ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಶ್ರೀರಾಮ ಭಗವಂತನಾದರೂ ಮಾನವನಾಗಿ ಹುಟ್ಟಿ ಮಾನವ ಧರ್ಮವನ್ನು ಹೇಗೆ ಪಾಲನೆಮಾಡಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಮನುಕುಲಕ್ಕೆ ಎಂದೆಂದಿಗೂ ಅನುಕರಣೀಯ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ಶ್ರೀರಾಮ ನವಮಿಯ ಪ್ರಯುಕ್ತ ಗುಜ್ಜಾಡಿಯ ಶ್ರೀರಾಮ್ ಭಗವಾನ್ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀರಾಮ್ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಉಪಾಧ್ಯಕ್ಷ ಶೇಖರ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯರಾದ ನಾರಾಯಣ ಕೆ. ಗುಜ್ಜಾಡಿ, ರಾಜು ದೇವಾಡಿಗ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಮೇಸ್ತ, ಶ್ರೀ ನಾರಾಯಣಗುರು ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಪೂಜಾರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಾಸಕ ಕೆ.ಗೋಪಾಲ ಪೂಜಾರಿ ಮತ್ತು ಬಿಲ್ಲವ ಸಮಾಜದ ಹಿರಿಯರಾದ ಬಾಲ ಪೂಜಾರಿಯವರನ್ನು ಮಂದಿರದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಶಿಕಲಾ ನುಡಿ ನಮನಗೈದರು.
ಶ್ರೀ ನಾರಾಯಣ ಗುರು ಯುವಕ ಸಂಘದ ಅಧ್ಯಕ್ಷ ರಾಜು ಎನ್. ಪೂಜಾರಿ ಸ್ವಾಗತಿಸಿದರು. ಪಲ್ಲವಿ ಪ್ರಾರ್ಥನೆಗೈದರು. ಪುಷ್ಪಾ ಹಾಗೂ ಉಪನ್ಯಾಸಕ ಅಣ್ಣಪ್ಪ ಪೂಜಾರಿ ಸನ್ಮಾನಿತರನ್ನು ಪರಿಚಯಿಸಿ ಸನ್ಮಾನ ಪತ್ರ ವಾಚಿಸಿದರು. ಸರೋಜ ಪೂಜಾರಿ ಹಾಗೂ ಜಗದೀಶ್ ಪೂಜಾರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಗಣೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.