Kundapra.com ಕುಂದಾಪ್ರ ಡಾಟ್ ಕಾಂ

ಡೀಮ್ಡ್ ಫಾರೆಸ್ಟ್ ಗುರುತಿಸಲು ಸರ್ಕಾರ ಸ್ವಷ್ಟ ನೋಟಿಪೀಕೇಶನ್ ಹೊರಡಿಸಬೇಕು: ಕೆ. ಪ್ರತಾಪ್‌ಚಂದ್ರ ಶೆಟ್ಟಿ ಒತ್ತಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿಲ್ಲೆಯಲ್ಲಿ ಆಕ್ರಮ-ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿರುವ ಎಷ್ಟೋ ಅರ್ಜಿಗಳನ್ನು ಇದೇ ರೀತಿಯ ಕುಂಟು ನೆವಗಳನ್ನು ಹೇಳಿ ತಡೆ ಹಿಡಿಯಲಾಗುತ್ತಿದೆ. ಬರಗಾಲವಿದೆ ಎನ್ನುವ ಕಾರಣವನ್ನು ನೀಡಿ ಬಿತ್ತನೆಯ ಬೀಜಗಳನ್ನು ನೀಡುವಲ್ಲಿಯೂ ಕೊರತೆಯನ್ನು ಕಾಣುವಂತಾಗಿದೆ. ಕೋಟೇಶ್ವರದಲ್ಲಿ ಹೆದ್ದಾರಿಯ ಬದಿಯಲ್ಲಿ ವಿಶಾಲವಾದ ಬೀಜ ಉತ್ಪಾದನ ಪ್ರದೇಶಗಳಿದ್ದರೂ, ಅದರ ಸಮರ್ಪಕ ಬಳಕೆಯಾಗಿಲ್ಲ. ಈ ಉದ್ದೇಶಕ್ಕಾಗಿ ಮೀಸಲಿರಿಸಿದ ಪ್ರದೇಶಗಳಲ್ಲಿ ಒಂದಷ್ಟು ಎಕ್ರೆ ಪ್ರದೇಶಗಳನ್ನು ಬೇರೆ ಉದ್ದೇಶಗಳಿಗಾಗಿ ನೀಡಲಾಗಿದೆ ಎಂದು ಹೇಳಿದ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು.

ಇಲ್ಲಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಹಾಗೂ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಲ್ಲಿ ಸರ್ಕಾರಿ ಸವಲತ್ತುಗಳನ್ನು ನೀಡಲು ಸ್ವಷ್ಟವಾದ ಮಾನದಂಡಗಳನ್ನು ಅನುಸರಿಸದೆ ಇದ್ದ ಕಾರಣದಿಂದಾಗಿ ಸರ್ಕಾರ ಉದ್ದೇಶದಂತೆ ಯೋಜನೆಗಳು ಫಲಾನುಭವಿಗಳಿಗೆ ದೊರಕುತ್ತಿಲ್ಲ. ಕಟಾವು ಮುಗಿದ ಬಳಿಕ ಭತ್ತದ ಬೀಜಗಳ ನ್ನು ಸಂಗ್ರಹಿಸುವ ದೊಡ್ಡ ಕಣಜಗಳು ತಾಲ್ಲೂಕಿನ ರೈತರಲ್ಲಿ ಲಭ್ಯವಿಲ್ಲದೆ ಇರುವುದರಿಂದ ಬೀಜಗಳನ್ನು ಸಂಗ್ರಹಿಸುವ ಗೋದಾಮುಗಳನ್ನು ತೆರೆಯಲು ಎಪಿಎಂಸಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸರ್ಕಾರಿ ಜಾಗದಲ್ಲಿ ಕೃಷಿ ಮಾಡಿಕೊಂಡಿರುವ, ಮನೆ ಹಾಗೂ ಕೊಟ್ಟಿಗೆ ಕಟ್ಟಿಕೊಂಡಿರುವ, ತೋಟ, ಗದ್ದೆಗಳನ್ನು ಮಾಡಿರುವ ಪ್ರದೇಶಗಳಲ್ಲಿ ಯಾರೋ ಎಲ್ಲಿಯೋ ಕುಳಿತು ಮಾಡಿರುವ ವರದಿಯ ಆಧಾರದಲ್ಲಿ ಅಲ್ಲಿ ಅರಣ್ಯ ಇದೆ, ಇದು ಡೀಮ್ಡ್ ಫಾರೆಸ್ಟ್ ಆಗುತ್ತದೆ ಎನ್ನುವ ಅಧಿಕಾರಿಗಳ ಧೋರಣೆ ಸರಿಯಲ್ಲ. ಎಲ್ಲಿ ನಿಜವಾಗಿ ಅರಣ್ಯ ಪ್ರದೇಶಗಳಿರುತ್ತದೆಯೋ ಅದನ್ನು ಡೀಮ್ಡ್ ಫಾರೆಸ್ಟ್ ಆಗಿ ಗುರುತಿಸಲು ನಮ್ಮ ಆಕ್ಷೇಪಗಳಿಲ್ಲ ಡೀಮ್ಡ್ ಫಾರೆಸ್ಟ್ ಪ್ರದೇಶಗಳನ್ನು ಗುರುತಿಸಲು ಅನೂಕೂಲವಾಗುವಂತೆ ಸರ್ಕಾರ ಸ್ವಷ್ಟವಾದ ನೋಟಿಪೀಕೇಶನ್ ಹೊರಡಿಸಬೇಕು ಎಂದು ಒತ್ತಾಯಿಸಿದರು.

ನೆರೆಯ ರಾಜ್ಯದಲ್ಲಿ ಇರುವಂತೆ ಇಲ್ಲಿಯೂ ಸಿಆರ್‌ಝಡ್ ನೀತಿಯ ಪರಿಷ್ಕರಣೆ ಆಗಬೇಕು ಎಂದು ರೈತ ಸಂಘ ಒತ್ತಾಯಿಸುತ್ತಿದ್ದರೂ, ಈ ವರೆಗೂ ಯಾವುದೆ ರೀತಿಯ ಆಶಾದಾಯಕ ತೀರ್ಮಾನ ಆಗಿಲ್ಲ. ಸದ್ಯದಲ್ಲಿಯೇ ಕರಾವಳಿ ತೀರ ಪ್ರದೇಶದ ಗ್ರಾಮ ಪಂಚಾಯಿತಿ ಮುಖ್ಯಸ್ಥರ ಹಾಗೂ ತೀರವಾಸಿಗಳ ಸಭೆ ಕರೆದು ಸಿಆರ್‌ಝಡ್ ನೀತಿಯ ಬಗ್ಗೆ ರೈತ ಸಂಘ ಹೋರಾಟದ ರೂಪರೇಷೆಯನ್ನು ತೀರ್ಮಾನಿಸಲಿದೆ. ತಾಲ್ಲೂಕಿನಲ್ಲಿರು ಉಪ್ಪು ನೀರಿನ ತಡೆಗೋಡೆ ಹಾಗೂ ವೆಂಟೆಂಡ್ ಡ್ಯಾಂಗಳ ನಿರ್ವಹಣೆಯ ಬಗ್ಗೆ ಚರ್ಚಿಸಲು ಉಸ್ತುವಾರಿ ಸಚಿವರ ನೇತ್ರತ್ವದಲ್ಲಿ ಸಭೆ ನಿಗದಿ ಮಾಡಿದ್ದರೂ, ಅಧಿಕಾರಿಗಳ ಕಾರಣದಿಂದ ಸಭೆ ಮುಂದಕ್ಕೆ ಹೋಗಿದೆ. ವ್ಯವಸ್ಥೆಯನ್ನೆ ನಿಯಂತ್ರಿಸುವ ಪರ್ಯಾಯ ವ್ಯವಸ್ಥೆಯಿಂದ ಸಭೆ ರದ್ದಾಗಿದ್ದರೂ, ಮುಂಬರುವ ದಿನಗಳಲ್ಲಿ ಸೂಕ್ತ ವೇದಿಕೆಯಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು.

