Kundapra.com ಕುಂದಾಪ್ರ ಡಾಟ್ ಕಾಂ

ಮಂಟಪ ಪ್ರಭಾಕರ ಉಪಾಧ್ಯರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿಯ ವಿಶಿಷ್ಟ, ವಿಶೇಷ ಪರಂಪರೆ ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್‌ರ ಹೆಸರಿನಲ್ಲಿ ಕೊಡ ಮಾಡುವ ೨೦೧೬-೧೭ರ ಸಾಲಿನ ಪ್ರಶಸ್ತಿಯನ್ನು ನಾಡಿನ ಯಕ್ಷಗಾನ ಕ್ಷೇತ್ರದ ಖ್ಯಾತ ಕಲಾವಿದ, ಏಕವ್ಯಕ್ತಿ ಪ್ರದರ್ಶನದ ರೂವಾರಿ ಮಂಟಪ ಪ್ರಭಾಕರ ಉಪಾಧ್ಯರಿಗೆ ನೀಡಲು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಬಳಗ ಆಯ್ಕೆ ಮಾಡಿದೆ.

ಮಂಟಪ ಪ್ರಭಾಕರ ಉಪಾಧ್ಯರು ಯಕ್ಷಗಾನ ಕ್ಷೇತ್ರದಲ್ಲಿ ಸಾಧಿಸಿದ ಗಣನೀಯ ಸೇವೆ, ಅದರಲ್ಲೂ ಏಕವ್ಯಕ್ತಿ ಪ್ರದರ್ಶನದ ನೂತನ ಕಲ್ಪನೆಗೆ ಜೀವ ತುಂಬಿ ದೇಶ-ವಿದೇಶಗಳಲ್ಲಿ ನಿರಂತರ ತನ್ನ ಛಾಪನ್ನು ಮೂಡಿಸಿ ಅಸಂಖ್ಯಾತ ಅಭಿಮಾನಿಗಳ ಹೃನ್ಮನಗಳನ್ನು ತಣಿಸಿರುವ ನೆಲೆಯಲ್ಲಿ ಪ್ರಶಸ್ತಿ ಸಮಿತಿ ಇವರ ಹೆಸರನ್ನು ಅಂತಿಮಗೊಳಿಸಿದೆ. ಹಾಗೇ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಎರಡನೇ ವಾರ್ಷಿಕೋತ್ಸವ ಎಪ್ರಿಲ್ ೧೬ ನೇ ತಾರೀಕಿನಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಭಾಗವಹಿಸುವ ಗಣ್ಯರಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version