Site icon Kundapra.com ಕುಂದಾಪ್ರ ಡಾಟ್ ಕಾಂ

ಮಹಿಳೆಯರಿಗೆ ಕಾನೂನು ಅರಿವು ಅಗತ್ಯ: ಬನ್ನಾಡಿ ಸೋಮನಾಥ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ ಎನ್ನುವ ಮಾತನ್ನು ಇಟ್ಟುಕೊಂಡೆ, ಬಾಲ್ಯದಲ್ಲಿ ತಂದೆ-ತಾಯಿಯ ಆಶ್ರಯದಲ್ಲಿ, ಯೌವನದಲ್ಲಿ ಸಂಗಾತಿಯ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಮಹಿಳೆ ಬೆಳೆಯುವುದರಿಂದ ಆಕೆ ಸಮಾನ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎನ್ನುವ ದ್ವಂದ್ವ ವಾದದ ನಡುವೆ ಮಹಿಳೆಯರು ಇಂದು ಸಮಾಜದಲ್ಲಿ ಸಾಕಷ್ಟು ಪ್ರಬಲರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಕಾನೂನು ಜ್ಞಾನ ಕೂಡಾ ಅತೀ ಅಗತ್ಯ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಬಾರ್ ಅಸೋಸಿಯೇಶನ್ ಕುಂದಾಪುರ, ಅಭಿಯೋಜಕ ಇಲಾಖೆ ಕುಂದಾಪುರ, ಜೆಸಿಐ ಕುಂದಾಪುರ, ರೋಟರಿ ಕುಂದಾಪುರ, ಮಹಾವಿಷ್ಣು ಯುವಕ ಮಂಡಲ (ರಿ) ಹರೇಗೋಡು, ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕುಂದಾಪುರ , ಮಾನಸತಿ ಯುವತಿ ಮಂಡಲ ಹರೇಗೋಡು ಹಾಗೂ ಶ್ರೀ ಸಾಯಿ ಮಂಟಪ ಶ್ಯಾಮಿಯಾನ ಮತ್ತು ಡೆಕೊರೇಟರ‍್ಸ್ ಕಟ್ಟು ಹೆಮ್ಮಾಡಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆಯ ಅಂಗವಾಗಿ ಕಟ್‌ಬೆಲ್ತೂರು ಯುವಕ ಮಂಡಲದ ವಠಾರದಲ್ಲಿ ನಡೆದ ಕಾನೂನು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಹರೇಗೋಡು ಯುವಕ ಮಂಡಲ ಹಾಗೂ ಯುವತಿ ಮಂಡಲದ ಸಂಚಾಲಕ ಚಂದ್ರ ನಾಕ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಬಾರ್ ಅಸೋಸಿಯೇಶನ್ ಕಾರ್ಯದರ್ಶಿ ರವಿಶ್ಚಂದ್ರ ಶೆಟ್ಟಿ, ಜೆಸಿಐ ಕುಂದಾಪುರ ಚರಿಷ್ಮಾ ಅಧ್ಯಕ್ಷೆ ಗೀತಾಂಜಲಿ ಆರ್.ನಾಯಕ, ರೋಟರಿ ಕುಂದಾಪುರದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಉದ್ಯಮಿ ಸುಧಾಕರ ಎನ್.ದೇವಾಡಿಗ , ಯುವಕ ಮಂಡಲದ ಅಧ್ಯಕ್ಷ ರವೀಸ್ ಬಿ.ಎಚ್. ಉಪಸ್ಥಿತರಿದ್ದರು. ನ್ಯಾಯವಾದಿ ರಾಘವೇಮದ್ರ ಚರಣ್ ನಾವಡ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ನರಸಿಂಹ ಗಾಣಿಗ ಹರೇಗೋಡು ಸ್ವಾಗತಿಸಿದರು. ಶ್ರೀಕಾಂತ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಸುಕುಮಾರ್ ಶೆಟ್ಟಿ ದೇವಲ್ಕುಂದ ವಂದಿಸಿದರು.

 

Exit mobile version