Kundapra.com ಕುಂದಾಪ್ರ ಡಾಟ್ ಕಾಂ

ನಾವುಂದದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಒತ್ತಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವುಂದದಲ್ಲಿ ಪೂರ್ವನಿಗದಿತ ಸ್ಥಳದಲ್ಲೇ ಹೆದ್ದಾರಿ ಅಂಡರ್‌ಪಾಸ್ ನಿರ್ಮಿಸಬೇಕೆಂದು ಒಂದು ವರ್ಗದ ಸಾರ್ವಜನಿಕರು ಬುಧವಾರ ಧರಣಿ, ಮೆರವಣಿಗೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲ್ಲೂಕು ಪಂಚಾಯತ್ ಸದಸ್ಯ ಜಗದೀಶ ಪೂಜಾರಿ, ಸ್ಥಳೀಯರಾದ ರಾಮ ಖಾರ್ವಿ, ಅಶೋಕ ಆಚಾರ್, ನರಸಿಂಹ ಆಚಾರ್, ರಾಜೇಶ ಪೂಜಾರಿ ಹೆದ್ದಾರಿ ಚತುಷ್ಪಥಗೊಂಡ ಬಳಿಕ ವಾಹನಗಳ ಒತ್ತಡ ಹೆಚ್ಚುತ್ತದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆ ದಾಟುವುದು ಅಪಾಯಕಾರಿಯಾಗಲಿದೆ. ಆದುದರಿಂದ ಅಂಡರ್‌ಪಾಸ್ ಅತ್ಯಂತ ಅಗತ್ಯ. ಅದಕ್ಕೆ ಪೂರ್ವನಿಗದಿತ ಸ್ಥಳವು ಅತ್ಯಂತ ಪ್ರಶಸ್ತವಾಗಿದ್ದು, ಇಲ್ಲಿ ಅದನ್ನು ನಿರ್ಮಿಸುವುದರಿಂದ ಗಾಣಿಗರ ಕೇರಿ, ಹೊಳೆಬದಿ, ಗರಡಿಬೆಟ್ಟು, ಅರೆಹೊಳೆ ನಿವಾಸಿಗಳಿಗೂ ಅನುಕೂಲವಾಗಲಿದೆ ಎಂದರು.

ಈ ಸಂಬಂಧದ ಮನವಿಯನ್ನು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಬಂದಿದ್ದ ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ನೀಡಲಾಯಿತು. ತಾಲೂಕು ಪಂಚಾಯತ್ ಸದಸ್ಯ ಮಹೇಂದ್ರ ಪೂಜಾರಿ, ಮಹಿಳೆಯರೂ ಸೇರಿದಂತೆ ನೂರಾರು ಜನರು ಧರಣಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರದೇಶದ ನಿವೇಶನ ರಹಿತರಿಗೆ ನಿವೇಶನ ವಿತರಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕೆಲವು ದಿನಗಳ ಹಿಂದೆ ಇಲ್ಲಿ ಅಂಡರ್‌ಪಾಸ್ ಬದಲಿಗೆ ಯೂ ಟರ್ನ್ ನೀಡಬೇಕೆಂದು ನೂರಾರು ಜನರು ಸೇರಿ ಒತ್ತಾಯಿಸಿದ್ದರು. ಆ ಸಂದರ್ಭ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಸಂಸದ ಬಿ. ಎಸ್. ಯಡಿಯೂರಪ್ಪ ಅವರ ಖಾಸಗಿ ಆಪ್ತ ಸಹಾಯಕ ಪುರುಷೋತ್ತಮ ಹಾಜರಿದ್ದು ಜನರ ಅಹವಾಲು ಆಲಿಸಿದ್ದರು. ಅಂದು ಸೇರಿದ್ದ ಜನರ ನಿಲುವಿಗೆ ವಿರುದ್ಧವಾಗಿ ಇಂದಿನ ಪ್ರತಿಭಟನೆ ನಡೆಯಿತು.

 

Exit mobile version