Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯದಲ್ಲಿ ಏಕರೂಪ ಮರಳು ನೀತಿ ಜಾರಿಗೆ ಜೆಪಿ ಹೆಗ್ಡೆ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಏಕರೂಪ ಮರಳು ನೀತಿ ಜಾರಿಗೆ ತರುವುದರಿಂದ ಮಾತ್ರ ಮರಳು ಸಮಸ್ಯೆ ನಿವಾರಣೆ ಸಾಧ್ಯವಿದೆ. ಸಿಆರ್‌ಝಡ್, ನಾನ್ ಸಿಆರ್‌ಝಡ್ ಬೇರೆ ಬೇರೆ ನೀತಿಯಿಂದ ರಾಜ್ಯದಲ್ಲಿ ಮರಳು ಸಮಸ್ಯೆ ಉದ್ಭವಿಸಲು ಮೂಲ ಕಾರಣ. ತಕ್ಷಣ ಸರಕಾರ ಏಕರೂಪ ಮರಳು ನೀತಿ ಜಾರಿಗೆ ತರುವ ಮೂಲಕ ಮರಳು ಸಮಸ್ಯೆಗೆ ಮುಕ್ತಿ ಕೊಡಲು ಮುಂದಾಗಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಆಗ್ರಹಿಸಿದ್ದಾರೆ.

ಅವರು ಕುಂದಾಪುರ ಬಿಜೆಪಿ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರ ಈಗ ಸಮಿತಿ ರಚಿಸಿ ಮರಳು ನೀತಿಗೆ ಮುಂದಾಗುತ್ತಿದೆ. ಈಗ ಸಾಧ್ಯವಾಗುವುದಾದರೆ ನಾಲ್ಕುವರ್ಷದ ಹಿಂದೆಯೇ ಏಕರೂಪ ಮರಳು ನೀತಿ ಜಾರಿಗೆ ತರಲು ಏಕೆ ಸಾಧ್ಯವಾಗಿರಲಿಲ್ಲ ಎಂದ ಅವರು, ಏಕರೂಪ ಮರಳುನೀತಿಯನ್ನು ಜಾರಿಗೆ ತಂದು ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಮಾಡಿಕೊಡಬೇಕು. ಮರಳು ದಿಬ್ಬ ತೆರವಿನಿಂದ ಮೀನುಗಾರರಿಗೂ ನೆರವಾಗಲಿದೆ. ಶೀಘ್ರ ಮರಳುನೀತಿಯನ್ನು ಜಾರಿಗೆ ತರುವುರಿಂದ ಆಶ್ರಯ ಮನೆಯಂತಹ ಅನೇಕ ಸರಕಾರದ ಯೋಜನೆಯಡಿಯಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಅನುಕೂಲವಾಗಲಿದೆ. ತಡವಾದಲ್ಲಿ ಅನುದಾನದ ಹಣವೂ ಹಿಂದಕ್ಕೆ ಹೋಗಬಹುದು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮರಳು ಆಮದು ಮಾಡಿಕೊಳ್ಳುವುದು ಅಂದರೆ ಮೂಗಿಗಿಂತ ಮೂಗುತಿ ಬಾರವಾದಂತೆ. ಎಂ.ಸ್ಯಾಂಡ್ ಕೂಡ ಪರಸರಕ್ಕೆ ಮಾರಕವಾದುದು. ಎಂ. ಸ್ಯಾಂಡ್‌ಗಾಗಿ ಬಂಡೆಗಳ ಪುಡಿಮಾಡುವದರಿಂದ ಪರಿಸರ ಮಾಲೀನ್ಯ ಹಿನ್ನೆಲೆಯಲ್ಲಿ ವಿರೋಧ ಬರುವ ಸಾಧ್ಯತೆ ಇದೆ. ಇದು ಶ್ರೀಮಂತರಿಗಷ್ಟೇ ದಕ್ಕಲಿದ್ದು, ಇದರಿಂದ ಬಡವರಿಗೇನು ಪ್ರಯೋಜನ ಇಲ್ಲ. ಮರಳು ಟೆಂಡರ್ ಮಾಡಿದ್ದು, ಲೊಕೋಪಯೋಗಿ ಇಲಾಖೆ ಡಂಪಿಂಗ್ ಯಾರ್ಡ್ ಮರಳು ಹಾಕುವ ಪದ್ದತಿ ಜಾರಿಗೆ ತಂದಿದ್ದರಿಂದ ಯಾರ್ಡಿಗೆ ಬರುವ ಮರಳು ಕಮ್ಮಿಯಾಗಿ ಹೊರ ಹೋಗುವುದೇ ಹೆಬ್ಬಾಗಿದೆ. ಮರಳು ಆಕ್ಷನ್ ಕೂಡಾ ಅತಿಕ್ರಮ ಮರಳು ಗಣಿಗೆ ಕಾರಣ ಎಂದು ಹೇಳಿದರು.

