Kundapra.com ಕುಂದಾಪ್ರ ಡಾಟ್ ಕಾಂ

ಶಂಕರರ ತತ್ವಗಳು ಉನ್ನತಿಯೆಡೆಗೆ ಕೊಂಡೊಯ್ಯುವ ದಾರಿದೀಪ: ಚಕ್ರವರ್ತಿ ಸೂಲಿಬೆಲೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಲಿತ-ಬ್ರಾಹ್ಮಣ, ಮೇಲು-ಕೀಳು, ಬಡವ-ಶ್ರೀಮಂತರೆಂಬ ಭೇದವಿಲ್ಲದೇ ಎಲ್ಲರಲ್ಲೂ ಭಗವಂತನನ್ನು ಕಂಡು ಜಗತ್ತಿಗೆ ಮಾರ್ಗದರ್ಶನ ನೀಡಿದ ಶಂಕರರ ಜೀವನದ ತತ್ವಗಳು ನಮ್ಮೆಲ್ಲರನ್ನು ಪ್ರೀತಿ, ವಿಶ್ವಾಸದ ತಳಹದಿಯ ಮೇಲೆ ಉನ್ನತಿಯೆಡೆಗೆ ಕೊಂಡೊಯ್ಯುವ ದಾರಿದೀಪವಾಗಿದೆ. ಶಂಕರರು ತೋರಿದ ದಾರಿಯಲ್ಲಿ ನಡೆದಾಗ ಮನುಷ್ಯ ಮಹಾತ್ಮನಾಗಲು ಸಾಧ್ಯ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದಲ್ಲಿ ನೃಸಿಂಹಾಶ್ರಮ ಸ್ವಾಮೀಜಿ ಅವರ ಪೂರ್ಣಾನುಗ್ರಹದಲ್ಲಿ ನಡೆದ ಶಂಕರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು.

ವಿಶ್ವದಲ್ಲಿ ಭಾರತ ಶ್ರೇಷ್ಠ ಸ್ಥಾನವನ್ನು ಅಲಂಕರಿಸಲು ಸಾಧು ಸಂತರು, ಮಹಾತ್ಮರ ಕೊಡುಗೆ ಅಪಾರವಾಗಿದೆ. ಅವರ ಅವಿರತ ಪರಿಶ್ರಮದ ಫಲದಿಂದ ಜಗತ್ತು ಭಾರತವನ್ನು ಗಮನಿಸುವಂತಾಗಿದೆ ಇಂತಹ ಕಾಲಘಟ್ಟದಲ್ಲಿ ಜಾತಿ ಮತ ಪಂಥಗಳ ಭೇಧವನ್ನು ತೊಡೆದು ಹಾಕಿ ವಿಶ್ವಮಾನವತೆಯನ್ನು ಸಾರುವ ಕಾರ್ಯ ನಾವುಗಳು ಮಾಡಿದಾಗ ಸಾರ್ಥಕತೆ ಕಂಡುಕೊಳ್ಳುವ ಜೊತೆಗೆ ಶಾಂತಿ, ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದು ಚಕ್ರವರ್ತಿ ಸೂಲಿಬಲೆ ಹೇಳಿದರು.

ಶ್ರೀಮಠದ ನೃಸಿಂಹಾಶ್ರಮ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಶಂಕರರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ, ಸೇವೆಯ ಹಾದಿಯಲ್ಲಿ ಭಗವಂತನ ಪ್ರೀತಿ ಗಳಿಸಲು ಸಾಧ್ಯವಿದೆ. ಪರಿಸರದ ಕಾಳಜಿ, ಕಣ್ಮರೆಯಾಗುತ್ತರುವ ಔಷಧೀಯ ಸಸ್ಯಗಳ ಪೋಷಣೆ, ಗೋಪಾಲನೆ ಅತ್ಯಗತ್ಯವಾಗಿದ್ದು ನಮ್ಮೆಲ್ಲರ ದುರಿತಗಳನ್ನು ದೂರಮಾಡುತ್ತದೆ ಎಂದರು.

ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ತಾಳ್ಮೆ ಇದ್ದಲ್ಲಿ ಅಭೀಷ್ಟಗಳು ಸಿದ್ಧಿಯಾಗುತ್ತದೆ. ನಮ್ಮ ಸಂಸ್ಕೃತಿಯ ಉಳಿವಿಗೆ ಶಂಕರರ ಕೊಡುಗೆ ಅಪಾರ ಎಂದರು.
ಸುಳ್ಯದ ಶಾಸಕ ಕೆ.ಅಂಗಾರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಂಕರ ಜಯಂತಿ ಸಭಾದ ಅಧ್ಯಕ್ಷ ನಿರಂಜನ ಭಟ್, ಬೆಳ್ತಂಗಡಿಯ ಶ್ಯಾಮಸುಂದರ್, ಶಂಭು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಶಾಲಾ ಮಕ್ಕಳಿಗೆ ನಡೆಸಿದ ಶಂಕರರ ಕುರಿತು ವಿವಿಧ ಸ್ಪರ್ಧೆಗಳು, ಸಾರ್ವಜನಿಕರಿಗೆ ನಡೆಸಿದ ರಂಗವಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಸುಪಾಸಿನ ಶಾಲಾ ಮಕ್ಕಳಿಗೆ ಶ್ರೀಮಠದಿಂದ ಉಚಿತ ಪುಸ್ತಕ ವಿತರಣೆ, ಆರ್ಥಿಕವಾಗಿ ಅಶಕ್ತರಾಗಿ ಕಲಿಕೆಯಲ್ಲಿ ಪ್ರತಿಭಾವಂತರಾಗಿರುವ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ಮಾಡಲಾಯಿತು. ಭ್ರಮರಾಂಬ ಮಹಿಳಾ ಮಂಡಳಿಯವರಿಂದ ಭಗವನ್ನಾಮ ಸಂಕೀರ್ತನೆ, ಚೆಂಡೆವಾದನ, ಪ್ರಸಿದ್ಧ ಕಲಾವಿದರಿಂದ ಶಂಕರ ವಿಜಯ ವಿಶೇಷ ತಾಳಮದ್ದಳೆ ನಡೆಯಿತು. ಗಣೇಶ್ ಚೆಲ್ಲಮಕ್ಕಿ ಸ್ವಾಗತಿಸಿದರು. ಶ್ರೀಕಾಂತ್ ಸಾಮಂತ್, ರಶ್ಮಿರಾಜ್ ಕಾರ್ಯಕ್ರಮ ನಿರೂಪಿಸಿದರು.

Exit mobile version