Kundapra.com ಕುಂದಾಪ್ರ ಡಾಟ್ ಕಾಂ

ಆತ್ಮಶುದ್ಧಿಯಿಂದ ಪ್ರೀತಿ-ಸಾಮರಸ್ಯದ ಸುಂದರ ಸಮಾಜ ನಿರ್ಮಾಣ ಸಾಧ್ಯ: ಸಚಿವ ರಮಾನಾಥ ರೈ

ಉಳ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಧಾರ್ಮಿಕ ಸಭಾ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದು ಮನುಷ್ಯ ದ್ವೇಷಿಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಜಾತಿ, ಧರ್ಮ, ಭಾಷೆ, ಪಂಥವನ್ನು ಮೀರಿ ಮನುಷ್ಯಕೋಟಿಯನ್ನು ಪ್ರೀತಿಸುವುದನ್ನು ಕಲಿತರೆ ಮಾತ್ರವೇ ಜಗತ್ತನ್ನು ಗೆಲ್ಲಬಹುದೇ ಹೊರತು ದ್ವೇಷದಿಂದಲ್ಲ. ನಿಶ್ಕಲ್ಮಶ ಮನಸ್ಸಿನಲ್ಲಿ ದೇವರ ಸ್ಮರಣೆಯಿಂದ ಸಾಕ್ಷಾತ್ಕಾರ ಸಾಧ್ಯವಿದೆ. ದೇವಳದ ಬ್ರಹ್ಮಕಲಶೋತ್ಸವದೊಂದಿಗೆ ಆತ್ಮಶುದ್ಧಿಯಾದಾಗ ಮಾತ್ರ ಪ್ರೀತಿ ಸಾಮರಸ್ಯದ ಸುಂದರ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು ಉಳ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನವೀಕೃತ ಶಿಲಾಮಯ ದೇವಾಲಯದ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವದಲ್ಲಿ ಶಿಲಾಮಯ ಗರ್ಭಗುಡಿ ಉದ್ಘಾಟಿಸಿ ಮಾತನಾಡಿದರು. ರಾಜಾಶ್ರಯದಲ್ಲಿ ನಡೆಸಲಾಗುತ್ತಿದ್ದ ದೇವಾಲಯಗಳು ಕಾಲಕ್ರಮೇಣ ಕೆಲವೇ ಕುಟುಂಬದ ಒಡೆತನದಲ್ಲಿ ನಡೆಯುತ್ತಿತ್ತು. ಆದರೀಗ ಬಹುಪಾಲು ದೇವಾಲಯಗಳು ಜನಾಶ್ರಯದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಊರಿನ ಅಭಿವೃದ್ಧಿಯ ಸಂಕೇತದ ಸೂಚಕವಾಗಿದೆ. ಇದರಿಂದ ಊರಿನ ಶಕ್ತಿ ಹೆಚ್ಚುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಯುವ ಜನಾಂಗಕ್ಕೆ ಧಾರ್ಮಿಕ ಆಚರಣೆಗಳ ಬಗೆಗೆ ತಿಳಿದಿಲ್ಲ. ಧರ್ಮಾಚರಣೆಯಿಂದ ವಿಮುಖರಾಗುತ್ತಿದ್ದಾರೆ ಎನ್ನುವ ಅಪವಾದದ ನಡುವೆಯೇ ಹೆಚ್ಚೆಚ್ಚು ದೇವಾಲಯಗಳು ಜೀರ್ಣೋದ್ಧಾರದಲ್ಲಿ ತೊಡಗಿಕೊಳ್ಳುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದರು.

