Kundapra.com ಕುಂದಾಪ್ರ ಡಾಟ್ ಕಾಂ

ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಕಲ್ಪಿಸಲು ಮುಂದಾದ ತಾಲೂಕು ಆಡಳಿತ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕೆಲಸಕ್ಕಾಗಿ ಬಂದಿರುವ ನೂರಾರು ವಲಸೆ ಕಾರ್ಮಿಕರಿಗೆ ರಾತ್ರಿ ವೇಳೆಯಲ್ಲಿ ತಂಗಲು ಸೂಕ್ತ ವಸತಿ ಸೌಕರ್ಯ ಇಲ್ಲದೇ ಇರುವುದನ್ನು ಮನಗಂಡ   ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌ ಅವರು ಜಿಲ್ಲಾಡಳಿತದ ನಿರ್ದೇಶನದಂತೆ ಕುಂದಾಪುರ ಪುರಸಭೆಯ ನೆರವಿನೊಂದಿಗೆ ವಲಸೆ ಕಾರ್ಮಿಕರಿಗೆ ವಸತಿ ಸೌಕರ್ಯವನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಿದ್ದು, ಅಧಿಕಾರಿಗಳೊಂದಿಗೆ ಕುಂದಾಪುರದಲ್ಲಿ ಸೂಕ್ತ ಸ್ಥಳಪರಿಶೀಲನೆ ನಡೆಸಿದರು.

ಹೊಸ ಬಸ್ಸು ನಿಲ್ದಾಣದಲ್ಲಿ ಪುರಸಭೆ ವಾಣಿಜ್ಯ ಸಂಕೀರ್ಣದ ಎರಡನೇ ಮಹಡಿಯಲ್ಲಿ ವಲಸೆ ಕಾರ್ಮಿಕರಿಗೆ ತಾತ್ಕಾಲಿಕವಾಗಿ ರಾತ್ರಿ ಹೊತ್ತು ತಂಗಲು ವಸತಿ ನೀಡುವ ಬಗ್ಗೆ ವಿಶೇಷ ನೈಟ್‌ ಶಲ್ಟರ್‌ ನಿರ್ಮಿಸಲು ನಿರ್ಣಯಿಸದ ಬೆನ್ನಲ್ಲೇ ಕುಂದಾಪುರ ಉಪವಿಭಾಗಾಧಿಕಾರಗಳು ಇಲಾಖಾ ಅಧಿಕಾರಿಗಳೊಂದಿಗೆ ಈ ಸ್ಥಳವನ್ನು ಪರಿಶೀಲನೆ ನಡೆಸಿದರು. ಅಲ್ಲದೇ ಇಲ್ಲಿ ಕಾರ್ಮಿಕರಿಗೆ ತಂಗಲು ಅವಕಾಶ ಮಾಡಿಕೊಡುವ ಬಗ್ಗೆ ಹಾಗೂ ಅವರಿಗೆ ಬೇಕಾಗುವ ಶೌಚಾಲಯ, ವಿದ್ಯುತ್‌ ಮೊದಲಾದ ಮೂಲ ಸೌಕರ್ಯವನ್ನು ಕಲ್ಪಿಸುವ ಕುರಿತು ಮಾತುಕತೆ ನಡೆಸಿದರು.

ರಾತ್ರಿ  ನೆಹರೂ ಮೈದಾನದ ಸಾಲಾ ಪರಿಸರದಲ್ಲಿದ್ದ ಕಾರ್ಮಿಕರನ್ನು ಭೇಟಿ ಮಾಡಿದ  ಉಪವಿಭಾಗಾಧಿಕಾರಿ ಶಿಲ್ಪ ನಾಗ್, ಕಾರ್ಮಿಕರ ಸಮಸ್ಯೆಯನ್ನು ಆಲಿಸಿದರು ಮತ್ತು ಅವರಿಗೆ ಸೂಕ್ತ ವಸತಿ ನೀಡುವ ಕುರಿತು ಜಿಲ್ಲಾ ಡಳಿತದ ಗಮನಕ್ಕೆ ತಂದಿರುವುದಾಗಿ ಇದಕ್ಕೆ ಸುಕ್ತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದರು. ಅಲ್ಲದೇ ಮಹಿಳೆಯರಿಗೆ ಪ್ರಸ್ತುತ ವಸತಿ ಶಾಲೆಯ ಒಂದು ಪಾರ್ಶ್ವದಲ್ಲಿ ರಾತ್ರಿಹೊತ್ತು ತಂಗಲು ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ಮುಂದೆ ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸ ಲಾಗಿರುವ 35 ಸೆಂಟ್ಸ್‌ ಜಾಗದಲ್ಲಿ ವಲಸೆ ಕಾರ್ಮಿಕರಿಗಾಗಿಯೇ ಕಟ್ಟಡ ನಿರ್ಮಿಸುವ ಮೂಲಕ ಅವರಿಗೆ ವಸತಿಯನ್ನು ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಠಾಣಾ ಎಸ್‌.ಇ. ನಾಸಿರ್‌ ಹುಸೇನ್‌, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್‌, ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ ಬಿ.ಎಸ್‌., ಸಮಾಜ ಸೇವಕ ಹುಸೇನ್‌ ಹೈಕಾಡಿ ಮೊದಲಾದವರು ಉಪಸ್ಥಿತರಿದ್ದರು.

Kundapura taluk administration took action to arrange temporary shelter for Migrant workers

Exit mobile version