Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಇಗರ್ಜಿಯಲ್ಲಿ ಮಾಧ್ಯಮ ಸೇವೆಗೆ ಅಭಿನಂದನೆ – ಸಹಮಿಲನ- ಸಂವಾದ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ವಾಸ್ತವದ ನೆಲೆಗಟ್ಟಿನಲ್ಲಿ ಸಮರ್ಥವಾದ ಜನಾ ಭಿಪ್ರಾಯ ರೂಪಿಸುವುದು ಮಾಧ್ಯಮ ಗಳ ಬಲುದೊಡ್ಡ ಜವಾಬ್ದಾರಿ. ಮಾಧ್ಯಮಗಳ ಮಾಹಿತಿ ಆಧಾರದಲ್ಲೇ ನಮಗೆ ಸಾವಿರಾರು ಮೈಲಿಗಳ ದೂರದಲ್ಲಿನ ಘಟನೆ ಮತ್ತು ವ್ಯಕ್ತಿಗಳ ಸಾಚಾ ಅಥವಾ ನೀಚತನಗಳ ಅರಿವಾಗುವುದು. ಆದರೆ ಇಂದು ಬಹುತೇಕ ಮಾಧ್ಯಮಗಳು ಕೆಲವು ಪ್ರಭಾವಗಳು, ಪೂರ್ವಾಗ್ರಹಗಳಿಗೆ ಒಳಗಾಗುತ್ತಿರುವುದು ಪ್ರಜಾಪ್ರಭುತ್ವದ ದುರಂತ ಎಂದು ವಂ. ಫಾ. ಚೇತನ್‌ ಲೋಬೋ ಹೇಳಿದರು.

ಕುಂದಾಪುರ ಇಗರ್ಜಿಯ ಸಾಮಾಜಿಕ ಸಂಪರ್ಕ ಮಾಧ್ಯಮವು ಆಯೋಜಿಸಿದ ಕುಂದಾಪುರ ಧರ್ಮಕೇಂದ್ರದಲ್ಲಿ ಮಾಧ್ಯಮದವರ ಸೇವೆಗೆ ಅಭಿನಂದನೆ – ಸಹಮಿಲನ- ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಾಮಾಜಿಕ ಸಂಪರ್ಕ ಮಾಧ್ಯಮದ ಸಂಚಾಲಕ ಬರ್ನಾರ್ಡ್‌ ಡಿ’ಕೋಸ್ತಾ ಪ್ರಸ್ತಾವಿಸಿ, ಸ್ವಾಗತಿಸಿದರು. ಮುಖ್ಯ ಅತಿಥಿ ಪತ್ರಕರ್ತ ಯು.ಎಸ್‌.ಶೆಣೆ„ ಮಾತನಾಡಿ ಪತ್ರಿಕೆಗಳು ದೇಶ ವಿದೇಶಗಳ ಸುದ್ದಿಗಳೊಂದಿಗೆ ಸ್ಥಳೀಯ ಮಾಹಿತಿಗಳನ್ನೂ ಒದಗಿಸಬೇಕು. ಸ್ಥಳೀಯ ಸಮಸ್ಯೆಗಳನ್ನು ಸಂಬಂಧಿತರ ಗಮನಕ್ಕೆ ತರುವುದು ಮಾತ್ರವಲ್ಲದೆ, ಒಳಿತುಗಳ ಶ್ಲಾಘನೆ ಮನೋ ರಂಜನೆ ಎಲ್ಲವನ್ನೂ ಒದಗಿಸುತ್ತಿವೆ. ನಿಸ್ವಾರ್ಥ ಕಾರ್ಯಗಳಿಂದ ಪ್ರಭಲ ಜನಾಭಿಪ್ರಾಯ ರೂಪಿಸುವಲ್ಲಿ ಇವು ಯಶಸ್ವಿಯಾಗಿವೆ ಎಂದರು.

ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ವಂ|ಫಾ| ಅನಿಲ್‌ ಡಿ’ಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎಲ್ಲ ಧರ್ಮಗಳ ಸಂದೇಶ ಮತ್ತು ಗುರಿಗಳೂ ಶಾಂತಿ ಸ್ಥಾಪನೆಯೇ ಆಗಿದೆ. ಇಗರ್ಜಿಗಳ ಈ ಮಹತ್ಕಾರ್ಯವನ್ನು ಪ್ರಚುರ ಪಡಿಸಲು ಸಾಮಾಜಿಕ ಸಂಪರ್ಕ ಮಾಧ್ಯಮ ಕಾರ್ಯಾಚರಿಸುತ್ತಿದೆ ಎಂದು ತಿಳಿಸಿದರು. ಪಾಲನಾ ಮಂಡಳಿ ಕಾರ್ಯದರ್ಶಿ ಸೆಲ್ಸಿಯಾನ ಡಿ’ಸೋಜಾ ಉಪಸ್ಥಿತರಿದ್ದರು. ಮಾಧ್ಯಮ ಪತ್ರಿನಿಧಿಗಳಾದ ಕೆ.ಜಿ. ವೈದ್ಯ ಮತ್ತು ಅಂದೂಕ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿನಯ ಡಿ ಕೋಸ್ತಾ ಕಾರ್ಯಕ್ರಮ ನಿರೂಪಿಸಿ ಸಂಚಾಲಕ ಸದಸ್ಯ ವಿವಿಯನ್‌ ಕ್ರಾಸ್ಟೊ ವಂದಿಸಿದರು.

 

Exit mobile version