Kundapra.com ಕುಂದಾಪ್ರ ಡಾಟ್ ಕಾಂ

ಕ್ರೀಯಾಶೀಲ ಬದುಕಿಗೆ ಕೈತೋಟ ನಿರ್ವಹಣೆ ಉತ್ತಮ ಉಪಾಯ: ವಿ. ಹೆಚ್ ನಾಯಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತೋಟಗಾರಿಕೆ ಮತ್ತು ಕೈತೋಟ ನಿರ್ವಹಣೆ ಜೀವಿಗಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸಬಲ್ಲುದು. ಮಣ್ಣು ಗುಣವಿಶೇಷತೆ ಮತ್ತು ಹವಮಾನಕ್ಕನುಸಾರವಾಗಿ ಪ್ರೀತಿಯಿಂದ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಾವು ಜೀವನವನ್ನು ನೋಡುವ ದೃಷ್ಠಿಕೋನವೇ ಬದಲಾಗಬಲ್ಲುದು. ಕ್ರೀಯಾಶೀಲ ಬದುಕಿಗೆ ಕೈತೋಟ ನಿರ್ವಹಣೆ ಉತ್ತಮ ಉಪಾಯ ಎಂದು ನಿವೃತ್ತ ಕೃಷಿ ಅಧಿಕಾರಿ ವಿ. ಹೆಚ್ ನಾಯಕ್ ಹೇಳಿದರು.

ಅವರು ಉಪ್ಪುಂದ ಶಂಕರ ಕಲಾ ಮಂದಿರದ ಸಮೃದ್ಧ್ ಸಭಾ ಭವನದಲ್ಲಿ ನಡೆದ ತೋಟಗಾರಿಕೆ ಮತ್ತು ಕೈತೋಟ ನಿರ್ವಹಣೆ ಕುರಿತು ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು. ಭಾಗವಹಿಸಿದ ಆಸಕ್ತರ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತ, ಸಂದೇಹ ನಿವಾರಿಸಿ ಉಪಯುಕ್ತ ಮಾಹಿತಿ ಮತ್ತು ತರಕಾರಿ ಬೀಜಗಳ ಸ್ಯಾಂಪಲ್ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಸುದ್ಧಿಮನೆ ವಾರ ಪತ್ರಿಕೆಯ ಸಂಪಾದಕ ಸಂತೋಷ್ ಕೋಣಿ ಮಾತನಾಡಿ ಜೀವನ ಶುದ್ಧಿಯಾಗಬೇಕಾದರೆ ಮನುಷ್ಯನ ಮನಸ್ಸು ಮತ್ತು ವಾತಾವರಣ ಶುದ್ಧಿಯಾಗಬೇಕು. ವನಸ್ಪತಿಗಳು ಕಲುಷಿತ ಗಾಳಿಯನ್ನು ಉಪಯುಕ್ತ ಆಕ್ಸಿಜನ್ ಆಗಿ ಪರಿವರ್ತಿಸುವಲ್ಲಿ ವಹಿಸಿ ಗೋವುಗಳ ಪಾತ್ರ ಮಹತ್ತರವಾದದ್ದು ಎಂದರು.

ವೈಷ್ಣವಿ ಮತ್ತು ಜ್ಯೋತಿ ಎಸ್. ಮಯ್ಯ ರವರು ಸುಶ್ರಾವ್ಯವಾಗಿ ಸುಗಮ ಸಂಗೀತ- ಭಾವಗೀತೆ ಪ್ರಸ್ತುತಪಡಿಸಿದರು.

ಮೆಸ್ಕಾಂ ಅಧಿಕಾರಿ ಗಾಯತ್ರಿ ರಾಮ ವಿಚಾರ ವಿನಿಮಯ ಮಾಡಿಕೊಂಡರು. ಸಂಪನ್ಮೂಲ ವ್ಯಕ್ತಿ ವಿ.ಹೆಚ್. ನಾಯಕ್ ಅವರನ್ನು ಸನ್ಮಾನಿಸಲಾಯಿತು. ಮಾತೃ ಮಂಡಳಿಯ ಸದಸ್ಯೆ ಮುಕುಂದ ಪ್ರಾರ್ಥಿಸಿದರು. ಸಂದೇಶ ಭಟ್ ಕಾರ್ಯಕ್ರಮ ನಿರೂಪಿಸಿದರು. ಪುಂಡಲೀಕ ನಾಯಕ್ ಸ್ವಾಗತಿಸಿದರು. ಮಂಜುನಾಥ ಎಸ್. ಬಿಜೂರು ವಂದನಾರ್ಪಣೆಗೈದರು.

Exit mobile version