ಡಿಸಿ, ಎಸಿ ದಾಳಿಗೆ ಅಧಿಕಾರಿ ಕ್ರಮಕ್ಕೆ ಶಹಬ್ಬಾಸ್‌ಗಿರಿ:
ಮರಳು ಅಡ್ಡೆಗಳ ಮೇಲೆ ದಾಳಿ ಮಾಡಿ ದಿಟ್ಟತನ ಪ್ರದರ್ಶಿಸಿದ ಅಧಿಕಾರಿಗಳನ್ನು ಮಹಿಳೆಯರೆಂಬ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ಅಧಿಕಾರಿಗಳಲ್ಲಿ ಮಹಿಳೆ ಪುರಷರೆಂಬ ಬೇಧಮಾಡುವುದು ತರವಲ್ಲ. ಪೊಲೀಸರ ಭದ್ರತೆಯಲ್ಲೇ ತೆರಳಬೇಕು, ಮಾಹಿತಿ ನೀಡಿ, ದಾಳಿಮಾಡಬೇಕೆಂಬ ನಿಯಮವೇನೂ ಇಲ್ಲ. ಅಧಿಕಾರಿಗಳು ಯಾರಿಗೂ ಮಾಹಿತಿ ನೀಡದೆ ದಾಳಿ ಮಾಡಲು ಅಡ್ಡಿಯೇನು ಇಲ್ಲ. ಹಿಂದೆ ದಾಳಿ ಸಂದರ್ಭ ಮಾಹಿತಿ ನೀಡಿ ದಾಳಿಮಾಡಿದ್ದು, ಮರಳು ತೆಗೆಯವವರು ತಪ್ಪಿಸಕೊಂಡಿದ್ದರಿಂದ ಜಿಲ್ಲಾಧಿಕಾರಿ ಹಾಗೂ ಎಸಿ ದಾಳಿ ಮಾಡಿದ್ದಾರೆ ಎಂದು ಅಧಿಕಾರಿಗಳ ನಡೆಯನ್ನು ಸಮರ್ಥಿಸಿಕೊಂಡರು.

ಮರಳು ಅಡ್ಡೆಯ ಮೇಲೆ ದಾಳಿ ನಡೆದ ನಂತರ ಎಸಿ ಹಾಗೂ ಡಿಸಿ ಸ್ಚಿಚ್ಛೆಯಿಂದ ವರ್ಗಾವಣೆ ಪಡೆಯುವಂತೆ ಒತ್ತಡ ತರುವುದು ಸರಿಯಲ್ಲ. ಹಾಗೇನಾದರೂ ಮಾಡಿದರೆ ಅಧಿಕಾರಿಗಳ ಮನೋಬಲ ಕುಗುತ್ತದೆ. ಕಾನೂನು ಪಾಲಿಸುವ ನಿಟ್ಟಲ್ಲಿ ದಿಟ್ಟ ಹೆಜ್ಜೆಯುಟ್ಟ ಅಧಿಕಾರಿಗಳ ಪ್ರೋತ್ಸಾಹಿಸಬೇಕು. ಒಮ್ಮೆ ದಾಳಿ ನಡೆಸಿ ಅಧಿಕಾರಿಗಳ ಎತ್ತಂಗಡಿಯಾದರೆ, ನಂತರ ಬರುವ ಅಧಿಕಾರಿ ಮೇಲೆ ಒತ್ತಡ ಹೆಚ್ಚಿ ಏನೂ ಪಾಡದೆ ಕೂರುವ ಅಪಾಯವಿದೆ ಎಂದು ಅವರು ಎಚ್ಚರಿಸಿದರಲ್ಲದೇ ಅಕ್ರಮ ಮರಳುಗಾರಿಕೆಯಲ್ಲಿ ಭಾಗಿಯಾದ ಕಾರ್ಮಿಕರನ್ನಷ್ಟೇ ಬಂಧಿಸಿದರೆ ಸಾಲದು. ಹಲ್ಲೆ ಹಿಂದೆ ಯಾರಿದ್ದಾರೆ ಎನ್ನುವ ಸಂಪೂರ್ಣ ತನಿಖೆ ಮಾಡಬೇಕು. ಕಾನೂನು ಉಲ್ಲಂಘಿಸುವವರು ಯಾರೇ ಅದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್, ಕುಂದಾಪುರ ಬಿಜೆಪಿ ಪ್ರಧಾನ ಕಾರ‍್ಯದರ್ಶಿಗಳಾದ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಯುವ ಮೋಚಾ ರಾಜ್ಯ ಕಾರ‍್ಯಕಾರಿಣಿ ಸಮಿತಿ ಸದಸ್ಯ ಮಹೇಶ್ ಪೂಜಾರಿ ಇದ್ದರು.

Exit mobile version