Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ: ಶಾಸಕ ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಗಾಂಧಿಪಥ-ಗ್ರಾಮಪಥ ಯೋಜನೆಯಡಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಂದಾಜು 22.01 ಕೋಟಿ ರೂಪಾಯಿ ವೆಚ್ಚದಲ್ಲಿ 13 ಕಾಮಗಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಎಸ್‌ಇಪಿ ಯೋಜನೆಯಡಿಯಲ್ಲಿ 1 ಕೋಟಿ ರೂಪಾಯಿ ಅನುದಾನ ಕ್ಷೇತ್ರಕ್ಕೆ ಮಂಜೂರಾಗಿದ್ದು ಇದರ ಸದ್ಭಳಿಕೆಯನ್ನು ಮಾಡಲಾಗುವುದು ಎಂದು ಬೈಂದೂರು ಕ್ಷೇತ್ರದ ಶಾಸಕ ಹಾಗೂ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಹೇಳಿದರು. ಹೊಸಾಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬಾವಿ ಸೇತುವೆಗೆ ಕಾಯಕಲ್ಪ:
ವೈಯಕ್ತಿಕ ಬಾವಿ ನಿರ್ಮಾಣಕ್ಕಾಗಿ ಹಾಗೂ ರಸ್ತೆ ಅಭಿವೃದ್ಧಿಗಾಗಿ ಕರ್ನಾಟಕ ನೀರಾವರಿ ಅಭಿವೃದ್ಧಿ ನಿಗಮದ ವರಾಹಿ ಯೋಜನೆಯಡಿಯಲ್ಲಿ ತಲಾ 4.5 ಕೋಟಿ ಅನುದಾನವನ್ನು ಕಾಯ್ದಿಡಲಾಗಿದೆ. ವಂಡ್ಸೆಯ ಮೋರ್ಟ್ ಸೇತುವೆ, ಕಟ್‌ಬೇಲ್ತೂರು ಬಾಳಿಕೆರೆ ರಸ್ತೆ ಸೇರಿದಂತೆ ಕ್ಷೇತ್ರದ ಜನರ ಅಗತ್ಯತೆಗಳಿಗೆ ಆದ್ಯತೆ ನೀಡಿ ಲೋಕೋಪಯೋಗಿ ಇಲಾಖೆಯ ವಿವಿಧ ಅನುದಾನಗಳನ್ನು ಜೋಡಿಸಿಕೊಂಡು ಕ್ಷೇತ್ರ ವ್ಯಾಪ್ತಿಯಲ್ಲಿ ಅಂದಾಜು 60 ಕೋಟಿ ರೂಪಾಯಿ ಕಾಮಗಾರಿಗೆ ಮಂಜೂರಾತಿ ಪಡೆದುಕೊಳ್ಳಲಾಗಿದ್ದು. ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆಗಳನ್ನು ಪೂರೈಸಿ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಅಂದಾಜು 7 ಕೋಟಿ ವೆಚ್ಚದ ಮೊವಾಡಿ-ನಾಡಾ ಸೇತುವೆಯ ಕಾಮಗಾರಿಯೂ ಶೀಘ್ರದಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇರುವುದಾಗಿ ತಿಳಿಸಿದರು.

ರಸ್ತೆ ಕಾಮಗಾರಿ:
ನಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡವು, ಸೇನಾಪುರ, ಬಡಾಕೆರೆ ಸೇರಿದಂತೆ ಕ್ಷೇತ್ರದ ಹಲವು ಭಾಗದ ತುರ್ತು ಕಾಮಗಾರಿಗಳಿಗೆ ಆದ್ಯತೆ ನೀಡಿ ಆರ್‌ಡಿಪಿಆರ್ ಅನುದಾನದಲ್ಲಿ 10 ಕೋಟಿ ಮಂಜೂರಾತಿ ಪಡೆದುಕೊಳ್ಳಲಾಗಿದ್ದು, ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು. ಮರವಂತೆಯ ಸಮುದ್ರ ತೀರ ಪ್ರದೇಶದಲ್ಲಿ ಸಮುದ್ರ ಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡುವ ಉದ್ದೇಶದಿಂದ ವಿಶ್ವ ಬ್ಯಾಂಕ್ ನೆರವಿನಿಂದ 102 ಕೋಟಿ ಯೋಜನೆಯ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಆಧುನೀಕ ತಂತ್ರಜ್ಞಾನದ ನೆರವಿನಲ್ಲಿ ಕಾಮಗಾರಿ ನಡೆಯಲಿದೆ. ಮಡಿಕಲ್ ಬಂದರು ಅಭಿವೃದ್ಧಿಗಾಗಿ ಅಂದಾಜು 96 ಕೋಟಿ ಪ್ರಾಸ್ತಾವನೆ ಸಲ್ಲಿಸಲಾಗಿದ್ದು, ಇಲಾಖೆಯ ಒಪ್ಪಿಗೆ ದೊರೆತಲ್ಲಿ, ಸಂಪುಟದಿಂದ ಅನುಮತಿ ದೊರಕಿಸಲು ಪ್ರಯತ್ನಿಸಲಾಗುವುದು. ಮಾರಸ್ವಾಮಿ-ಪಡುಕೋಣೆ ಹಾಗೂ ಕನ್ನಡಕುದ್ರು ಸೇತುವೆಗಳ ಕಾಮಗಾರಿ ಮುಗಿದಿದ್ದು, ಅಧಿವೇಶನ ಮುಗಿದ ಬಳಿಕ ಲೋಕೋಪಯೋಗಿ ಸಚಿವರನ್ನು ಆಹ್ವಾನಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಪೂಜಾರಿ ತಿಳಿಸಿದರು.