ಧಾರ್ಮಿಕ ದತ್ತಿ ಹಾಗೂ ಜವಳಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ತೀರ್ಥ ಮಂಟಪವನ್ನು ಉದ್ಘಾಟಿಸಿ ಮಾತನಾಡಿ ಕರಾವಳಿ ಭಾಗದ ಜನರು ಸಾಹಸಪ್ರೀಯರು. ಕಷ್ಟ ಬಂದಾಗ ಎಂದೂ ಹೆದರದೇ ಎದುರಿಸಿ ಜಯಶಾಲಿಗಳಾಗಿದ್ದಾರೆ. ನಾಲ್ಕು ತಿಂಗಳಿನಲ್ಲಿ ಸರಕಾರದ ಹೆಚ್ಚಿನ ಅನುದಾನವಿಲ್ಲದೇ ಬಹುಕೋಟಿ ವೆಚ್ಚದಲ್ಲಿ ಸುಂದರ ದೇವಾಲಯವನ್ನು ನಿರ್ಮಿಸಿರುವುದು ಇಲ್ಲಿನ ಜನರ ಆರ್ಥಿಕ ಶಕ್ತಿಯನ್ನು ಸೂಚಿಸುತ್ತದೆ. ಇದು ಜನಸೇವೆಯೂ ವಿನಿಯೋಗವಾಗುವಂತಾಗಲಿ ಎಂದರು.

ಕಟ್ಟೆಮನೆ ಚಿಕ್ಕಯ್ಯ ಶೆಟ್ಟರ ಸ್ಮರಣಾರ್ಥ ಯು. ಕಾಳಿಂಗ ಶೆಟ್ಟಿ ಉಳ್ತೂರು ಬಸ್ ತಂಗುದಾಣವನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಘಾಟಿಸಿದರು. ಶಿಲಾಮಯ ತೀರ್ಥಮಂಟಪ ಕೊಡುಗೆ ನೀಡಿದ ಉಳ್ತೂರು ಮೋಹನದಾಸ ಶೆಟ್ಟಿ ಕಟ್ಟೆಮನೆ ಹಾಗೂ ಜಯಶ್ರೀ ಮೋಹನದಾಸ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಿರ್ದೇಶಕ ಅಂಬ್ಲಿಗೋಳ ಪ್ರಭಾಕರ ಶೆಟ್ಟಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಂದ್ರ ಹೆಗ್ಡೆ ಉಪಸ್ಥಿತರಿದ್ದರು. ಉಳ್ತೂರು ಮೋಹನದಾಸ ಶೆಟ್ಟಿ ಕಟ್ಟೆಮನೆ ಸ್ವಾಗತಿಸಿದರು. ಅಜಿತ್ ಶೆಟ್ಟಿ ಉಳ್ತೂರು ವಂದಿಸಿದರು. ಅಶೋಕ್ ಪಕ್ಕಡ, ಮಹೇಶ್ ವಕ್ವಾಡಿ ಹಾಗೂ ಕಾರ್ಯಕ್ರಮ ನಿರೂಪಿಸಿದರು.

ನಷ್ಟವಾದ ದೈವಚೈತನ್ಯ ಸುಸ್ತಿತಿಯನ್ನು ಹೊಂದುವ ಪ್ರಕ್ರಿಯೆ ಬ್ರಹ್ಮಕಲಶೋತ್ಸವವಾಗಿದ್ದು, ಜೀಣೋದ್ಧಾರ ಪಕ್ರಿಯೆಯ ಫಲವನ್ನು ಅರಿತರೆ ಸತ್ಕಾರ ಸಾರ್ಥಕ್ಯ ಕಾಣುತ್ತದೆ. ಊರ ದೇಗುಲ ದುಸ್ಥಿತಿಯಲ್ಲಿದ್ದರೇ ಊರಿನ ಜನರು ಪುಣ್ಯವಂತರೇ ಆಗಿದ್ದರೂ ಅಶುಭವಾಗುತ್ತದೆ ಎಂಬುದರ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಹಾಗಾಗಿ ದೇವಸ್ಥಾನಗಳ ಜೀಣೋದ್ಧಾರ ಪ್ರಕ್ರಿಯೆ ಪ್ರಮುಖವಾದುದು ಎಂದರು. -ವೇದಮೂರ್ತಿ ಭಾಸ್ಕರ ಭಟ್ ಪಂಜ

 

Exit mobile version