Kundapra.com ಕುಂದಾಪ್ರ ಡಾಟ್ ಕಾಂ

ಸಾಸ್ತಾನ: ಟೋಲ್‌ ವಿರುದ್ಧ ಹೆಚ್ಚಿದ ಪ್ರತಿಭಟನೆಯ ಕಾವು

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಸ್ಥಳೀಯರಿಗೆ ಟೋಲ್‌ನಲ್ಲಿ ವಿನಾಯಿತಿ ನೀಡಬೇಕು ಎನ್ನುವ ಸಾರ್ವಜನಿಕರ ಹೋರಾಟದ ಕಾವು ತೀವ್ರಗೊಂಡಿದೆ. ಶನಿವಾರ ಸಾಸ್ತಾನದ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಪ್ರತಿಭಟನ ನಿರತರು ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಿದ ಜಿಲ್ಲಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅನಂತರ ಟೋಲ್‌ಗೇಟಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿ ಪೊಲೀಸರಿಂದ ಬಂಧನಕ್ಕೊಳಗಾದರು.

ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲಾಧಿಕಾರಿಗಳು ಟೋಲ್‌ ವಿಚಾರದಲ್ಲಿ ಅವಸರದ ತೀರ್ಮಾನ ಕೈಗೊಂಡಿದ್ದಾರೆ. ಏಕಾಏಕಿ ಟೋಲ್‌ಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದರು.

ಸಾಮಾಜಿಕ ಹೋರಾಟಗಾರ ಕಿಶೋರ ಕುಮಾರ್‌ ಮಾತನಾಡಿ, ಉಡುಪಿ ಜಿಲ್ಲಾಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಬಿಹಾರದ ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸಾರ್ವಜನಿಕರ ಬೇಡಿಕೆಗಳಿಗೆ ಬೆಲೆ ನೀಡುವ ಬದಲು ಬಂಡವಾಳಶಾಹಿಗಳ ಪರ ನಿಂತಿದ್ದಾರೆ ಎಂದರು.

ಇಂದಿನ ಪೊಲೀಸ್‌ ಬಂದೋಬಸ್ತ್, ಪ್ರತಿಭಟನೆ ಯನ್ನು ಹತ್ತಿಕ್ಕಲು ಮಾಡುತ್ತಿರುವ ಪ್ರಯತ್ನಗಳನ್ನು ನೋಡಿದರೆ ಸ್ವಾತಂತ್ರÂ ಪೂರ್ವದ ದಿನಗಳು ನೆನಪಾಗುತ್ತಿವೆ ಎಂದು ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ ಕಾವೇರಿ ತಿಳಿಸಿದರು. ಸಾರ್ವಜನಿಕರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ನೀಡದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌ ಎಚ್ಚರಿಕೆ ನೀಡಿದರು.

ಹೋರಾಟಗಾರರನ್ನು ಭಯೋತ್ಪಾದಕರಂತೆ ಬಿಂಬಿಸಲಾಗುತ್ತಿದ್ದು, ಜಿಲ್ಲಾಧಿಕಾರಿಗಳಿಗೆ ಜನಸಾಮಾನ್ಯರ ಸಮಸ್ಯೆ ಕುರಿತು ಕಾಳಜಿ ಇಲ್ಲ ಎಂದು ಜಯಕರ್ನಾಟಕ ಸಂಘಟನೆ ಅಣ್ಣಪ್ಪ ಕುಲಾಲ್‌, ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಗುಂಡ್ಮಿ ಮಸೀದಿಯ ಮಹಮ್ಮದ್‌ ಮುಂತಾದವರು ಅಭಿಪ್ರಾಯಪಟ್ಟರು.

ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಸತೀಶ್‌ ಪೂಜಾರಿ, ಹೆದ್ದಾರಿ ಜಾಗೃತ ಸಮಿತಿಯ ಅಧ್ಯಕ್ಷ ಪ್ರತಾಪ್‌ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಶಂಕರ ಕುಂದರ್‌ ಕೋಟ ಮುಂತಾದವರು ಮಾತನಾಡಿದರು.

ಹೋರಾಟಗಾರರ ಬಂಧನ: ಪ್ರತಿಭಟನ ಸಭೆಯ ಅನಂತರ ಹೋರಾಟಗಾರರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು ಹಾಗೂ ಉಡುಪಿಯಿಂದ ಕುಂದಾಪುರಕ್ಕೆ ತೆರಳುವ ಮಾರ್ಗದಲ್ಲಿ ಕೆಲವು ನಿಮಿಷಗಳ ಕಾಲ ರಸ್ತೆ ತಡೆ ನಡೆಸಿದರು.

ಈ ಸಂದರ್ಭ ಸಾಸ್ತಾನ ಮುಖ್ಯಪೇಟೆಯ ಬಳಿ ಜಮಾವಣೆಗೊಂಡಿದ್ದ ನೂರಾರು ಸಂಖ್ಯೆಯ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು ಟೋಲ್‌ ಕೇಂದ್ರದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ತಡೆದರು.

Exit mobile version