Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಮನಸೂರೆಗೊಂಡ ಗಿಂಡಿ ನರ್ತನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಪರೂಪದ ಸಾಂಪ್ರದಾಯಿಕ ಗ್ರಾಮೀಣ ಕಲೆಯನ್ನು ಉಳಿಸಿ ಬೆಳೆಸುವ ಜೊತೆಗೆ ಜನರಲ್ಲಿ ಭಕ್ತಿ ಭಾವವನ್ನು ವೃದ್ಧಿಸುವ ನಿಟ್ಟಿನಲ್ಲಿ ಗಿಂಡಿ ನರ್ತನ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇಂತಹ ವಿಶೇಷ ಜಾನಪದ ನೃತ್ಯ ಗಿಂಡಿ ನರ್ತನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಫೆ.೧೨ರಂದು ತಿಂಗಳ ಕಾರ್ಯಕ್ರಮದ ಅಂಗವಾಗಿ ಜರುಗಿತು.

ಗುಡ್ಡೆಯಂಗಡಿಯ ಉದ್ಯಮಿ ಹಾಗೂ ಗಿಂಡಿ ನರ್ತನ ಕಲಾವಿದ ಸತೀಶ್ ಎಂ. ನಾಯಕ್ ಅವರು ಸುಮಾರು ೧.೩೦ಗಂಟೆ ಕಾಲ ಭಜನೆ, ಭಕ್ತಿ ಭಾವವನ್ನು ಮೇಳೈಸ ಬಲ್ಲ ಭಕ್ತಿ ಗೀತೆಗಳಿಗೆ ತಲೆಯ ಮೇಲೆ ಗಿಂಡಿಯನ್ನು ಹೊತ್ತು ವಿವಿಧ ಭಂಗಿಗಳಲ್ಲಿ ನರ್ತಸಿ ನೆರೆದ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಭಗವಂತನ ಲೀಲೆ, ಅವತಾರ, ಧರ್ಮಚಿಂತನೆಯನ್ನು ಸಾಮಾನ್ಯ ಜನರೂ ಸರಳವಾಗಿ ಅರ್ಥ ಮಾಡಿಕೊಳ್ಳಬಲ್ಲ ರೀತಿಯಲ್ಲಿ ನರ್ತನಾಭಿನಯನದ ಮೂಲಕ ಮನೋಜ್ಞವಾಗಿ ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಅವರು ಅಕಾಡೆಮಿಯ ವತಿಯಿಂದ ಗಿಂಡಿ ನರ್ತನ ಕಲಾವಿದ ಸತೀಶ್ ಎಂ. ನಾಯಕ್ ಅವರನ್ನು ಸನ್ಮಾನಿಸಿ, ಗಿಂಡಿ ನರ್ತನದ ಮಹತ್ವವನ್ನು ನಾಡಿನಾದ್ಯಂತ ಹರಡುತ್ತಾ, ಕಲೆಯನ್ನು ಉಳಿಸಿ, ಬೆಳೆಸಿ, ಮುನ್ನಡೆಸುತ್ತಿರುವ ಸಾಹಸವನ್ನು ಅಭಿನಂದಿಸಿದರು. ಲೇಖಕ ಜಯವಂತ ಪೈ ಅಧ್ಯಕ್ಷತೆವಹಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಹಿರಿಯರಾದ ಉಪೇಂದ್ರ ಪ್ರಭು, ಅಡಿಟರ್ ರಾಮಕೃಷ್ಣ ಐತಾಳ್, ಸುದ್ದಿಮನೆ ಸಂಪಾದಕ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿದರು. ಉದಯ ಭಂಡಾರ್‌ಕಾರ್ ವಂದಿಸಿದರು. ರಾಜೇಂದ್ರ ಪೈ, ಮಂಜುನಾಥ ಮೈಪಾಡಿ ಸಹಕರಿಸಿದರು.

Exit mobile version