿಯೊಂದಿಗೆ ಊಟ ಸೇವಿಸಿ ಅನಂತರ ಮನೆಯ ಹೊರಾಂಗಣದಲ್ಲಿ ಆಯೋಜಿಸಲಾಗಿದ್ದ ಕೊರಗರ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ವೀಕ್ಷಿಸಿ ರಾತ್ರಿ ಮರ್ಲಿ ಕೊರಗ ಅವರ ಮನೆಯಲ್ಲಿ ನಿದ್ರಿಸಿದರು.

Exit mobile version