Kundapra.com ಕುಂದಾಪ್ರ ಡಾಟ್ ಕಾಂ

ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಬೇಕು: ಆಸ್ಕರ್ ಫೆರ್ನಾಂಡಿಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲುವುದೊಂದೇ ಗುರಿಯಲ್ಲ. ಬಡವರಿಗೆ ಆರ್ಥಿಕ ಸ್ವಾತಂತ್ರ್ಯ ದೊರಕಿದರಷ್ಟೆ ದೇಶಕ್ಕೆ ಸಿಕ್ಕ

ಸ್ವಾತಂತ್ರ್ಯ ಸಾರ್ಥನೆ ಎಂಬ ಗಾಂಧೀಜಿಯವರ ಕನಸನ್ನು ನನಸು ಮಾಡುವ ಗುರಿ ಅದರ ಮುಂದಿದೆ. ಅದಕ್ಕೆ ಎಲ್ಲ ವರ್ಗದ ಜನರನ್ನು ಸೇರಿಸಿ

ಪಕ್ಷವನ್ನು ಬೂತ್ ಮಟ್ಟದಿಂದ ಬಲಗೊಳಿಸುವ ಮೂಲಕ ಈ ಗುರಿಸಾಧನೆಗೆ ಶ್ರಮಿಸಬೇಕು ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.

ಉಪ್ಪುಂದದ ಶಂಕರ ಕಲಾಮಂದಿರದಲ್ಲಿ ನಡೆದ ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಬೂತ್ ಮಟ್ಟದಲ್ಲಿ ಪಕ್ಷ ಸದಸ್ಯತ್ವ ಅಭಿಯಾನ ನಡೆಸಬೇಕು. ಸದಸ್ಯರಲ್ಲಿ ಅರ್ಧಕ್ಕೆ ಕಡಿಮೆಯಿರದಷ್ಟು ಮಹಿಳೆಯರು ಇರುವಂತೆ, ಗಣನೀಯ ಸಂಖ್ಯೆಯಲ್ಲಿ ಯುವಜನರು ಇರುವಂತೆ ನೋಡಿಕೊಳ್ಳಬೇಕು. ಅರ್ಹರನ್ನು ಮತದಾರ ಪಟ್ಟಿಗೆ ಸೇರಿಸಬೇಕು. ಅದರ ಜತೆಗೆ ಬೂತ್ ಸಮಿತಿ ಬಡತನ ನಿವಾರಣೆಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನುಷ್ಠಾನಿಸುತ್ತಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ವಸತಿ ಯೋಜನೆಯಂತಹ ಜನಪರ ಕಾರ್ಯಕ್ರಮಗಳು ಅರ್ಹರಿಗೆ ತಲಪುವುದನ್ನು ಖಾತರಿಪಡಿಸುವ ಹೊಣೆ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ನಡೆದ ಮತ್ತು ನಡೆಯುತ್ತಿರುವ ಪ್ರಯತ್ನಗಳನ್ನು ವಿವರಿಸಿದರು. ಬ್ಲಾಕ್ ಅಧ್ಯಕ್ಷ ಎಸ್. ಮದನ್‌ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರೂಪಿಸಿದ ನಾಗರಾಜ ವಂದಿಸಿದರು. ಕೆಪಿಸಿಸಿ ಕಾರ್ಯದರ್ಶಿ ಎಂ. ಎ. ಗಫೂರ್, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲ್ಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ, ಪ್ರಮೀಳಾ ದೇವಾಡಿಗ, ಜಗದೀಶ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ದುರ್ಗಮ್ಮ, ಉಪಾಧ್ಯಕ್ಷೆ ಸಿಂಗಾರಿ ಶೆಟ್ಟಿ, ವಿವಿಧ ಘಟಕಗಳ ಅಧ್ಯಕ್ಷರಾದ ಮಂಜುನಾಥ ಖಾರ್ವಿ, ಸುಬ್ರಹ್ಮಣ್ಯ ಪೂಜಾರಿ, ಪಿ. ಎಲ್. ಜೋಸ್, ಗೋಕುಲ್ ಶೆಟ್ಟಿ, ನಾಗರಾಜ ಗಾಣಿಗ, ಬ್ಲಾಸಮ್ ಫೆರ್ನಾಂಡಿಸ್, ಇತರರು ಇದ್ದರು.

ಇದೇ ಸಂದರ್ಭದಲ್ಲಿ ಬರದ ಕಾರಣ ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದ ರೈತರು ಮರುಪಾವತಿಸಲಾಗದ ದುಸ್ಥಿತಿಯಲ್ಲಿರುವುದರಿಂದ ವಸೂಲಿಯನ್ನು ಒಂದು ವರ್ಷ ಮುಂದೂಡಲು ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನು ಬ್ಲಾಕ್ ಕಾಂಗ್ರೆಸ್ ಆಸ್ಕರ್ ಫೆರ್ನಾಂಡಿಸ್ ಮತ್ತು ಗೋಪಾಲ ಪೂಜಾರಿ ಅವರಿಗೆ ಸಲ್ಲಿಸಿತು.

Exit mobile version