Kundapra.com ಕುಂದಾಪ್ರ ಡಾಟ್ ಕಾಂ

ಮದುವೆ ಮಾಡಿಕೊಡಲು ನಿರಾಕರಿಸಿದ ಯುವತಿ ತಾಯಿಗೆ ಗಂಭೀರ ಹಲ್ಲೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತನ್ನ ಮಗಳ ಮದುವೆ ಮಾಡಿಕೊಡಲು ನಿರಾಕರಿಸಿದ ತಾಯಿಗೆ ಹಲ್ಲೆ ನಡೆಸಿದ ಘಟನೆ ಕುಂದಾಪುರದ ದತ್ತಾತ್ರೇಯ ಅಪಾರ್ಟ್‌ಮೆಂಟ್‌ನಲ್ಲಿ ವರದಿಯಾಗಿದೆ. ಅಪಾರ್ಟ್‌ಮೆಂಟ್ ನಿವಾಸಿ ನಿತಿನ್ (28) ಹಲ್ಲೆ ನಡೆಸಿದ ಯುವಕ. ಸುಜಾತ ಗಾಣಿಗ (42) ಹಲ್ಲೆಗೆ ಒಳಗಾದ ಮಹಿಳೆ.

ಕುಂದಾಪುರದ ಕಾರ್ಯಕ್ರಮವೊಂದಕ್ಕೆ ಮಗಳೊಂದಿಗೆ ತೆರಳಿದ್ದ ಸುಜಾತ, ತಾವು ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್ ಲಿಫ್ಟ್ ಮೂಲಕ ತೆರಳುತ್ತಿದ್ದ ವೇಳೆ ಏಕಾಏಕಿ ತಾಯಿ ಮತ್ತು ಮಗಳ ಹೊರಗೆಳೆದು ಥಳಿಸಿದ ಯುವಕ, ಮಹಿಳೆಗೆ ಹಲ್ಲೆಗೈದು ಆಸಿಡ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಮಹಿಳೆಯ ತಲೆ, ಮುಖ, ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸುಜಾತಾ ಗಾಣಿಗ ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಆಕೆಯ ಮಗ ಮಣಿಪಾಲದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮನೆಯಲ್ಲಿ ಸುಜಾತಾ ಗಾಣಿಗ ಹಾಗೂ ಆಕೆಯ ಮಗಳು ಇಬ್ಬರೇ ವಾಸಿಸುತ್ತಿದ್ದಾರೆ. ಕಳೆದ ನಾಲು ವರ್ಷಗಳಿಂದ ಆಕೆಯ ಮಗಳಿಗೆ ಪ್ರೀತಿಸುವಂತೆ ಆರೋಪಿ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ತಾಯಿ ಮಗಳು ಹಿಂತಿರುಗುತ್ತಿದ್ದ ವೇಳೆ ಕಾದು ಕುಳಿತ ಆರೋಪಿ ನಿತಿನ್ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಹಲ್ಲೆ ನಡೆಸಿದ್ದಾನೆ ದೂರಿನಲ್ಲಿ ತಿಳಿಸಿದ್ದಾರೆ.

ಕುಂದಾಪುರ ಆಸ್ಪತ್ರೆಗೆ ತೆರಳಿದ ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರ ಅಧ್ಯಕ್ಷೆ ರಾಧಾದಾಸ್, ಗಾಣಿಗ ಯುವ ಸಂಘಟನೆ ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ ಕೋಟ, ಕೋಟೇಶ್ವರ ಗಾಣಿಗ ಯುವ ಸಂಘಟನೆ ಅಧ್ಯಕ್ಷ ನಾಗರಾಜ್ ಬಿ.ಜಿ, ಕುಂದಾಪುರ ಗಾಣಿಗ ಯುವ ಸಂಘಟನೆಯ ಪ್ರಮುಖ ಗುರುರಾಜ್ ಹಂಗಳೂರು ಮೊದಲಾದವರು  ಸುಜಾತ ಅವರ ಕುಟುಂಬಿಕರಿಗೆ ಸಾಂತ್ವನ ಹೇಳಿದ್ದಾರೆ.  ಕುಂದಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆ ಬಲೆ ಬೀಸಲಾಗಿದೆ.

Exit mobile version