Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ವಿಜಯನಗರ ಕಾಲದ ಕನ್ನಡ ಶಾಸನ ಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಸಮೀಪ ಹರವರಿಯಲ್ಲಿ ವಿಜಯನಗರ ಕಾಲದ ಕನ್ನಡ ಶಾಸನ ಪತ್ತೆಯಾಗಿದ್ದು, ಶಾಸನ ಆರಂಭಿಕ ಬರಹ ಸಂಪೂರ್ಣವಾಗಿ ಅಳಿಸಿ ಹೋಗಿದೆ. ಶಾಸನದ ಕೆಳಗಿನ ೧೨ ಸಾಲುಗಳು ಮಾತ್ರ ಸ್ಪಷ್ಟವಾಗಿದ್ದು, ಶಾಸನ ಬರಹದ ಪ್ರಕಾರ ಹರವರಿಯ ಭೂಮಿ ಶ್ರೀ ತಿಂಮಂಣ ಗುರುರಾಯರಿಗೆ ಆಯುಷ್ಯ ಆರೋಗ್ಯ ಅಭಿವೃದ್ಧಿಯಾಗಲೆಂದು ದೇವರಾಯಪುರದ ಮಹಾಜನಂಗಳಿಗೆ ನೀರನೆರೆದು ದಾನವಾಗಿ ನೀಡಲಾಯಿತೆಂದು ಹೇಳಲಾಗಿದೆ. ಪುರಾತತ್ವ ವಿದ್ವಾಂಸ ಪ್ರೊ.ಟಿ.ಮುರುಗೇಶಿ ಪತ್ತೆಮಾಡಿದ್ದಾರೆ.

ಆಯತಾಕಾರದ ಸುಮಾರು ೧೧೦ ಸೆ.ಮೀ ಉದ್ದದ ಕಲ್ಲು ಚಪ್ಪಡಿ ಮೇಲ್ಭಾಗ ಕುದುರೆ ಲಾಳಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮೇಲಿನ ಪಟ್ಟಿಕಯಲ್ಲಿ ಸೂರ್ಯ-ಚಂದ್ರ, ಶಿವಲಿಂಗ, ದೀಪದ ಕಂಭ ಮತ್ತು ರಾಜ ಶಾಸನ ಎಂಬುದರ ಪ್ರತೀಕವಾಗಿ ಚಿತ್ರಿಸಿರುವ ಖಡ್ಗವಿದೆ.
ಶಾಸನ ಬರಹದ ಪ್ರಕಾರ ಹರವರಿಯ ಭೂಮಿ ಶ್ರೀ ತಿಂಮಂಣ ಗುರುರಾಯರಿಗೆ ಆಯುಷ್ಯ ಆರೋಗ್ಯ ಅಭಿವೃದ್ಧಿಯಾಗಲೆಂದು ದೇವರಾಯಪುರದ ಮಹಾಜನಂಗಳಿಗೆ ನೀರನೆರೆದು ದಾನವಾಗಿ ನೀಡಲಾಯಿತೆಂದು ಹೇಳಲಾಗಿದೆ. ಈ ದಾನ ಶಾಸನಕ್ಕೆ ಸಾಕ್ಷಿಗಳು ತಿಮ್ಮಂಣಗಳು, ಅವಧಾನಿ ನಾಗಂಣಗಳು ಎಂದು ಹೇಳಲಾಗಿದೆ.

ಶಾಸನದ ಮೇಲಿನ ಬರಹ ಪೂರ್ತಿಯಾಗಿ ಅಳಿಸಿ ಹೋಗಿರುವದರಿಂದ, ಶಾಸನ ನೀಡಿದ ರಾಜ ಮನೆತನ ಮತ್ತು ರಾಜ ಯಾರು ಎಂದು ತಿಳಿಯುವುದಿಲ್ಲ. ಆದರೆ ಕರಾವಳಿ ಮತ್ತು ಮಲೆನಾಡಿನಲ್ಲಿ ದೊರೆಯುವ ವಿಜಯನಗರದ ಶಾಸನಗಳಲ್ಲಿ ಶಿವಲಿಂಗವನ್ನು ಪ್ರಭಾವಳಿಯಲ್ಲಿ ತೋರಿಸಲಾಗಿರುತ್ತದೆ ಹಾಗೂ ಶಾಸನದ ಬರಹದ ಶೈಲಿ ವಿಜಯನಗರದ ಬರಹದ ಶೈಲಿ ಹೋಲುತ್ತದೆ. ಇವುಗಳ ಆಧಾರದ ಮೇಲೆ ಶಾಸನದ ಕಾಲವನ್ನು ವಿಜಯನಗರದ ಕಾಲದ ಶಾಸನವೆಂದು ಪರಿಗಣಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶಾಸನೋಕ್ತ ತಿಂಮಂಣ ಗುರುರಾಯರನ್ನು ವಿಜಯನಗರದ ಪ್ರಖ್ಯಾತ ಚಕ್ರವರ್ತಿ ಕೃಷ್ಣದೇವರಾಯನ ಪ್ರಧಾನ ಮಂತ್ರಿಯಾಗಿರಬೇಕೆಂದು ಗುರುತಿಸಲಾಗಿದೆ. ದಾನವನ್ನು ಸ್ವೀಕರಿಸಿದ ದೇವರಾಯಪುರದ ಮಹಾಜನಂಗಳು ಶೃಂಗೇರಿಯ ದೇವರಾಯಪುರದ ಮಹಾಜನಗಳೆಂದು ಗುರುತಿಸಲಾಗಿದೆ. ಈ ಶಾಸನ ಅಧ್ಯಯನಕ್ಕೆ ಹರವರಿ ರವೀಂದ್ರ ಶೆಟ್ಟಿ, ಜಯಕರ ಶೆಟ್ಟಿ, ಕೊಲ್ಲೂರು ಮುರುಳೀಧರ ಹೆಗಡೆ ಮತ್ತು ಸುಭಾಷ್ ಸಹಕರಿಸಿದ್ದರು.

Exit mobile version