Kundapra.com ಕುಂದಾಪ್ರ ಡಾಟ್ ಕಾಂ

ಕ್ರೀಡೆಯ ಮೂಲಕ ಯುವ ಸಮುದಾಯದ ಸಂಘಟನೆ ಸಾಧ್ಯ: ಜಿ. ಶಂಕರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಭಾಗವಾದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಳೆದ ೧೦ ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಹಲವಷ್ಟು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕ ಜನಮಾನಸದಲ್ಲಿ ಉಳಿದುಕೊಂಡಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಹೇಳಿದರು.

ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಮೊಗವೀರ ಸೌಹಾರ್ದಯುತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯ ಮೂಲಕ ಯುವ ಸಮುದಾಯದ ಸಂಘಟನೆಯೊಂದಿಗೆ ಕ್ರೀಡಾ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ. ಸ್ಥಳೀಯ ತಂಡಗಳನ್ನು ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗೆ ಅಣಿಗೊಳಿಸಲು ಹಾಗೂ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಲು ಇಂತಹ ಪಂದ್ಯಾಟಗಳಿಂದ ಸಾಧ್ಯವಾಗಿಸುವ ಜತೆಗೆ ಯುವಜನರನ್ನು ಕ್ರೀಯಾಶೀಲರಾಗಲು ಅವಕಾಶ ಮಾಡಿಕೊಡುತ್ತದೆ. ಯುವಶಕ್ತಿಗೆ ಹೊಸ ಆಯಾಮಾ ನೀಡುವ ಇಂತಹ ಕಾರ್ಯಕ್ರಮಗಳಲ್ಲಿ ಸಮುದಾಯದ ಯುವಕ-ಯುವತಿಯರು ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದರು.

ಘಟಕದ ಅಧ್ಯಕ್ಷ ಗಂಗಾಧರ ಮೊಗವೀರ ಪಡುವರಿ ಅಧ್ಯಕ್ಷತೆವಹಿಸಿದ್ದರು. ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅಂಕಣವನ್ನು ಉದ್ಘಾಟಿಸಿದರು. ಸಮುದ್ರದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದವರನ್ನು ಬದುಕಿಸಿ ಸಾಹಸ ಮೆರೆದ ಭಟ್ಕಳದ ಉದ್ಯಮಿ ಗೋಪಾಲ ಮೊಗವೀರ, ಘಟಕದ ಹಿರಿಯ ಸದಸ್ಯ ಜಗನ್ನಾಥ ಕೆ., ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗೇಶ್ ಶಿರೂರು ಇವರನ್ನು ಸನ್ಮಾನಿಸಲಾಯಿತು.

ಮಹಾಜನ ಸಂಘದ ಸ್ಥಾಪಕಾಧ್ಯಕ್ಷ ಆನಂದ ಮರಕಾಲ, ಮೊಗವೀರ ಸಮಾಜದ ವಿವಿಧ ಘಟಕ ಹಾಗೂ ಹೋಬಳಿ ಹಾಗೂ ಪದಾಧಿಕಾರಿಗಳಾದ ಮಹಾಬಲ ಕುಂದರ್, ಗಣೇಶ್ ಕಾಂಚನ್, ಚಂದ್ರ ನಾಯ್ಕ್, ರಾಮ ಮೊಗವೀರ ಬೈಂದೂರು, ಮದನಕುಮಾರ್, ರಾಮ ಮೊಗವೀರ ಅಳ್ವೆಗದ್ದೆ ಶಿರೂರು, ಉದಯಕುಮಾರ್ ಹಟ್ಟಿಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

ಸಂಘಟನೆಯ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಕೃಷ್ಣ ಮೊಗವೀರ ಸ್ವಾಗತಿಸಿ, ಪಾಂಡುರಂಗ ನಿರೂಪಿಸಿದರು. ಗೌರವ ಕಾರ್ಯದರ್ಶಿ ವಸಂತ್ ಬಿ. ವಂದಿಸಿದರು. ನಂತರ ಆಹೋರಾತ್ರಿ ಆಯ್ದ ಏಖು ತಂಡಗಳ ಕಬಡ್ಡಿ ಪಂದ್ಯಾಟ ನಡೆಯಿತು.

Exit mobile version