Kundapra.com ಕುಂದಾಪ್ರ ಡಾಟ್ ಕಾಂ

ಕುಂದಗನ್ನಡ ಅಧ್ಯಯನ ಕೇಂದ್ರ, ಅಡಿಗರ ಸಾಕ್ಷಿಕೇಂದ್ರ ಸ್ಥಾಪನೆಯಾಗಲಿ: ಚಪ್ಪರಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಪ್ರಾಚೀನ ಭಾರತೀಯ ಸಂಸ್ಕೃತಿ ಯಿಂದಾಗಿ ವಿಶ್ವದಲ್ಲಿ ಭಾರತ ಅಗ್ರ ಮಾನ್ಯವಾಗಿ ಗುರುತಿಸಲ್ಪಟ್ಟಿದೆ. ಕವಿಗಳಿಂದ ಸಾಹಿತ್ಯ ಕ್ಷೇತ್ರ ಸಮೃದ್ಧಗೊಂಡಿದೆ. ಕುಂದಗನ್ನಡ ಅಚ್ಚ ಕನ್ನಡ ಹಾಗೂ ಆಡು ಮಾತಿನ ಆತ್ಮೀಯ ಭಾಷೆಯಾಗಿದ್ದು ಇದಕ್ಕೆ ಸರಕಾರದ ವಿಶೇಷ ಮಾನ್ಯತೆ ದೊರಕಿಸಿ ಕೊಡುವುದರ ಜತೆ ಕುಂದಗನ್ನಡ ಸಾಹಿತ್ಯ ಅಕಾಡೆಮಿ ಕೇಂದ್ರ ಸ್ಥಾಪನೆ ಯಾಗಬೇಕು, ಕುಂದಗನ್ನಡ ಶಬ್ದ ಅಳಿವಿ ನಂಚಿನಲ್ಲಿದ್ದು ಇದನ್ನು ಸಂಗ್ರಹಿಸುವ ಜತೆ ಅಧ್ಯಯನ ಕೇಂದ್ರ ಆರಂಭಿಸುವ ಕಾರ್ಯ ಸಾಧ್ಯವಾಗಬೇಕು ಎಂದು ಹಿರಿಯ ಸಾಹಿತಿ ಡಾ| ಎಚ್‌.ವಿ. ನರಸಿಂಹಮೂರ್ತಿ ಹೇಳಿದರು.

ಅವರು ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ಉಳ್ಳೂರು ಮೂಕಜ್ಜಿ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕದ ಆಶ್ರಯದಲ್ಲಿ ನಡೆದ 15ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಿಂಡಿಮ 2017 ಉದ್ಘಾಟಿಸಿ ಮಾತನಾಡಿದರು. ಸರಕಾರದ ಇಚ್ಛಾಶಕ್ತಿಯ ಕೊರತೆ ಯಿಂದಾಗಿ ಸಾಹಿತ್ಯ ಭಾಷಾ ಪ್ರತಿಷ್ಠಾನ ಮೈಸೂರಿನಲ್ಲಿ ಇರಬೇಕೊ ಅಥವಾ ಬೆಂಗಳೂರಿನಲ್ಲಿ ಇರಬೇಕೊ ಎಂಬ ಗೊಂದಲ ಉಂಟಾಗಿದ್ದು ಇದರಿಂದ ಕನ್ನಡ ಸಾಹಿತ್ಯ ಇಂದು ಆತಂಕದಲ್ಲಿದೆ ಎಂದರು.