ವರಾಹಿ ಯೋಜನೆಯ ಎಡದಂಡೆ ಯೋಜನೆಯಲ್ಲಿ ನಿರ್ಮಾಣವಾಗಿರುವ ಕಾಲುವೆಗಳ ಗುಣಮಟ್ಟ ಹಾಗೂ ನೀರು ಹರಿಯುವಿಕೆಯಿಂದಾಗಿ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಇಲಾಖಾ ಅಧಿಕಾರಿಗಳು ಗಮನ ಹರಿಸಬೇಕು. ಯೋಜನೆಯ ಎಡ ಹಾಗೂ ಬಲದಂಡೆಯ ಕಾಲುವೆಗಳು ಹಾಗೂ ಏತ ನೀರಾವರಿಯ ಅನುಷ್ಠಾನಗಳು ಸಮರ್ಪಕವಾಗಿ ನಡೆದರೆ ಉದ್ದೇಶಿತ ಯೋಜನೆಯ ಪೂರ್ಣ ಪ್ರಯೋಜನ ರೈತ ಹಾಗೂ ಕೃಷಿಕರಿಗೆ ದೊರಕಲಿದೆ. ಕೃಷಿ ಗದ್ದೆಗಳು ಹಾಗೂ ತೋಟಗಳಿಗೆ ರೈತರಿಂದ ವಿಮಾ ಕಂತುಗಳನ್ನು ಪಾವತಿಸಿಕೊಳ್ಳುವುದನ್ನು ಆರ್ಥಿಕ ಸಂಸ್ಥೆಗಳು ಕಡ್ಡಾಯಗೊಳಿಸದೆ ರೈತರ ಐಚ್ಚಿಕ ನಿರ್ಧಾರಕ್ಕೆ ಬೀಡುವುದು ಸೂಕ್ತ. ವಿಮಾ ಸೌಲಭ್ಯಗಳನ್ನು ನೀಡುವಲ್ಲಿ ಹೋಬಳಿ ಮಟ್ಟದ ವ್ಯಾಪ್ತಿಯನ್ನು ಪರಿಗಣಿಸದೆ ಕನಿಷ್ಠ ಗ್ರಾಮ ಮಟ್ಟದ ವ್ಯಾಪ್ತಿಯನ್ನು ಪರಿಗಣಿಸುವುದರಿಂದ ರೈತರಿಗೆ ಇದರ ಉಪಯೋಗಗಳು ದೊರಕುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಮರಳು ಅಭಾವ ಆಗಿರುವುದು ಕೆಲವು ಅವೈಜ್ಞಾನಿಕ ನಿರ್ಧಾರಗಳಿಂದ. ಜಿಲ್ಲೆಯ ಸಾಮಾನ್ಯ ಜನರ ಅಭಿಪ್ರಾಯಗಳಿಗೆ ಜಿಲ್ಲಾಡಳಿತ ಕಿವಿಯಾದರೆ ಖಂಡಿತವಾಗಿಯೂ ಇಲ್ಲಿನ ಮರಳು ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಮರಳು ಸಲೀಸಾಗಿ ದೊರಕದೆ ಇದ್ದಾಗಲೂ ಜನರಿಗೆ ದೊಡ್ಡ ತೊಂದರೆಯಾಗಿರಲಿಲ್ಲ, ಆದರೆ ಮರಳು ವ್ಯಾಪಾರಸ್ಥರ ಸಂಖ್ಯೆ ದೊಡ್ಡದಾದಾಗ ಮಾತ್ರ ಸಮಸ್ಯೆಯೂ ದೊಡ್ಡದಾಯಿತು ಎಂದು ಮಾರ್ವಿಕವಾಗಿ ಹೇಳಿದ ಪ್ರತಾಪ್ ಜಿಲ್ಲೆಯ ಗಡಿಭಾಗಳಲ್ಲಿ ಹೊರ ಸಾಗಾಟಕ್ಕೆ ಕಟ್ಟು ನಿಟ್ಟಿನ ನಿರ್ಭಂಧ ವಿಧಿಸಿ ಸಾಮಾನ್ಯ ಜನರಿಗೂ ಅವಶ್ಯಕತೆಗೆ ಅನುಗುಣವಾಗಿ ಮರಳು ದೊರಕಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸಭೆಯಲ್ಲಿ ಮಾತನಾಡಿದ ಬಿ.