Site icon Kundapra.com ಕುಂದಾಪ್ರ ಡಾಟ್ ಕಾಂ

ಅಸ್ಪೃಷ್ಯತೆ, ಜಾತೀಯತೆ ನಿವಾರಿಸುವ ಜವಾಬ್ದಾರಿ ಯುವಕರ ಮೇಲಿದೆ: ಎಬಿವಿಪಿ ಕಾರ್ಯದರ್ಶಿ ಸ್ವಾಮಿ ಮರುಳಾಪುರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಂದಾಪುರ ಶಾಖೆ ಆಶ್ರಯದಲ್ಲಿ ಕೋಟೇಶ್ವರ ಸಹನಾ ಕನ್ವೆಂಷನ್ ಸಮುಖ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಸಾಮರಸ್ಯ ಮತ್ತು ರಾಷ್ಟ್ರೀಯತೆ ವಿಚಾರ ಸಂಕಿರಣ ಬೆಂಗಳೂರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಘಟನಾ ಕಾರ‍್ಯದರ್ಶಿ ಸ್ವಾಮಿ ಮರುಳಾಪುರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಹೊಸ ದೃಷ್ಟಿಕೋನದಲ್ಲಿ ಅಸ್ಪೃಶ್ಯತೆ ನಿವಾರಣೆ, ಜಾತೀಯತೆ ಹಾಗೂ ಮೇಲ್ವರ್ಗ ಕೆಳವರ್ಗ ಎಂಬ ತಾರತಮ್ಯ ಹೋಗಲಾಡಿಸುವ ದೊಡ್ಡ ಜವಾಬ್ದಾರಿ ಯುವಕರ ಹೆಗಲ ಮೇಲಿದೆ. ಸಮಾನತೆಯಿಂದ ದೇಶ ಹಾಗೂ ಸಮಾಜ ಕಟ್ಟುವ ಕೆಲಸ ಆಗಬೇಕು ಎಂದು ಹೇಳಿದರು. ಭಾರತ ಯುದ್ದದಿಂದ ದೇಶಕಟ್ಟಿದ್ದಲ್ಲ ಎಂದ ಅವರು, ಜ್ಞಾನದಿಂದ ದೇಶಕಟ್ಟಿದ್ದು, ಜ್ಞಾನದ ಮೂಲಕ ವಿಶ್ವಮಾನ್ಯವಾಗಿದೆ. ಯುವಕರು ಮತ್ತು ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕು. ಅಂಬೇಡ್ಕರ್ ತತ್ವ ಸಿದ್ಧಾಂತದ ಮೂಲಕ ಅಸಮಾನತೆಯ ಕೊಂಡಿ ಕಳಚಿ ಹೊಸ ದಿಕ್ಕುದಿಶೆಯತ್ತ ದೇಶ ಕೊಂಡೊಯ್ಯ ಬೇಕು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕೆರಾಡಿ ವರಸಿದ್ಧ ವಿನಾಯಕ ಪದವಿಪೂರ್ವ ಕಾಲೇಜ್ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗಿಳಿಯಾರು ರತ್ನಾಕರ ಜಿ.ಶೆಟ್ಟಿ ಇದ್ದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಂದಾಪುರ ಅಧ್ಯಕ್ಷ ವೈಭವ್ ಕುಂದಾಪುರ ಸ್ವಾಗತಿಸಿದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಉಪಾಧ್ಯಕ್ಷ ಕೇಶವ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಪರಿಷತ್ ಸಂದೇಶ ನಿರೂಪಿಸಿರು.ವಿದ್ಯಾರ್ಥಿ ಪರಿಷತ್ ನಗರ ಕಾರ‍್ಯದರ್ಶಿ ನವೀನ್, ಬಸ್ರೂರು ಕಾಲೇಜ್ ವಿದ್ಯಾರ್ಥಿ ಪರಿಷತ್ ಪೃತ್ವೀಶ್ ಕಾರ‍್ಯಕಾರಿಣಿ ಸದಸ್ಯ ವಿನಯ ಹಾಗೂ ಕೋಟೇಶ್ವರ ಕಾಲೇಜ್ ಅಧ್ಯಕ್ಷ ಅಕ್ಷಯ ಅತಿಥಿಗಳ ಗೌರವಿಸಿದರು.

 

Exit mobile version