ಉಡುಪಿ ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಮಾತುಗಳ್ನಾಡಿ ಹಿಂಬಾಗಿಲ ಮೂಲಕ ಸರಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮವನ್ನಾಗಿ ಮಾಡುವ ಪಿತೂರಿ ಮಾಡಲಾಗುತ್ತಿದೆ, ಇದರಿಂದ ಕನ್ನಡ ಶಾಲೆಗಳು ನೆಲಕಚ್ಚಿ ಹೋಗುತ್ತವೆ, ತರೆಮರೆಯಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಆಂಗ್ಲ ಮಾಧ್ಯಮ ಶಾಲೆಗೆ ಅನುಮತಿ ನೀಡುವ ಪ್ರಯತ್ನಗಳಾಗುತ್ತಿವೆ, ಆಂಗ್ಲ ಮಾಧ್ಯಮ ವ್ಯಾಮೋಹದಿಂದ ಕನ್ನಡ ಶಾಲೆಗಳು ಇಂಗ್ಲಿಷ್‌ ಮಯವಾಗಿ ಮಾರ್ಪಾಡುಗೊಳ್ಳುವ ಕೆಲಸವಾಗು ತ್ತಿದ್ದು, ಇದರ ವಿರುದ್ಧ ಹೋರಾಟ ಮಾಡದಿದ್ದರೆ ಕನ್ನಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಸಮ್ಮೇಳನದ ಅಧ್ಯಕ್ಷ ಹಿರಿಯ ಅಂಕಣಕಾರ ಸತೀಶ ಚಪ್ಪರಿಕೆ ಮಾತನಾಡಿ ನಮ್ಮ ಆಡು ಭಾಷೆಯನ್ನು ಮಾತನಾಡಲು ಹಿಂಜರಿಯುತ್ತಿರುವುದು ಸಾಂಸ್ಕೃತಿಕ ದುರಂತವಾಗಿದೆ, ಭಾಷೆ ಒಂದು ಪರಂಪರೆಯ ಸಂಸ್ಕೃತಿಯಾಗಿದ್ದು ಭಾಷೆ ಸಾಯಿತ್ತಿದೆ ಎಂದರೆ ನಮ್ಮ ಪರಂಪರಾ ಗತ ಸಂಸ್ಕೃತಿ ನಶಿಸುತ್ತಿದೆ ಎಂದರ್ಥ ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ| ಕನರಾಡಿ ವಾದಿರಾಜ ಭಟ್‌, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇಗುಲದ ಮಾಜಿ ಆಡಳಿತ ಧರ್ಮ ದರ್ಶಿ ಕೆ. ಉಮೇಶ ಶ್ಯಾನುಭೋಗ್‌, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾ.ಯೋಜನಾಧಿಕಾರಿ ಅಮರಪ್ರಸಾದ್‌ ಶೆಟ್ಟಿ, ಅಗಸ್ತೆÂàಶ‌Ìರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪರುಶುರಾಮ, ಬೈಂದೂರು ಹೋಬಳಿ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ, ಜಿಲ್ಲಾ ಕಾರ್ಯದರ್ಶಿ ಸೂರುಲು ನಾರಾಯಣ, ಅಶೋಕ ತೆಕ್ಕಟ್ಟೆ ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಬೈಂದೂರು ಡಾ| ಸುಬ್ರಹ್ಮಣ್ಯ ಭಟ್‌ ಸ್ವಾಗತಿಸಿದರು, ಗಣಪತಿ ಹೋಬಳಿದಾರ ಮತ್ತು ವಿಶ್ವನಾಥ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ನಾರಾಯಣ ಐತಾಳ ನಿರ್ವಹಿಸಿದರು, ರವೀಂದ್ರ ಎಚ್‌ ವಂದಿಸಿದರು. ಬೆಳಗ್ಗೆ ಕುಂದಾಪುರ ತಾ.ಪಂ. ಅಧ್ಯಕ್ಷೆ ಜಯಶ್ರೀ ಎಸ್‌. ಮೊಗವೀರ ರಾಷ್ಟ್ರ ಧ್ವಜಾರೋಹಣ ನಡೆಸಿ ದರು. ಖಂಬದಕೋಣೆ ರೈತ ಸೇ.ಸ. ಸಂಘ ಉಪ್ಪುಂದ ಅಧ್ಯಕ್ಷ ಎಸ್‌.ಪ್ರಕಾಶ್ಚಂದ್ರ ಶೆಟ್ಟಿ ಕನ್ನಡ ತಾಯಿ ಭುವನೇಶ್ವರಿ ದಿಬ್ಬಣದ ಮೆರವಣಿಗೆಯನ್ನು ಉದ್ಘಾಟಿಸಿದರು.

Exit mobile version