ಹಿರಿಯಣ್ಣ, ಕೆದೂರು ಸದಾನಂದ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ರವಿರಾಜ ಹೆಗ್ಡೆ, ಜಯರಾಮ ಶೆಟ್ಟಿ ಬೆಳ್ವೆ, ಸೀತಾರಾಮ ಗಾಣಿಗ, ಅಲ್ತಾರು ಸುರೇಂದ್ರ ಶೆಟ್ಟಿ, ಪ್ರದೀಪ್‌ಕುಮಾರ ಶೆಟ್ಟಿ ಕಾವ್ರಾಡಿ, ಕೆಂಚನೂರು ಸೋಮಶೇಖರ ಶೆಟ್ಟಿ, ಕೃಷ್ಣದೇವ ಕಾರಂತ ಕೋಣಿ, ಶಾಡಿಗುಂಡಿ ರಾಜೀವ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ರತ್ನಾಕರ ಶೆಟ್ಟಿ, ಪಹಣೆ ಪತ್ರಗಳನ್ನು ನೀಡುವ ಕ್ರಮವನ್ನು ಸರಳೀಕರಿಸಲು, ಅರಣ್ಯ ಇಲಾಖೆಯಿಂದ ಸಿಂಗಲ್ ಪರ್ಮಿಟ್ ವಿತರಣೆ, ಕುಮ್ಕಿ ಹಕ್ಕು, ಸಮುದ್ರ ಬದಿಯಲ್ಲಿನ ಬಿಳಿ ಮರಳು ತೆಗೆಯುವಿಕೆ ನಿಯಂತ್ರಣ, ಬೀಜಾಡಿ ಸಮುದ್ರ ಕಿನಾರೆ ಸಮೀಪದ ತೋಡಿಗೆ ವೆಟಂಡ್ ಡ್ಯಾಂ ರಚನೆ, ಕೊಜೆ ಗುಂಡಿಗಳ ಸಮಸ್ಯೆಯ ಪರಿಹಾರ, ವಿಶೇಷ ಭೂಸ್ವಾಧೀನಾಧಿಕಾರಿಯ ನೇಮಕ ಸೇರಿದಂತೆ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ರಾಜೂ ಪೂಜಾರಿ, ಕುಂದಾಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಸತೀಶ್ ಕಿಣಿ ಬೆಳ್ವೆ, ಮಲ್ಯಾಡಿ ಶಿವರಾಮ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಶರತ್‌ಕುಮಾರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಶೆಟ್ಟಿ ಹಕ್ಲಾಡಿ, ಹರಿಪ್ರಸಾದ್ ಶೆಟ್ಟಿ ಬಿದ್ಕಲ್‌ಕಟ್ಟೆ ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ವಿ ಪುತ್ರನ್ ಇದ್ದರು.

ಸಭೆಯ ಪ್ರಾರಂಭದಲ್ಲಿ ಈಚೆಗೆ ಆಕಸ್ಮಿಕ ಅವಘಡಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ಬೇಳೂರು ಗ್ರಾಮದ ದೇಲಟ್ಟುವಿನ ಕೃಷಿಕ ನರಸಿಂಹ ಶೆಟ್ಟಿ ಎನ್ನುವವರ ಪುತ್ರಿ ಭಾರತೀ ಶೆಟ್ಟಿ, ಅವರ ಇಬ್ಬರು ಮಕ್ಕಳಾದ ಪೃಥ್ವಿ ಶೆಟ್ಟಿ ಗೂ ಪ್ರಜ್ಞಾ ಶೆಟ್ಟಿ ಅವರ ಆತ್ಮ ಶೃದ್ದಾಂಜಲಿ ಅರ್ಪಿಸಲಾಯಿತು. ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ ಹೆಗ್ಡೆ ಸ್ವಾಗತಿಸಿದರು, ಪತ್ರಕರ್ತ ರಾಜೇಶ್ ಕೆ.ಸಿ ನಿರೂಪಿಸಿದರು, ಸಂತೋಷ್ ಶೆಟ್ಟಿ ಬಲಾಡಿ ವಂದಿಸಿದರು.

Exit mobile version