Kundapra.com ಕುಂದಾಪ್ರ ಡಾಟ್ ಕಾಂ

ದಲಿತರ ಸಮಸ್ಯೆ ಪರಿಹಾರಕ್ಕೆ ಇಲಾಖೆ ಸದಾ ಸಿದ್ಧ: ಕುಂದು ಕೊರತೆ ಸಭೆಯಲ್ಲಿ ಡಿವೈಎಸ್ಪಿ ಪ್ರವೀಣ್ ನಾಯ್ಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮ ಬೀಟ್ ಪೊಲೀಸ್ ಜೊತೆ ದಲಿತ ಮುಖಂಡರು ನಿರಂತರ ಸಂಪರ್ಕದಲ್ಲಿದ್ದು, ಏನಾದರೂ ಸಮಸ್ಯೆ ಇದ್ದರೆ ಬೀಟ್ ಪೊಲೀಸರ ಗಮನಕ್ಕೆ ತನ್ನಿ ಠಾಣೆಗೆ ಹೋಗುವ ಸಂದರ್ಭ ಬಂದರೆ ಬೀಟ್ ಪೊಲೀಸರ ಜೊತೆ ಹೋದರೆ ಅವರು ನಿಮ್ಮ ಸಮಸ್ಯೆ ಪರಿಹಾರ ನೀಡಲು ಸಹಕಾರ ಮಾಡುತ್ತಾರೆ ಎಂದು ಕುಂದಾಪುರ ಡಿಎಸ್ಪಿ ಪ್ರವೀಣ್ ಹೆಚ್. ನಾಯ್ಕ್ ಹೇಳಿದರು.

ಅವರು ಕುಂದಾಪುರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮದಲ್ಲಿ ಅಕ್ರಮ ಸಾರಾಯಿ ದಂದೆ ನಡೆಯುತ್ತಿದ್ದು, ಅಬಕಾರಿ ಇಲಾಖೆ ಗಮನಕ್ಕೆ ತಂದರೆ ಅವರು ಅಕ್ರಮ ಮದ ಮಾರಾಟ ಮಾಡುವವವರಿಗೆ ಮಾಹಿತಿ ನೀಡಿ, ದಾಳಿ ನಡೆಸುವುದರಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ನಾರಾಯಣ ಕಿರಿಮಂಜೇಶ್ವರ ಆರೋಪಿಸಿದ್ದು, ಉತ್ತರಿಸಿದ ಡಿಎಸಿ,ಅಬಕಾರಿ ಇಲಾಖೆ ಗಮನಕ್ಕೆ ತಂದು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.

ತಲ್ಲೂರು ಗ್ರಾಮ ಉಪ್ಪಿನಕುದ್ರು ದಲಿತ ಕುಟುಂಬ ಕಳೆದ ೨೦ ವರ್ಷದಿಂದ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಹಾಕಿದರೂ ಮೆಸ್ಕಾಂ ಸಂಪರ್ಕ ನೀಡುತ್ತಿಲ್ಲ. ಅದೇ ಪರಿಸರದ ಬೇರೆ ಬೇರೆ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿ ಮೆಸ್ಕಾಂ ತಾರತಮ್ಯ ಮಾಡುತ್ತಿದೆ. ದಲಿತ ಕುಟುಂಬಕ್ಕೆ ತಕ್ಷಣ ವಿದ್ಯುತ್ ಸಂಪರ್ಕ ನೀಡುವಂತೆ ಸ್ಥಳೀಯ ದಲಿತ ಮುಂಡರು ಒತ್ತಾಯಿಸಿದರು.

ಸುಳ್ಳು ದೂರು ನೀಡಿ ದಲಿತ ಕುಟುಂಬದ ಕುಡಿಯುವ ನೀರಿನ ವ್ಯವಸ್ಥೆ ನಿರಾಕರಿಸಲಾಗಿದೆ. ನಾವು ಯಾರಿಗೂ ಕುಡಿಯುವ ನೀರಿU ಅಡ್ಡಗಾಲಿಕ್ಕಿಲ್ಲ. ಆದರೂ ಸುಳ್ಳು ದೂರು ನೀಡಿದ್ದು, ಅದು ದಲಿತ ವಿರೋದಿ ಆಗಿದ್ದರಿಂದ ದೂರು ನೀಡಿದವರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುವಂತೆ ದಲಿತ ಮಹಾ ಒಕ್ಕೂಟ ಅಧ್ಯಕ್ಷ ಉದಯ ಕುಮಾರ್ ತಲ್ಲೂರು ಒತ್ತಾಯಿಸಿದರು.

ಅಕ್ರಮ ಮರಗಳುಗಾರಿಕೆ ನಡೆಯುತ್ತಿದ್ದರೂ ಅದನ್ನು ತಡೆಯುತ್ತಿಲ್ಲ. ರಾತ್ರಿ ಮರಳು ಸಾಗಾಟ ನಡೆಯುತ್ತಿದೆ. ಹಳ್ನಾಡಿನಲ್ಲಿ ಮತ್ತೆ ಮರಳು ತೆಗೆಯಲಾಗುತ್ತಿದ್ದು, ಯಾರಿಗೆಪರವಾನಿಗೆ ನೀಡಲಾಗುದೆ ಎಂಬ ಸಂಪೂರ್ಣ ಮಾಹಿತಿ ನೀಡಿ.ಅಕ್ರಮ ಮರಳು ತೆಗೆಯುವ ಬಗ್ಗೆ ದೂರು ನೀಡದವರ ಮೇಲೆ ಹಲ್ಲೆ ನಡೆಯುತ್ತಿದೆ.ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್, ಕುಂದಾಪುರ ಪಿಎಸ್ಸೈ ನಾಸೀರ್ ಹುಸೇನ್, ಗಂಗೊಳ್ಳಿ ಪಿಎಸ್ಸೈ ಸುಬ್ಬಣ್ಣ, ಬೈಂದೂರು ಪಿಎಸ್ಸೈ ಸಂತೋಷ್ ಕಾಯ್ಕಿಣಿ, ಕೊಲ್ಲೂರು ಪಿಎಸ್ಸೈ ಶೇಖರ್ ಮೊದಲಾದವರು ಇದ್ದರು.

Exit mobile version