Kundapra.com ಕುಂದಾಪ್ರ ಡಾಟ್ ಕಾಂ

ತೆಕ್ಕಟ್ಟೆ: ಶ್ರೀ ಸುಧೀಂದ್ರ ಸಭಾಭವನ ಮತ್ತು ಶ್ರೀ ಸುಧೀಂದ್ರ ತೀರ್ಥ ಭಜನಾ ಮಂದಿರ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲಿಯುಗದಲ್ಲಿ ಭಜನೆಗೆ ಬಹಳ ಮಹತ್ವವಿದೆ. ಭಜನೆ,ಸಂಕೀರ್ತನೆ ದೇವರ ಸೇವೆಯ ಒಂದು ಭಾಗ.ಕನ್ನಡದ ದಾಸರ ಪದಗಳು ಅರ್ಥಗರ್ಭಿತವಾಗಿದ್ದು ಆಡು ಬಾಷೆಯ ಮಾದರಿಯಲ್ಲಿ ಸರ್ವರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ರಚಿಸಲಾಗಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಜೀವನ ಸಂದೇಶವನ್ನು ಈ ಪದ್ಯಗಳಲ್ಲಿ ಕಾಣಬಹುದು. ಇಂತಹ ಭಜನೆಗಳನ್ನು ಹಾಡುವುದರಿಂದ ದೇವರ ಸೇವೆಯ ಜೊತೆಯಲ್ಲಿ ಜೀವನ ಪಾವನವಾಗುತ್ತದೆ, ಇದರಲ್ಲಿ ಬಣ್ಣಿಸಿರುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾಶೀ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತೆಕ್ಕಟ್ಟೆಯಲ್ಲಿ ಶ್ರೀ ಸುಧೀಂದ್ರ ಸಭಾಭವನ ಮತ್ತು ಶ್ರೀ ಸುಧೀಂದ್ರ ತೀರ್ಥ ಭಜನಾ ಮಂದಿರವನ್ನು ಉದ್ಘಾಟಿಸಿ ಆಶೀರ್ವಚಿಸಿದರು.

ದಾಸರ ಭಜನೆಯಲ್ಲಿ ತಿಳಿಸಿದಂತೆ ಮಾನವರು ಅಹಂಕಾರವನ್ನು ತೊಡೆದು ಹಾಕಬೇಕು. ಇಲ್ಲವಾದಲ್ಲಿ ಸರ್ವನಾಶಕ್ಕೆ ನಾಂದಿಯಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ಜೀವನೋಪಾಯ ಅತ್ಯಂತ ಜಟಿಲವಾಗಿದೆ. ಇಂತಹ ಸಮಯದಲ್ಲಿ ಸಮಾಜ ಬಾಂಧವರು ಭಜನೆಯ ಮೂಲಕ ನೆಮ್ಮದಿಯನ್ನು ಕಂಡುಕೊಳ್ಳಬೇಕು ಎಂದರು.

ಇದಕ್ಕೂ ಮೊದಲು ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಮುಂದೆ ಪುರಮೆರವಣಿಗೆಯ ಮೂಲಕ ಮಂದಿರದಲ್ಲಿ ಸ್ಥಾಪಿಸಲಿರುವ ಶ್ರೀ ವೆಂಕಟರಮಣ ದೇವರ ಮೂರ್ತಿಯನ್ನು ತಂದು ಸ್ವಾಮೀಜಿಯವರ ಅಮೃತ ಹಸ್ತದಿಂದ ಸ್ಥಾಪಿಸಿಲಾಯಿತು. ಹತ್ತು ಸಮಸ್ತರು ಸ್ವಾಮೀಜಿಯವರಿಗೆ ಪಾದಪೂಜೆ ಸೇವೆ ಸಲ್ಲಿಸಿ ಫಲ ಮಂತ್ರಾಕ್ಷತೆ ಹಾಗೂ ಪ್ರಸಾದವನ್ನು ಪಡೆದರು.

ನಂತರ ಆರಂಭಗೊಂಡ ಏಕಾಹ ಭಜನೆಯನ್ನು ಗುರುವರ್ಯರು ತಮ್ಮ ಅಮೃತ ಹಸ್ತದಿಂದ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಸಮಾರಂಭದಲ್ಲಿ ಶ್ರೀಧರ ಕಾಮತ್, ದಿನಕರ ಶೆಣೈ, ರಮೇಶ ಪಡಿಯಾರ್, ನೀಲಕಂಠ ಪ್ರಭು, ಗಣಪತಿ ನಾಯಕ್, ಗೋವರ್ಧನ ನಾಯಕ್, ಸ್ಥಳೀಯ ಉದ್ಯಮಿಗಳಾದ ರಮೇಶ ನಾಯಕ್, ರಾಮಚಂದ್ರ ಪಡಿಯಾರ್, ವಿಶ್ವಾಸ ಪ್ರಭು, ತೆಕ್ಕಟ್ಟೆ ಜಿ.ಎಸ್.ಬಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Exit mobile version