ಬಸ್ ಸೇವೆ:
ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಿಗಮವನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಾಗೂ ಸಾಮಾನ್ಯ ನಾಗರೀಕರ ಅವಶ್ಯಕತೆಗಳಿಗೆ ಅನುಗುಣವಾಗಿ ಹಲವು ಬಸ್ಸುಗಳನ್ನು ಹಾಕಲಾಗಿದೆ. ಜನರ ಬೇಡಿಕೆಗೆ ಅನುಗುಣವಾಗಿ ಇನ್ನಷ್ಟು ಪರವಾನಿಗೆಗಾಗಿ ಅರ್ಜಿ ಸಲ್ಲಿಸಲಾಗಿದೆ. ಪರವಾನಿಗೆ ದೊರೆಕಿದ ಬಳಿಕ ಇನ್ನಷ್ಟು ಬಸ್ಸುಗಳನ್ನು ಹಾಕಲಾಗುವುದು. ಭಟ್ಕಳ-ಮಂಗಳೂರು, ಉಡುಪಿ-ಆಗುಂಬೆ, ಬೈಂದೂರು-ಬೆಂಗಳೂರು, ಕೊಲ್ಲೂರು-ಬೆಂಗಳೂರು, ಕುಂದಾಪುರ-ಬೆಂಗಳೂರು ಸೇರಿದಂತೆ ಹಲವು ಮಾರ್ಗಗಳಲ್ಲಿ ಹೊಸ ಬಸ್ಸು ಸಂಚಾರ ಆರಂಭಿಸಲಾಗಿದೆ. ಮಂಗಳೂರು ರೈಲ್ವೆ ನಿಲ್ದಾಣದಿಂದ ಕೊಲ್ಲೂರಿಗೆ ಹಾಗೂ ಭಟ್ಕಳದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ಸು ಸಂಚರಿಸುವ ಬಗ್ಗೆ ಪರವಾನಿಗಿ ನೀಡಲು ಕೋರಲಾಗಿದ್ದು, ಅನುಮತಿ ಬಂದ ಬಳಿಕ ಈ ಮಾರ್ಗದಲ್ಲಿಯೂ ಸಂಚಾರ ಪ್ರಾರಂಭಿಸಲಾಗುವುದು ಎಂದು ತಿಳಿಸಿದ ಅವರು ಬೈಂದೂರು ಒತ್ತಿನೇಣೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಗಲ್ಫ ರಾಷ್ಟ್ರದಲ್ಲಿ ನೆಲೆಸಿರುವ ಸ್ಥಳೀಯರು ನೀಡಿರುವ ಮನವಿಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರುವ ಕುರಿತು ಭರವಸೆ ನೀಡಿದ್ದಾರೆ ಎಂದು ನುಡಿದರು.

ಕರಾವಳಿ ಜಿಲ್ಲೆಗೆ ನೀಡುವ ಸುನಾಮಿ ಪ್ಯಾಕೇಜ್‌ನಲ್ಲಿ 3 ಪ್ಯಾಕೇಜ್‌ಗಳು ಬೈಂದೂರು ಕ್ಷೇತ್ರಕ್ಕೆ ದೊರೆಕಿದ್ದು ಅಂದಾಜು 12 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಯಡಮೊಗೆ ಸೇತುವೆಯ ಪರಿಶೀಲನೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆರಾಡಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಯೋಜನೆಗಾಗಿ ವಿಶೇಷ ಅನುದಾನ ನೀಡಲಾಗುವುದು ಎಂದು ಹೇಳಿದ ಶಾಸಕ ಗೋಪಾಲ ಪೂಜಾರಿಯವರು ವಂಡ್ಸೆ ಹೋಬಳಿಯನ್ನು ನೂತನವಾಗಿ ಘೋಷಣೆಯಾಗಿರುವ ಬೈಂದೂರು ತಾಲ್ಲೂಕಿಗೆ ಸೇರ್ಪಡೆಗೊಳಿಸದೆ, ಕುಂದಾಪುರ ತಾಲ್ಲೂಕಿನಲ್ಲಿಯೇ ಉಳಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್.ರಾಜು ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ್‌ಕುಮಾರ ಶೆಟ್ಟಿ ಮುನಿಯಾಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಮದನ್‌ಕುಮಾರ ಉಪ್ಪುಂದ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೌರಿ ದೇವಾಡಿಗ, ಜ್ಯೋತಿ ನಾಯ್ಕ್, ಪಕ್ಷದ ಪ್ರಮುಖರಾದ ಎಚ್.ಮಂಜಯ್ಯ ಶೆಟ್ಟಿ, ರಘುರಾಮ ಶೆಟ್ಟಿ ಬಿಜೂರು, ಗೋಕುಲ್ ಶೆಟ್ಟಿ, ಪ್ರದೀಪ್‌ಕುಮಾರ ಶೆಟ್ಟಿ ಕಾವ್ರಾಡಿ, ಅನಂತ ಮೊವಾಡಿ, ಚಂದ್ರಶೇಖರ ಪೂಜಾರಿ ಆರಾಟೆ ಇದ್ದರು.

Exit mobile version