Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದದಲ್ಲಿ ಗೋಪಾಲಕೃಷ್ಣ ಅಡಿಗ ಜನ್ಮಶತಾಬ್ಧಿ ಕಾರ್ಯಕ್ರಮ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕವಿ ಅಡಿಗರ ಜನ್ಮಶತಾಬ್ಧಿಯು ಇಂದಿನಿಂದ ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದ್ದು, ಇಡೀ ವರ್ಷ ಅಡಿಗರ ಸಾಹಿತ್ಯ ಹಾಗೂ ವಿಚಾರಧಾರೆಗಳ ಕುರಿತು ಪುನರವಲೋಕನಕ್ಕೆ ಅವಕಾಶ ಸಿಕ್ಕಿದೆ. ಅಡಗರನ್ನು ‘ಯುಗದ ಕವಿ’ ಎನ್ನುವುದಿದೆ. ಅಡಿಗರು ಹುಟ್ಟಿ-ಬೆಳೆದ ಈ ಭಾಗದ ಜನ ಈ ವಿಚಾರ ಮಂಥನದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ ತಮ್ಮ ಅಭಿಮಾನವನ್ನು ತೋರ್ಪಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪೂರ್ವಧ್ಯಕ್ಷ ಉಪ್ಪುಂದ ಚಂದ್ರ ಶೇಖರ ಹೊಳ್ಳ ಹೇಳಿದರು.

ಅವರು ಸುವಿಚಾರ ಬಳಗ ಹಮ್ಮಿಕೊಂಡ ಜನ್ಮಶತಮಾನೋತ್ಸವ ಆಚರಣೆಯನ್ನು ಅಡಿಗರ ಸಮಗ್ರ ಕೃತಿಗಳನ್ನು ಅಲಂಕಾರವಾಗಿ ಜೋಡಿಸಿದ ಫಲಕದೆದುರು ದೀಪ ಬೆಳಗಿಸಿ ಕಾರ್ಯಕ್ರಮದಕ್ಕೆ ಚಾಲನೆ ನೀಡಿ ಮಾತನಾಡಿ ಅಡಿಗರನ್ನು ‘ನವ್ಯಕವಿ’, ‘ಬಂಡಾಯಕವಿ’, ‘ಪ್ರಗತಿಶೀಲಕವಿ’, ಎಂದೆಲ್ಲ ಗುರುತಿಸಿದರೂ ಅವರ ಪರೆಂಪರೆಯ ಶೀಲ- ಶುದ್ದಿ, ಸತ್ಯ ನಿಷ್ಠೆ, ಸ್ವಾಭಿಮಾನದಿಂದ ವಿಚಲಿತರಾಗಿರದೆ ಆರ್ಷ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರೇ ಆಗಿದ್ದರು. ಅವರು ಆಂತರ್ಯದಲ್ಲಿ ಆಧ್ಯಾತ್ಮಿಕ ಹುಡುಕಾಟದಲ್ಲಿ ಚಕಮಕಿ ಕಲ್ಲು ತಿಕ್ಕಿ ಬೆಳಕು ಹೊತ್ತಿಸುವಲ್ಲಿ ಅಪರಂಜಿ ವಿದ್ಯೆಯನ್ನು ಕರಗತಮಾಡಿಕೊಳ್ಳುವಲ್ಲಿ ಸದಾ ನಿಷ್ಣಾರಾಗಿದ್ದರು ಎಂದರು.

ವೀಣಾ ಶ್ಯಾನುಬಾಗ್ ಮತ್ತು ಶ್ರೀಮತಿ ಹೇಮಾ ಹೊಳ್ಳ ಅಡಿಗರ ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಪುಂಡಲೀಕ ನಾಯಕರು ತಾವು ಬರೆದ ಚುಟುಕನ್ನು ಓದಿದರು. ಬೆಂಗಳೂರಿನ ರಾಜಾಚಾರ್ಯರು ಅಡಿಗರ ಮನ ಸಂದರ್ಶಿಸಿ ಬರೆದ ಲೇಖನವನ್ನು ವಾಚಿಸಿದರು.  ಮಾತೃ ಮಂಡಳಿಯ ಆಶಾ ಕಿಶೋರ್, ವಸಂತಿ ವಾಸುದೇವ ಮತ್ತು ಸರೋಜಾ ಮಧುರ ಗಾಯನ-ಪ್ರಾರ್ಥನೆ ನೀಡಿದರು. ಆರಂಭದಲ್ಲಿ ಯು ಗಣೇಶ ಪ್ರಸನ್ನ ಮಯ್ಯ ಸ್ವಾಗತಿಸಿದರು, ಪ್ರಧಾನ ಸಂಚಾಲಕರಾದ ವಿ.ಹೆಚ್ ನಾಯಕ್ ನಿರೂಪಿಸಿ, ವಂದಿಸಿದರು.

Exit mobile version