Kundapra.com ಕುಂದಾಪ್ರ ಡಾಟ್ ಕಾಂ

ಹಿಂದೂಸ್ಥಾನಿಯರ ಸಾಮರ್ಥ್ಯದ ಅರಿವು ಮೂಡಿಸುವ ಅಗತ್ಯವಿದೆ: ಹರಿಬಾಉ ವಝೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ರಿಟೀಷರು ಬರೆದ ತಿರುಚಿದ ಇತಿಹಾಸ ನಮ್ಮ ದೇಶದ ಪಠ್ಯಕ್ರಮವಾಗಿದೆ. ಆದರೆ ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ದೇಶದವರೇ ಬರೆದ ಭವ್ಯ ಇತಿಹಾಸ ನಮ್ಮ ಶಿಕ್ಷಣದಲ್ಲಿ ಪಠ್ಯವಾಗುವ ವಿಶ್ವಾಸವಿದೆ. ಭಾರತೀಯರು ಒಂದು ಕಾಲದಲ್ಲಿ ಬ್ರಿಟೀಷರಿಗೆ ಗುಲಾಮರಾಗಿದ್ದರೂ ಸ್ವಾಭಿಮಾನವನ್ನು ಮರೆತಿರಲಿಲ್ಲ. ಸ್ವಾತಂತ್ರ್ಯ ಬಳಿಕ ಹಿಂದೂಸ್ಥಾನಿಯರು ತಮ್ಮ ತಾಕತ್ತನ್ನು ಮರೆತುಬಿಟ್ಟಿದ್ದಾರೆ. ಇಂದು ಅದನ್ನು ಎಚ್ಚರಿಸುವ ಅಗತ್ಯವಿದೆ ಎಂದು ಅಖಿಲ ಭಾರತ ಇತಿಹಾಸ ಸಂಕಲನ ಯೋಜನೆ ನವದೆಹಲಿಯ ಹರಿಬಾಉ ವಝೆ ಹೇಳಿದರು.

ಅವರು ಛತ್ರಪತಿ ಶಿವಾಜಿ ಅಭಿಮಾನಿ ಬಳಗ ಬಸ್ರೂರು ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಬಸ್ರೂರು ತಿರುಮಲ ವೆಂಕಟರಮಣ ದೇವಸ್ಥಾನದ ಆಜಾದ್ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಬಸ್ರೂರು ಇತಿಹಾಸ ದಿನದ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ದೇಶದ ಸಂಸ್ಕೃತಿ ಪ್ರಪಂಚದ ಇತರೇ ದೇಶದ ಸಂಸ್ಕೃತಿಗಿಂತ ಭಿನ್ನವಾದುದು. ಭಾರತ ದೇಶದ ಮೇಲೆ ಇತರರು ದಾಳಿ ಮಾಡಿದ ದಾಖಲೆಗಳಿವೆಯೇ ಹೊರತು, ಭಾರತೀಯರು ಎಂದಿಗೂ ಬೇರೆ ದೇಶದವರ ಮೇಲೆ ದಾಳಿ ಮಾಡಿದವರಲ್ಲ. ಕಷ್ಟದಲ್ಲಿರುವವರ ರಕ್ಷಣೆಯೇ ಧರ್ಮವೆಂದು ನಂಬಿ ನಡೆದವರು ನಾವು ಎಂದ ಅವರು ನಮ್ಮ ದೇಶದ ನೈಜ ಇತಿಹಾಸ ತಿಳಿಯಬೇಕಿದ್ದರೇ, ಪ್ರಾದೇಶಿಕ ಇತಿಹಾಸದ ಅಧ್ಯಯನದ ಅವಶ್ಯಕತೆ ಇದೆ ಎಂದರು. ಛತ್ರಪತಿ ಶಿವಾಜಿ ಅವರಂತ ರಾಜರುಗಳ ನೈಜ ಚರಿತ್ರೆಯನ್ನು ಹಾಗೂ ಅವರ ಬಸ್ರೂರಿಗೆ ಭೇಟಿ ನೀಡಿದ ನೈಜ ಉದ್ದೇಶವನ್ನು ಅವಲೋಕಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ ಭಾರತೀಯರು ನಮ್ಮ ಇತಿಹಾಸವನ್ನು ದಾಖಲಿಸಿ ಉಳಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದರಿಂದ ಬೇರೆಯವರು ನಮ್ಮ ದೇಶದ ಇತಿಹಾಸವನ್ನು ಬರೆಯುವಂತಾಯಿತು. ಹಿಂದೂಗಳು ಎಂದಿಗೂ ಮತ್ತೊಂದು ಧರ್ಮವನ್ನು ದ್ವೇಷಿಸುವ ಮನೋಭಾವದವರಲ್ಲ. ಶಿವಾಜಿ ಮಹಾರಾಜರನ್ನು ನೆನೆಯುವ ಮೂಲಕ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದರು.

ಪುಣೆ ಶಿವಾಜಿ ಸಂಶೋಧನಾ ಕೇಂದ್ರದ ಸಂಶೋಧಕ ಸಂದೀಪ್ ರಾವ್ ಮಿಲಿಂದ್ ಅಖಿಲ ಭಾರತ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಸಂಚಾಲಕ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರದೀಪ್‌ಕುಮಾರ್ ಶೆಟ್ಟಿ ಕೆಂಚನೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಪ್ರಾಂಶುಪಾಲ ಕನರಾಡಿ ವಾದಿರಾಜ ಭಟ್ ಸ್ವಾಗತಿಸಿ, ಪಾಂಡುರಂಗ ಪ್ರಭು ವಂದಿಸಿದರು. ಬಿ. ವಿಠ್ಠಲ ಆಚಾರ್ಯ ಪ್ರಾರ್ಥಿಸಿ, ಶಂಕರ ಅಂಕದಕಟ್ಟೆ ವಂದೇ ಮಾತರಂ ಗೀತೆ ಹಾಡಿದರು. ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Exit mobile version