Kundapra.com ಕುಂದಾಪ್ರ ಡಾಟ್ ಕಾಂ

ನೇರಂಬಳ್ಳಿ ಮಠದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ; ಎಂಟು ಸಾವಿರ ಮಂದಿ ಭಕ್ತರು ಭಾಗಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮೀಪದ ನೇರಂಬಳ್ಳಿ ಮಠದಲ್ಲಿ ವೇದಮೂರ್ತಿ ಪ್ರಾಣೇಶ ತಂತ್ರಿ ಹಾಗೂ ಶ್ರೀಮತಿ ಸೌಮ್ಯ ಪ್ರಾಣೇಶ್ ತಂತ್ರಿಯವರ ದಾಂಪತ್ಯ ಜೀವನದ ದಶಮಾನೋತ್ಸವದ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ದಾಸ ಸಾಹಿತ್ಯ ಶೈಲಿಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಕಲ ವೈಭವದೊಂದಿಗೆ ಸಂಭ್ರಮ ಸಡಗರದಲ್ಲಿ ಜರುಗಿತು.

ತಿರುಪತಿಯ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ನಿವೃತ್ತ ವಿಶೇಷಾಧಿಕಾರಿ ಅಪ್ಪಣ್ಣಾಚಾರ್ಯ ಅವರು ಕಲ್ಯಾಣೋತ್ಸವದ ನೇತ್ರತ್ವ ವಹಿಸಿ, ಬಹಳ ಸುಂದರವಾಗಿ ಭಕ್ತ ಜನರಲ್ಲಿ ಭಕ್ತಿ ಭಾವ ಮೇಳೈಸುವಂತೆ ಜಗದೊಡೆಯ ಶ್ರೀನಿವಾಸ ಮತ್ತು ಪದ್ಮಾವತಿಯರ ಅಮ್ಮನವರ ವಿವಾಹ ಮಹೋತ್ಸವವನ್ನು ನೆರವೇರಿಸಿದರು. ನೂಕು ನುಗ್ಗಲುವಿಲ್ಲದೇ ಅತ್ಯಂತ ಶಿಸ್ತುಬದ್ದವಾಗಿ ಕಾರ್ಯಕ್ರಮ ಆಯೋಜಿಸಲ್ಪಟ್ಟಿದ್ದು ಸುಮಾರು ೮ ಸಾವಿರ ಮಂದಿ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡು ಕೃತಾರ್ಥರಾದರು.

ಉಡುಪಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಭಗವಂತನ ಅನಂತ ಲೀಲೆಗಳಲ್ಲಿ ಕಲ್ಯಾಣೋತ್ಸವ ಒಂದಾಗಿದೆ. ಭಗವದಾರಾಧನೆಯ ಚಿಂತನೆಯನ್ನು ಭಕ್ತಿಯೋಗದ ಮೂಲಕ ನಾವೆಲ್ಲರೂ ಮಾಡುವ ಅಗತ್ಯವಿದೆ. ಆರಾಧನೆ ಕೇವಲ ಬಿಂಬದಲ್ಲಿ ಮಾತ್ರವಾಗದೇ ನಮ್ಮ ಜೀವನ ಶೈಲಿಯು ಭಗವಂತನ ಪೂಜೆಯ ಒಂದು ಅಂಗವಾಗಬೇಕು. ಬಿಂಬದಲ್ಲಿ ಪೂಜೆಯನ್ನು ನಡೆಯಿಸಿ ಬೇರೆಯವರಲ್ಲಿ ದ್ವೇಷ, ಅಸೂಯೆ, ವಂಚನೆ, ನಿಂದನೆ ಮಾಡಿದರೆ ಭಗವಂತನ ಅನುಗ್ರಹವಾಗದು. ಕೃಷ್ಣನ ಮಾತಿನಂತೆ ಶತ್ರು-ಮಿತ್ರರಲ್ಲಿ, ಸುಖ-ದುಖಗಳಲ್ಲಿ, ಮಾನ-ಅಪಮಾನಗಳಲ್ಲಿ ಸಮಚಿತ್ತತೆಯನ್ನು ಕಾಯ್ದುಕೊಂಡವನು ಮಾತ್ರ ಭಗವಂತನಿಗೆ ಅತೀವ ಪ್ರೀತಿ ಪಾತ್ರನು. ನಮ್ಮಲ್ಲಿರುವ ಸಂಪತ್ತನ್ನು ಭಗವದ್ಭಕ್ತರ ಕರ್ಮಗಳಿಗೆ ವಿನಿಯೋಗಿಸಿದಾಗ ಮಾತ್ರ ಸಾರ್ಥಕ್ಯ ಸಾಧ್ಯ ಎನ್ನುವುದೇ ಕಲ್ಯಾಣೋತ್ಸವದ ಸಂದೇಶವಾಗಿದೆ. ಭಗವಂತ ಕಲ್ಯಾಣಗುಣ ಪರಿಪೂರ್ಣನೆಂದು ಚಿಂತನೆ ಮಾಡುವ ಮೂಲಕ ನಮ್ಮ ಜೀವನವೂ ನಿತ್ಯ ಕಲ್ಯಾಣ ಪರಿಪೂರ್ಣವಾಗುವುದು. ಆದುದರಿಂದ ಶ್ರೀನಿವಾಸನ ಕೃಪೆ ನಮ್ಮೆಲ್ಲರ ಮೇಲಿದ್ದು, ಜೀವನ ಸಾರ್ಥಕವಾಗುವ ಸಾಧನೆಗಳು ನಮ್ಮಿಂದ ಆಗುವಂತೆ ಅನುಗ್ರಹ ಸಿಗುವಂತಾಗಲಿ ದುರ್ಗುಣಗಳು ದೂರವಾಗಿ ಸದ್ಗುಣಗಳು ಮೇಳೈಸಿ ನಿತ್ಯಕಲ್ಯಾಣ ಪ್ರಾಪ್ತವಾಗಲಿ ಎಂದು ಹಾರೈಸಿದರು.

ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು, ಭೀಮನಕಟ್ಟೆ ಕಿರಿಯ ಮಠಾಧೀಶರಾದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಸೇವಾಕರ್ತರಾದ ವೇ.ಮೂ ಲಕ್ಮೀನಾಯಣ ತಂತ್ರಿ, ವೇ.ಮೂ. ಪ್ರಾಣೇಶ ತಂತ್ರಿ ಮತ್ತು ಶ್ರೀಮತಿ ಸೌಮ್ಯ ಪ್ರಾಣೇಶ ತಂತ್ರಿ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಮಂಡಳಿ ಸದಸ್ಯ ಬಿ.ಎಂ.ಸುಕುಮಾರ ಶೆಟ್ಟಿ, ಹಿರಿಯ ಉದ್ಯಮಿಗಳಾದ ಎನ್.ಆರ್. ನಾರಾಯಣ ರಾವ್ ಬೆಂಗಳೂರು, ಎನ್. ಆರ್. ನಾಗಪ್ಪಯ್ಯ ಹೈದರಾಬಾದ್, ಕುಂಭಾಸಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರರಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಸಹ ಮೋಕ್ತೇಸರರಾದ ಕೆ. ರಮಣ ಉಪಾಧ್ಯಾಯ, ಕಮಲಶಿಲೆ ದೇವಳದ ಆಡಳಿತ ಮೊಕ್ತೇಸರರಾದ ಸಚ್ಚಿದಾನಂದ ಚಾತ್ರ, ಉದ್ಯಮಿ ಕೃಷ್ಣಮೂರ್ತಿ ರಾವ್, ಹೋಟೆಲ್ ಉದ್ಯಮಿ ಎನ್. ರಾಘವೇಂದ್ರ ರಾವ್ ಹೈದರಾಬಾದ್, ಧಾರ್ಮಿಕ ದತ್ತಿ ಇಲಾಖೆಯ ಆಗಮ ಪಂಡಿತ ಕೆಂಜ ಶ್ರೀಧರ ತಂತ್ರಿಗಳು, ಉದ್ಯಮಿ ಜಗದೀಶ ಯಡಿಯಾಳ್ ಇನ್ನಿತರರು ಉಪಸ್ಥಿತರಿದ್ದರು.

Exit mobile version