Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಮಂತ್ರಾಲಯದ ಶಾಖಾ ಮಠಕ್ಕೆ ಮಂತ್ರಾಲಯ ಪೀಠಾಧಿಪತಿ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠವೆಂದರೆ ಒಂದು ರೀತಿಯಲ್ಲಿ ಸೂಪರ್ ಬಜಾರ್ ಇದ್ದಹಾಗೆ. ಅಲ್ಲಿ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ದೊರೆಯುವಂತೆ ಮಠಕ್ಕೆ ಬರುವ ಭಕ್ತರ ಎಲ್ಲಾ ಕೋರಿಕೆಗಳಿಗೂ ರಾಯರು ಸ್ಪಂದಿಸುವ ಮೂಲಕ ತಕ್ಷಣ ಪೂರೈಸಲಾಗುತ್ತದೆ ಎಂದು ಮಂತ್ರಾಲಯ ಪೀಠಾಧಿಪತಿ ಶ್ರೀಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಹೇಳಿದರು.

ಉಪ್ಪುಂದದಲ್ಲಿರುವ ಮಂತ್ರಾಲಯದ ಶಾಖಾ ಮಠಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು. ಕಾಮಧೇನು, ಕಲ್ಪವೃಕ್ಷಗಳನ್ನು ಭಕ್ತಿ, ಶೃದ್ಧೆಯಿಂದ ಮೈಮರೆತು ಪೂಜಿಸಿ, ತಾಳತಟ್ಟುತ್ತಾ ಭಜಿಸುವುದರಿಂದ ಪ್ರಸನ್ನೀಕರಿಸಿಕೊಂಡಾಗ ಮಾತ್ರ ಜ್ಞಾನ ಪ್ರಾಪ್ತಿ, ಭೂತ-ಪ್ರೇತ ಬಾಧೆ, ಸಕಲ ರೋಗೋಪದ್ರವಗಳು ಕೂಡಾ ಪರಿಹಾರವಾಗುತ್ತದೆ. ಭವರೋಗವೈದ್ಯ ಎನಿಸಿಕೊಂಡ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಪ್ರತ್ಯಕ್ಷ ದೇವರು ಎಂದರು.

ಉಪ್ಪುಂದ ಶಾಖಾಮಠದ ಸ್ಥಳದಾನಿ ಹಾಗೂ ಉಸ್ತುವಾರಿ ಯು. ಸತ್ಯನಾರಾಯಣ ಪುರಾಣಿಕ್ ದಂಪತಿಗಳು ಸ್ವಾಮೀಜಿಯವರನ್ನು ಮಠಕ್ಕೆ ಬರಮಾಡಿಕೊಂಡರು ಕರ್ನಾಟಕ ಬ್ಯಾಂಕಿನ ಜನರಲ್ ಮೇನೆಜರ್ ಉಪ್ಪುಂದ ಸುಭಾಸ್ ಪುರಾಣಿಕ ಮತ್ತು ಸಹೋದರರು ಕೊಡಮಾಡಿದ ರಜತ ಕವಚವನ್ನು ರಾಯರಿಗೆ ಸಮರ್ಪಿಸಲಾಯಿತು. ನಂತರ ಸ್ವಾಮೀಜಿಯವರು ಪಕ್ಕದ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭ ನೂರಾರು ಭಕ್ತಾದಿಗಳು ಇದ್ದರು.

ಫಲಿಮಾರು ಮಠಾಧೀಶರ ಆಹ್ವಾನದ ಮೇರೆಗೆ ಕುಂಜಾರುಗಿರಿಯಲ್ಲಿ ಆಚಾರ್ಯ ಮಧ್ವರ ಏಕಶಿಲಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ಕೆ ಆಗಮಿಸಿದ ಮಂತ್ರಾಲಯ ಶ್ರೀಗಳು ವಾಪಾಸು ಕೊಪ್ಪಳ ಜಿಲ್ಲೆಯ ಯಲಬುರ್ಗಾಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಉಪ್ಪುಂದ ಶಾಖಾಮಠಕ್ಕೆ ಭೇಟಿ ನೀಡಿದ್ದರು.

Exit mobile version