Kundapra.com ಕುಂದಾಪ್ರ ಡಾಟ್ ಕಾಂ

ದ್ವೇಷ ಸಾಧನೆ ಮರೆತು ಉಪಕಾರಿಗಳಾಗಬೇಕಿದೆ: ರಾಮಕೃಷ್ಣ ಶೇರುಗಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತದ ಶ್ರೇಷ್ಠತೆಯನ್ನು, ಸನಾತನ ಧರ್ಮದ ಔನತ್ಯವನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಸಂತ ಸ್ವಾಮಿ ವಿವೇಕಾನಂದರನ್ನು ಸದಾ ಸ್ಮರಿಸುವುದರೊಂದಿಗೆ ಅವರ ತತ್ವ, ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಸ್ವಾರ್ಥ, ದ್ವೇಷ ಮರೆತು ಎಲ್ಲರಿಗೂ ಉಪಕಾರಿಯಾಗಿ ಸತ್ಪ್ರಜೆಗಳಾಗಿ ಬದುಕಬೇಕಿದೆ ಎಂದು ಭಗವದ್ಗೀತಾ ಅಭಿಯಾನ ಸಮಿತಿ ಜಿಲ್ಲಾಧ್ಯಕ್ಷ ಬಿಜೂರು ರಾಮಕೃಷ್ಣ ಶೇರುಗಾರ್ ಹೇಳಿದರು.

ಉಪ್ಪುಂದ ಜೇಸಿಐ ಘಟಕ ಹಾಗೂ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರ ಯಳಜಿತ್ ಇವರ ಜಂಟಿ ಆಶ್ರಯದಲ್ಲಿ ಮಾತೃಶ್ರೀ ಸಭಾಭವನದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಮತ್ತು ಸಂತ ವೈ. ಮಂಗೇಶ್ ಶೆಣೈ ರಚಿಸಿದ ’ಭರತಭೂಮಿ-ಪುಣ್ಯಭೂಮಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜೇಸಿಐನಂತಹ ಸಂಘಸಂಸ್ಥೆಗಳು ಗ್ರಾಮ ಮಟ್ಟದಿಂದ ಹೆಚ್ಚು ಹೆಚ್ಚು ಕ್ರಿಯಾಯೋಜನೆಗಳಲ್ಲಿ ಕ್ರಿಯಾತ್ಮಕವಾಗಿ, ಸಮಾಜಮುಖಿ ಕಾರ್ಯಪ್ರವೃತ್ತಿಯನ್ನು ಬೆಳೆಸಿಕೊಂಡಲ್ಲಿ ಆ ಗ್ರಾಮವು ಆದರ್ಶ ಗ್ರಾಮವಾಗಲಿದೆ. ಅಲ್ಲದೇ ಸ್ವಸ್ಥ ಸಮಾಜ ನಿರ್ಮಾಣ ಪ್ರಜ್ಞಾವಂತ, ಕ್ರಿಯಾಶೀಲ, ನಾಗರಿಕರನ್ನು ರೂಪಿಸುವ ಜವಾಬ್ದಾರಿಯೂ ಕೂಡಾ ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು.

ಜೇಸಿಐ ಘಟಕದ ಅಧ್ಯಕ್ಷ ಮಂಜುನಾಥ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಯಳಜಿತ್ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಸಂತ ವೈ. ಮಂಗೇಶ್ ಶೆಣೈ ಇವರನ್ನು ಗೌರವಿಸಲಾಯಿತು. ಜೇಸಿಐ ಸ್ಥಾಪಾಧ್ಯಕ್ಷ ಎನ್. ದಿವಾಕರ್ ಶೆಟ್ಟಿ, ಪೂವಾಧ್ಯಕ್ಷ ಯು. ಪ್ರಕಾಶ್ ಭಟ್, ಜ್ಯೂ.ಜೇಸಿಐ ಅಧ್ಯಕ್ಷ ರತನ್ ದೇವಾಡಿಗ ಉಪಸ್ಥಿತರಿದ್ದರು. ಪೂವಾಧ್ಯಕ್ಷ ಸುಬ್ರಹ್ಮಣ್ಯ ಗಾಣಿಗ ಪ್ರಾಸ್ತಾವಿಸಿ, ಕಾರ್ಯದರ್ಶಿ ಗುರುರಾಜ್ ಶೆಟ್ಟಿ ವಂದಿಸಿದರು. ನಂತರ ಚಿಣ್ಣರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇದುವರೆಗೆ ಭಗವದ್ಗೀತೆ ದೇವರಕೋಣೆಯಲ್ಲಿಟ್ಟು ಪೂಜಿಸಿ ಕೈಮುಗಿಯುವುದಕ್ಕಷ್ಟೇ ಸೀಮಿತವಾಗಿತ್ತು. ಈ ಗೀತೆಯು ಪ್ರತಿಯೊಂದು ಮನೆಗಳಲ್ಲಿ ಪಠಿಸಿಬೇಕೆಂಬ ಉದ್ದೇಶದಿಂದ ಕಳೆದ ಆರು ವರ್ಷದಿಂದ ಸಿರಸಿ ಸೋಂದಾ ಸ್ವರ್ಣವಲ್ಲಿ ಮಠಾಧೀಶರ ಆಶಯದಂತೆ ಮಾನವ ಸಂಪನ್ಮೂಲ ಕ್ರೋಢಿಕರಿಸಿ ಸಾಮಾಜಿಕವಾಗಿ ಹಮ್ಮಿಕೊಂಡ ಗೀತಾ ಪಠಣ, ಕಂಠಪಾಠ ಹಾಗೂ ಪ್ರಸಾರ ಅಭಿಯಾನ ಯಶಸ್ವಿಯಾಗಿದೆ.- ಬಿಜೂರು ರಾಮಕೃಷ್ಣ ಶೇರುಗಾರ್, ಜಿಲ್ಲಾಧ್ಯಕ್ಷರು ಭಗವದ್ಗೀತಾ ಅಭಿಯಾನ ಸಮಿತಿ.

 

Exit mobile version