Kundapra.com ಕುಂದಾಪ್ರ ಡಾಟ್ ಕಾಂ

ಕೋಣಿ : ಮಾತಾ ಮೊಂಟೆಸ್ಸೋರಿ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಕ್ಕಳ ದೈಹಿಕ ದೃಢತೆಯಲ್ಲಿ ಪೌಷ್ಠಿಕ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಆಧುನಿಕತೆಯ ಭರಾಟೆಯಲ್ಲಿ ನಾವು ಉಪಯೋಗಿಸುವ ಸಿದ್ಧ ಪಾನೀಯಗಳು ಹಾಗೂ ಆಹಾರ ಪದಾರ್ಥಗಳು ಮಕ್ಕಳ ಬೆಳವಣಿಗೆಗೆ ಮಾರಕ. ಹಾಗೆಯೇ ಎಳೆ ವಯಸ್ಸಿನ ಕಲಿಕೆಯಲ್ಲಿ ಮೊಂಟೆಸ್ಸೋರಿ ಶಿಕ್ಷಣವು ಹೆಚ್ಚು ಪರಿಣಾಮಕಾರಿಯಾಗಿದ್ದು, ಆರು ವರ್ಷ ತುಂಬಿದ ಮಗುವನ್ನು ಮಾತ್ರ ೧ನೇ ತರಗತಿಗೆ ದಾಖಲಿಸುವುದು ವೈಜ್ಞಾನಿಕವಾಗಿಯೂ ಸೂಕ್ತ ಎಂದು ಖ್ಯಾತ ಮಕ್ಕಳ ತಜ್ಞ ಡಾ. ಬಿ ರಾಜೇಂದ್ರ ಶೆಟ್ಟಿ ನುಡಿದರು.

ಅವರು ಮಾತಾ ಮೊಂಟೆಸ್ಸೋರಿಯ 7ನೇ ವಾರ್ಷಿಕೋತ್ಸವದ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಕೋಣಿ ಗ್ರಾಮದ ಪಂಚಾಯತ್‌ನ ಅಧ್ಯಕ್ಷ ಸಂಜೀವ ಮೋಗವೀರ ಮಾತನಾಡುತ್ತಾ ಕಳೆದೇಳು ವರ್ಷಗಳಿಂದ ಈ ಸಂಸ್ಥೆ ಸುಂದರ ಪರಿಸರದೊಂದಿಗೆ ಶೈಕ್ಷಣಿಕ ಪರಿಕರಗಳೊಂದಿಗೆ ಶಿಕ್ಷಣ ನೀಡುತ್ತಾ ಕುಂದಾಪುರ ತಾಲೂಕಿನ ವಿವಿಧ ಕಡೆಗಳಿಂದಲೂ ಪುಟಾಣಿಗಳನ್ನು ಆಕರ್ಷಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು. ಪಂಚಾಯತ್‌ನ ಮಾಜಿ ಸದಸ್ಯ ಕೃಷ್ಣ ಪೂಜಾರಿ ಕಾರ್ಯಕ್ರಮಕ್ಕೆ ಶುಭಕೋರಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ಚ್ಂದ್ರ ಶೆಟ್ಟಿ ಚಿತ್ತೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಂಶುಪಾಲೆ ಭಾರತಿ ಪ್ರಕಾಶ್ ಶೆಟ್ಟಿ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕಿಯರಾದ ಸುಮಿತ್ರಾ ಗೀತಾ ಶೆಟ್ಟಿ, ಶೈಲಾ ವಿಜಯ್ ಸಹಕರಿಸಿದರು. ನಂತರ ಪುಟಾಣಿಗಳಿಂದ ನೆರವೇರಿದ ಸಾಂಸ್ಕೃತಿಕ ಕಾರ್ಯಕ್ರಮವು ಪೋಷಕರ ಹಾಗೂ ಊರ ನಾಗರಿಕರ ಮನಸೂರೆಗೊಂಡಿತು.

Exit mobile version