Kundapra.com ಕುಂದಾಪ್ರ ಡಾಟ್ ಕಾಂ

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ, ನ್ಯಾಯವಾದಿ ಕೆ. ವಿಕಾಸ ಹೆಗ್ಡೆ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕೀಲರ ಸಂಘದ ಸದಸ್ಯರಾದ ಯುವ ನ್ಯಾಯವಾದಿ ಕೆ. ವಿಕಾಸ ಹೆಗ್ಡೆಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾದ ಬಗ್ಗೆ ಕುಂದಾಪುರ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಯುವ ನ್ಯಾಯವಾದಿಯಾಗಿ ಕ್ರೀಯಾಶೀಲ ವ್ಯಕ್ತಿತ್ವ ಹೊಂದಿರುವ ಕೆ.ವಿಕಾಸ ಹೆಗ್ಡೆಯವರು ರಾಜಕೀಯದಲ್ಲಿ ಅಜಾತಶತ್ರುವಾಗಿದ್ದು, ಅತೀ ಕಿರಿಯ ವಯಸ್ಸಿನಲ್ಲಿ ಉನ್ನತ ಸ್ಥಾನ ಅಲಂಕರಿಸಿರುವುದು ನಮ್ಮ ವಕೀಲರ ಸಂಘಕ್ಕೆ ಅತ್ಯಂತ ಹೆಮ್ಮೆಯ ವಿಚಾರ ಎಂದರು.

ಮಾಜಿ ಅಧ್ಯಕ್ಷರುಗಳಾದ ಎ.ಬಿ.ಶೆಟ್ಟಿ, ಗಡಾಹದ್ ರಾಮಕೃಷ್ಣ ರಾವ್, ಜಿ. ಸಂತೋಷ ಕುಮಾರ್ ಶೆಟ್ಟಿ, ಹಿರಿಯ ನ್ಯಾಯವಾದಿ ಟಿ.ಬಿ ಶೆಟ್ಟಿ, ಉಪಾಧ್ಯಕ್ಷರಾದ ಜಯಪ್ರಕಾಶ ಸಾಲಿನ್ಸ್‌ರವರು ಕೆ.ವಿಕಾಸ ಹೆಗ್ಡೆ ಇವರನ್ನು ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕೆ.ವಿಕಾಸ ಹೆಗ್ಡೆಯವರು, ಒಬ್ಬ ನ್ಯಾಯವಾದಿಯಾಗಿ ಇದ್ದುದರಿಂದ ರಾಜಕೀಯವಾಗಿ ಹೆಚ್ಚು ಗೌರವ ಸಿಕ್ಕಿರುವುದಲ್ಲದೆ, ಈ ವಯಸ್ಸಿನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಯಿತು. ಅಲ್ಲದೇ ನಾನು ನ್ಯಾಯವಾದಿಯಾಗಿರುವುದರಿಂದ ಜನರಿಗೂ ಸಹಾ ಹೆಚ್ಚಿನ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದರು.

ನ್ಯಾಯವಾದಿಗಳಾದ ಸದಾನಂದ ಶೆಟ್ಟಿ, ರವಿಕಿರಣ್ ಮುರ್ಡೇಶ್ವರ, ಶಶಿಧರ ಹೆಗ್ಡೆ, ಶ್ಯಾನ್ಕಟ್ ಉಮೇಶ್ ಶೆಟ್ಟಿ, ಸಂದೇಶ ಶೆಟ್ಟಿ ಮತ್ತು ರವಿ ಶೆಟ್ಟಿ ಮಚ್ಚಟ್ಟು, ಕೆ.ವಿಕಾಸ ಹೆಗ್ಡೆಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆಯವರು ಸ್ವಾಗತಿಸಿ, ನ್ಯಾಯವಾದಿ ಶ್ರೀನಾಥ್ ರಾವ್ ಕಾರ‍್ಯಕ್ರಮ ನಿರ್ವಹಿಸಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ರವೀಶ್ಚಂದ್ರ ಶೆಟ್ಟಿ ವಂದಿಸಿದರು.

Exit mobile version